ತವರಿನಲ್ಲಿ 12 ವರ್ಷಗಳ ಬಳಿಕ ಟೆಸ್ಟ್ ಸರಣಿ ಸೋತು ಮುಖಭಂಗಕ್ಕೀಡಾಗಿರುವ ಟೀಂ ಇಂಡಿಯಾ ಆಟಗಾರರಿಗೆ ಇದೀಗ ಬಿಸಿಸಿಐ ಖಡಕ್ ವಾರ್ನಿಂಗ್ ಕೊಟ್ಟಿದೆ

ಮುಂಬೈ: ನ್ಯೂಜಿಲೆಂಡ್‌ ವಿರುದ್ಧ ಮೊದಲೆರಡು ಟೆಸ್ಟ್‌ ಪಂದ್ಯಗಳ ಸೋಲಿನ ಬಿಸಿ ಭಾರತೀಯ ಆಟಗಾರರಿಗೆ ತಟ್ಟಿದೆ. ಕೊನೆ ಪಂದ್ಯಕ್ಕೂ ಮುನ್ನ ಕಡ್ಡಾಯವಾಗಿ ಅಭ್ಯಾಸ ನಡೆಸುವಂತೆ ಆಟಗಾರರಿಗೆ ಬಿಸಿಸಿಐ ಸ್ಪಷ್ಟ ನಿರ್ದೇಶನ ನೀಡಿದೆ.

Add Asianetnews Kannada as a Preferred SourcegooglePreferred

ಭಾರತೀಯ ಆಟಗಾರರಿಗೆ ಕೆಲ ಪಂದ್ಯಗಳಿಗೂ ಮುನ್ನ ಅಭ್ಯಾಸ ಶಿಬಿರದ ಆಯ್ಕೆ ಇರುತ್ತದೆ. ಅಂದರೆ ಯಾವುದೇ ಆಟಗಾರನಿಗೂ ಶಿಬಿರಕ್ಕೆ ಹಾಜರಾಗದೆ ಇರಬಹುದು. ಆದರೆ ನ.1ರಿಂದ ಆರಂಭಗೊಳ್ಳಲಿರುವ ಮುಂಬೈ ಟೆಸ್ಟ್‌ಗೂ ಮುನ್ನ ಆಟಗಾರರಿಗೆ ಅಭ್ಯಾಸ ಆಯ್ಕೆ ಅಲ್ಲ, ಕಡ್ಡಾಯ ಎಂದು ಬಿಸಿಸಿಐ ತಿಳಿಸಿದ್ದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.

‘ಎಲ್ಲಾ ಆಟಗಾರರು ಅ.30 ಹಾಗೂ 31ರಂದು ಮುಂಬೈ ಕ್ರೀಡಾಂಗಣದಲ್ಲಿ ಅಭ್ಯಾಸ ಶಿಬಿರಕ್ಕೆ ಹಾಜರಾಗಬೇಕು. ಇದು ಕಡ್ಡಾಯ ಶಿಬಿರವಾಗಿದ್ದು, ಯಾರೂ ತಪ್ಪಿಸುವಂತಿಲ್ಲ’ ಎಂದು ತಂಡದ ಆಡಳಿತ ಆಟಗಾರರಿಗೆ ತಿಳಿಸಿದೆ ಎಂದು ತಿಳಿದುಬಂದಿದೆ.

ಭಾರತ ಮೊದಲ ಪಂದ್ಯದಲ್ಲಿ ಕಿವೀಸ್‌ನ ವೇಗದ ಬೌಲರ್‌ಗಳ ಮುಂದೆ ಮಂಕಾಗಿದ್ದರೆ, 2ನೇ ಪಂದ್ಯದಲ್ಲಿ ತಾನೇ ತೋಡಿದ್ದ ಸ್ಪಿನ್ ಖೆಡ್ಡಾಕ್ಕೆ ಬಿದ್ದಿತ್ತು. ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಸೇರಿದಂತೆ ಬಹುತೇಕ ಎಲ್ಲಾ ಬ್ಯಾಟರ್‌ಗಳು ಅಸ್ಥಿರ ಆಟವಾಡುತ್ತಿದ್ದು, ಕೊನೆ ಟೆಸ್ಟ್‌ನಲ್ಲಾದರೂ ದೊಡ್ಡ ಇನ್ನಿಂಗ್ಸ್‌ ಕಟ್ಟಬೇಕಾದ ಒತ್ತಡದಲ್ಲಿದ್ದಾರೆ.

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಲಾಮ್ ಲೇಥಮ್ ನೇತೃತ್ವದ ನ್ಯೂಜಿಲೆಂಡ್ ತಂಡವು 2-0 ಅಂತರದಲ್ಲಿ ಟೆಸ್ಟ್ ಸರಣಿ ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು 8 ವಿಕೆಟ್ ಅಂತರದ ಜಯ ಸಾಧಿಸಿತ್ತು. ಇದಾದ ಬಳಿಕ ಪುಣೆಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಕಿವೀಸ್ ತಂಡವು 113 ರನ್ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಇದಷ್ಟೇ ಅಲ್ಲದೇ ಇದೇ ಮೊದಲ ಬಾರಿಗೆ ಭಾರತದ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲುವಲ್ಲಿ ನ್ಯೂಜಿಲೆಂಡ್ ತಂಡವು ಯಶಸ್ವಿಯಾಗಿದೆ.