ಕೆಎಲ್ ರಾಹುಲ್ ಬಾಗಲಕೋಟೆ ಮೂಲದ ವಿದ್ಯಾರ್ಥಿಯೊಬ್ಬನಿಗೆ ಹುಬ್ಬಳ್ಳಿಯಲ್ಲಿ ಡಿಗ್ರಿ ಶಿಕ್ಷಣ ಮುಂದುವರಿಸಲು ಹಣಕಾಸು ನೆರವು ನೀಡಿದ್ದಾರೆ. ಅಮೃತ್ ಮಾವಿನಕಟ್ಟಿ ಎಂಬ ವಿದ್ಯಾರ್ಥಿಯ ಎರಡನೇ ವರ್ಷದ ಕಾಲೇಜು ಶುಲ್ಕವನ್ನು ರಾಹುಲ್ ಭರಿಸಿದ್ದಾರೆ.

ಬೆಂಗಳೂರು (ಅ.7): ಕಳಪೆ ಫಾರ್ಮ್‌ ಹಾಗೂ ಗಾಯದ ಸಮಸ್ಯೆಯಿಂದಾಗಿ ಕಳೆದ ಕೆಲ ವರ್ಷಗಳಿಂದ ರಾಷ್ಟ್ರೀಯ ತಂಡದಿಂದ ಹೊರಗಿದ್ದ ಕೆಎಲ್‌ ರಾಹುಲ್‌ ಈಗ ಮತ್ತೊಮ್ಮೆ ರಾಷ್ಟ್ರೀಯ ತಂಡದಲ್ಲಿ ಮಿಂಚಲು ಆರಂಭ ಮಾಡಿದ್ದಾರೆ. ರಾಷ್ಟ್ರೀಯ ತಂಡದಲ್ಲಿ ತಮ್ಮ ಸ್ಥಾನ ಪಡೆಯುವ ನಿಟ್ಟಿನಲ್ಲಿ ಹೋರಾಟ ಮಾಡುತ್ತಿರುವ ಕೆಎಲ್‌ ರಾಹುಲ್‌ ತಮ್ಮ ಸಾಮಾಜಿಕ ಜವಾಬ್ದಾರಿಯ ಕಾರಣದಿಂದಾಗೂ ಸುದ್ದಿಯಾಗಿದ್ದಾರೆ. ಬಾಗಲಕೋಟೆ ಮೂಲದ ವಿದ್ಯಾರ್ಥಿಯೊಬ್ಬನಿಗೆ ಹುಬ್ಬಳ್ಳಿಯಲ್ಲಿ ಡಿಗ್ರಿಯನ್ನು ಮುಂದುವರಿಸುವ ನಿಟ್ಟಿನಲ್ಲಿ ಕೆಎಲ್‌ ರಾಹುಲ್‌ ಹಣಕಾಸು ಸಹಾಯ ಒದಗಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ನಿವಾಸಿಯಾಗಿರುವ 20 ವರ್ಷ ಅಮೃತ್‌ ಮಾವಿನಕಟ್ಟಿಯವರ ವಿದ್ಯಾಭ್ಯಾಸವನ್ನು ಮುಂದುವರಿಸುವ ನಿಟ್ಟಿನಲ್ಲಿ ಕೆಎಲ್‌ ರಾಹುಲ್‌ ಹಣಕಾಸು ವೆಚ್ಚವನ್ನು ಭರಿಸಿದ್ದಾರೆ.

ಅಮೃತ್‌ ಮಾವಿನಕಟ್ಟಿ ಹುಬ್ಬಳ್ಳಿಯ ಬಿವಿಬಿ ಕಾಲೇಜ್‌ ಕ್ಯಾಂಪಸ್‌ನಲ್ಲಿರುವ ಕೆಎಲ್‌ಇ ಟೆಕ್ನಾಲಜಿಕಲ್‌ ಯುನಿವರ್ಸಿಟಿಯಲ್ಲಿ ಮೊದಲ ವರ್ಷದ ಬಿಕಾಂ ಪೂರೈಸಲು ಕೆಎಲ್‌ ರಾಹುಲ್‌ ಹಣಕಾಸಿ ನೆರವು ನೀಡಿದ್ದರು. ಹುಬ್ಬಳ್ಳಿಯ ಸಮಾಜ ಸೇವಕ ಮಂಜುನಾಥ ಹೆಬಸೂರ್ ಮೂಲಕ ರಾಹುಲ್ ಅಮೃತ್ ಗೆ ಸಹಾಯ ಮಾಡಿದ್ದಾರೆ. ಅಮೃತ್‌ ಮಾವಿನಕಟ್ಟಿ ಅವರ ಮೊದಲ ವರ್ಷದ ಸಂಪೂರ್ಣ ಕಾಲೇಜು ಶುಲ್ಕವನ್ನು ರಾಹುಲ್‌ ಭರಿಸಿದ್ದರು. ಆ ಬಳಿಕ ತಮ್ಮ ಮಾತನ್ನು ಉಳಿಸಿಕೊಂಡಿದ್ದರು. ಈಗ ಅವರ ಎರಡನೇ ವರ್ಷದ ಕಾಲೇಜು ಶುಲ್ಕವನ್ನೂ ಕೂಡ ಕೆಎಲ್‌ ರಾಹುಲ್‌ ತುಂಬಿದ್ದಾರೆ ಎಂದು ವರದಿಯಾಗಿದೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಮೃತ್ ಮಾವಿನಕಟ್ಟಿ, ಕಳೆದ ವರ್ಷ ಕಾಲೇಜಿಗೆ ಪ್ರವೇಶ ಪಡೆಯಲು ಕೆಎಲ್ ರಾಹುಲ್ ಸಹಾಯ ಮಾಡಿದ್ದರು. ನಾನು ಮೊದಲ ವರ್ಷದಲ್ಲಿ 9.3 ಸಿಜಿಪಿಎ ಗಳಿಸಿದ್ದೇನೆ. ಕಳೆದ ವರ್ಷ ತಾವು ಕೊಟ್ಟ ಮಾತಿನಂತೆ ಅವರು ನಡೆದುಕೊಂಡಿದ್ದರು. ಈಗ 2ನೇ ವರ್ಷದ ಅಧ್ಯಯನನ್ನಾಗಿ 75 ಸಾವಿರ ರೂಪಾಯಿ ಶುಲ್ಕವನ್ನು ಅವರು ಭರಿಸಿದ್ದಾರೆ ಎಂದು ತಿಳಿಸಿದರು.

ಟೀಂ ಇಂಡಿಯಾದ ಟಾಪ್ 4 ಫೀಲ್ಡರ್ಸ್ ಯಾರು? ಕೋಚ್ ಟಿ ದಿಲೀಪ್ ಹೇಳಿದ ಸೀಕ್ರೆಟ್!

“ನನ್ನ ಅಧ್ಯಯನವನ್ನು ಮುಂದುವರಿಸಲು ಆರ್ಥಿಕವಾಗಿ ಸಹಾಯ ಮಾಡಿದ ಕೆಎಲ್ ರಾಹುಲ್, ಮಂಜುನಾಥ್ ಹೆಬಸೂರ್ ಮತ್ತು ಬಾಗಲಕೋಟೆಯ ನಿತಿನ್ ಅವರಿಗೆ ನಾನು ಧನ್ಯವಾದ ಹೇಳುತ್ತೇನೆ. ನಾನು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಲು ಪ್ರಾಮಾಣಿಕ ಪ್ರಯತ್ನವನ್ನು ಮುಂದುವರಿಸುತ್ತೇನೆ ಎಂದು ಅಮೃತ್ ಹೇಳಿದ್ದಾರೆ.

ಟೀಂ ಇಂಡಿಯಾದಲ್ಲಿ ರಾಹುಲ್‌ಗೆ ಮಹಾ ಅನ್ಯಾಯ: ಕನ್ನಡಿಗನ ಮೇಲೆ ಗಂಭೀರ್ & ರೋಹಿತ್‌ಗೆ ನಂಬಿಕೆ ಇಲ್ವಾ?