ರಾಜ್ಯ ತಂಡದ ಕೋಚ್ ಆಗಿ ಮುಂದುವರೆದ ಯೆರೆ ಗೌಡ
ಕರ್ನಾಟಕ ರಾಜ್ಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಯರೆ ಗೌಡ ಮುಂದುವರೆದಿದ್ದಾರೆ. ಇನ್ನು ಆಯ್ಕೆ ಸಮಿತಿ ಮುಖ್ಯಸ್ಥರಾಗಿ ಫಜಲ್ ಖಲೀಲ್ ಆಯ್ಕೆಯಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಬೆಂಗಳೂರು(ಮೇ.30): ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಹಿರಿಯ ಹಾಗೂ ಅಂಡರ್ 23 ವಿಭಾಗದ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ಫಜಲ್ ಖಲೀಲ್ರನ್ನು ಆಯ್ಕೆ ಮಾಡಲಾಗಿದೆ. ಯೆರೆ ಗೌಡ ಕೋಚ್ ಸ್ಥಾನದಲ್ಲೇ ಮುಂದುವರೆಯಲಿದ್ದಾರೆ.
ಫಜಲ್ ಖಲೀಲ್ 22 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದಾರೆ. ಈ ಮೊದಲು ರಘುರಾಮ್ ಭಟ್ ಕೆಎಸ್ಸಿಎ ಆಯ್ಕೆ ಸಮಿತಿ ಮುಖ್ಯಸ್ಥರಾಗಿದ್ದರು. ಇನ್ನು ಕರ್ನಾಟಕ ಪುರುಷರ ತಂಡಕ್ಕೆ ಯೆರೆ ಗೌಡ ಹಾಗೂ ಎಸ್. ಅರವಿಂದ್ ಕ್ರಮವಾಗಿ ಮುಖ್ಯ ಕೋಚ್ ಹಾಗೂ ಬೌಲಿಂಗ್ ಕೋಚ್ ಸ್ಥಾನದಲ್ಲಿ ಮುಂದುವರೆಯಲಿದ್ದಾರೆ.
ಯೆರೆಗೌಡ ಹಾಗೂ ಎಸ್. ಅರವಿಂದ್ ಮಾರ್ಗದರ್ಶನದಲ್ಲಿ ಕರ್ನಾಟಕ ತಂಡ ಅಮೋಘ ಪ್ರದರ್ಶನ ತೋರಿತ್ತು. ಸಯ್ಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ ಹಾಗೂ ವಿಜಯ್ ಹಜಾರೆ ಟ್ರೋಫಿಗಳನ್ನು ಜಯಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಅಂಡರ್ 19 ವಿಭಾಗಕ್ಕೆ ಆನಂದ ಪಿ. ಕಟ್ಟಿ ಮುಖ್ಯಸ್ಥರಾಗಿದ್ದಾರೆ. ಅಂಡರ್ 16 ಮತ್ತು 14 ವಿಭಾಗಕ್ಕೆ ಎಚ್. ಸುರೇಂದ್ರ ಆಯ್ಕೆಯಾಗಿದ್ದಾರೆ. ಹಿರಿಯರ ಮಹಿಳಾ ವಿಭಾಗಕ್ಕೆ ಡಿ. ಜಯಶ್ರೀ, ಕಿರಿಯ ಮಹಿಳಾ ವಿಭಾಗಕ್ಕೆ ಚಂದ್ರಿಕಾ ಶ್ರೀಧರ್ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ ಎಂದು ಶುಕ್ರವಾರ ಬಿಡುಗಡೆಯಾದ ಕೆಎಸ್ಸಿಎ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಭಾರತ-ಆಸ್ಟ್ರೇಲಿಯಾ ಬಾರ್ಡರ್ ಗವಾಸ್ಕರ್ ಟ್ರೋಫಿ ವೇಳಾಪಟ್ಟಿ ಪ್ರಕಟ!
ಲಾಕ್ಡೌನ್ ಬಳಿಕ ಬಳಿಕ ನಡೆದ ಕೆಎಸ್ಸಿಎ ನಡೆಸಿದ ಮೊದಲ ನೇಮಕಾತಿ ಇದಾಗಿದೆ. ಆದರೆ ಕ್ರಿಕೆಟ್ ಆರಂಭದ ಬಗ್ಗೆ ಕೆಎಸ್ಸಿಎ ಏನನ್ನೂ ತುಟಿಬಿಚ್ಚಿಲ್ಲ. ಕೊರೋನಾದಿಂದಾಗಿ ಎಲ್ಲಾ ಕ್ರೀಡಾಚಟುವಟಿಗಳು ಸ್ತಬ್ಧವಾಗಿವೆ. ದೇಸಿ ಕ್ರಿಕೆಟ್ ಟೂರ್ನಿಯ ಬಗ್ಗೆಯೂ ಬಿಸಿಸಿಐ ಇದುವರೆಗೂ ಸ್ಪಷ್ಟ ನಿಲುವನ್ನು ತಳೆದಿಲ್ಲ.