ಕರ್ನಾಟಕ ರಣಜಿ ತಂಡವನ್ನು ತೊರೆಯಲಿರುವ ಕೆ.ಗೌತಮ್?
ಹಾಲಿ ವರ್ಷದ ರಣಜಿಯಲ್ಲಿ ನೀರಸ ಪ್ರದರ್ಶನ ತೋರಿರುವ ಕರ್ನಾಟಕದ ಆಫ್ ಸ್ಪಿನ್ ಬೌಲಿಂಗ್ ಆಲ್ರೌಂಡರ್ ಕೆ.ಗೌತಮ್, ರಾಜ್ಯ ತಂಡವನ್ನು ತೊರೆಯುವ ಸಿದ್ಧತೆ ನಡೆಸಿದ್ದಾರೆ ಎಂದು ಕೆಎಸ್ಸಿಎ ಮೂಲಗಳು ತಿಳಿಸಿವೆ.
ಬೆಂಗಳೂರು (ಜೂನ್ 21): ಕರ್ನಾಟಕದ ಆಫ್ ಸ್ಪಿನ್ ಬೌಲಿಂಗ್ ಆಲ್ರೌಂಡರ್ (offspinning allrounder ) ಕೃಷ್ಣಪ್ಪ ಗೌತಮ್ (Krishnappa Gowtham), ರಾಜ್ಯ ತಂಡವನ್ನು ತೊರೆಯುವ ಸಿದ್ಧತೆಯಲ್ಲಿದ್ದಾರೆ. ಮೂಲಗಳ ಪ್ರಕಾರ ಮುಂದಿನ ಋತುವಿನಿಂದ ಅವರು ಬೇರೆ ರಾಜ್ಯದ ತಂಡದ ಪರವಾಗಿ ಆಡುವ ಸಾಧ್ಯತೆ ಇದೆ ಎನ್ನಲಾಗಿದೆ.
ರಾಜ್ಯ ತಂಡದ ಪರವಾಗಿ 48 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಕೆ.ಗೌತಮ್ (K.Gowtham) ಈ ಬಾರಿಯ ರಣಜಿ ಟ್ರೋಫಿಯಲ್ಲಿ (Ranaji Trophy) ನೀರಸ ನಿರ್ವಹಣೆ ತೋರಿದ್ದರು. ಈ ಕುರಿತಾಗಿ ಆಯ್ಕೆ ಸಮಿತಿ ಅಧ್ಯಕ್ಷರೊಂದಿಗೆ ಕೆಲ ಮಾತಿನ ಚಕಮಕಿ ನಡೆದಿತ್ತು ಎಂದೂ ವರದಿಯಾಗಿದೆ.
ಮೂಲಗಳ ಪ್ರಕಾರ ಮುಂದಿನ ಋತುವಿನಿಂದ ಬರೋಡ (Baroda) ತಂಡದ ಪರವಾಗಿ ಕೆ. ಗೌತಮ್ ಆಡುವ ಸಾಧ್ಯತೆ ಇದೆ. ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ಕೆ.ಗೌತಮ್ ಹಾಗೂ ಬರೋಡ ತಂಡದ ಟಿ20 ಕ್ಯಾಪ್ಟನ್ ಕೃನಾಲ್ ಪಾಂಡ್ಯ ಒಟ್ಟಿಗೆ ಆಡುತ್ತಿದ್ದಾರೆ. ಈ ಕುರಿತಾಗಿ ಕೃನಾಲ್ ಪಾಂಡ್ಯ ಅವರೊಂದಿಗೂ ಕೆ.ಗೌತಮ್ ಮಾತನಾಡಿದ್ದಾರೆ ಎಂದು ಕೆಎಸ್ಸಿಎ ಮೂಲಗಳು ತಿಳಿಸಿವೆ.
ಟಿ20 ಸ್ಪೆಷಲಿಸ್ಟ್ ಆಗಿ ಹೆಚ್ಚಾಗಿ ಕಂಡುಬರುವ ಆಫ್ಸ್ಪಿನ್ನಿಂಗ್ ಆಲ್ರೌಂಡರ್ ಕೆ.ಗೌತಮ್, 2016ರಲ್ಲಿ ತಮ್ಮ ಬೌಲಿಂಗ್ನಲ್ಲಿ ಭಾರಿ ಬದಲಾವಣೆ ತಂದುಕೊಂಡು ರಣಜಿ ಟ್ರೋಫಿಗೆ ಮರಳಿದಾಗ ದೊಡ್ಡ ಮಟ್ಟದ ಯಶಸ್ಸು ಕಂಡಿದ್ದರು. ಆಡಿದ ಮೊದಲ ಮೂರು ಪಂದ್ಯಗಳಲ್ಲಿಯೇ ಅವರು 18 ವಿಕೆಟ್ ಸಂಪಾದನೆ ಮಾಡಿ ಮಿಂಚಿದ್ದರು. ಈ ಸ್ಥಿರ ನಿರ್ವಹಣೆಯ ಫಲವಾಗಿ 2017ರಲ್ಲಿ ಭಾರತ ಎ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದರು. 2018ರ ಐಪಿಎಲ್ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ತಂಡ ದಾಖಲೆಯ 6.2 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು.
IPL Auction 2022 : ಒಂದೇ ವರ್ಷದಲ್ಲಿ 8.35 ಕೋಟಿ ಮೌಲ್ಯ ಕಳೆದುಕೊಂಡ ಕೆ.ಗೌತಮ್!
2021ರ ಫ್ರೆಬ್ರವರಿಯಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ ಗೌತಮ್ ಅವರನ್ನು ಚೆನ್ನ ಸೂಪರ್ ಕಿಂಗ್ಸ್ ದಾಖಲೆಯ 9.25 ಕೋಟಿ ರೂಪಾಯಿಗ ಖರೀದಿ ಮಾಡಿತ್ತು. ಆ ಮೂಲಕ ಐಪಿಎಲ್ ಇತಿಹಾಸದಲ್ಲಿಯೇ ಅತ್ಯಂತ ದುಬಾರಿ ಮೊತ್ತಕ್ಕೆ ಮಾರಾಟವಾದ ಅನ್ ಕ್ಯಾಪ್ಡ್ ಆಟಗಾರ ಎನಿಸಿಕೊಂಡಿದ್ದರು.
KPL 2019: 39 ಎಸೆತದಲ್ಲಿ ಶತಕ, ಗೌತಮ್ ಅಬ್ಬರಕ್ಕೆ ದಾಖಲೆ ಪುಡಿ ಪುಡಿ!
ವಿವಾದಕ್ಕೂ ತುತ್ತಾಗಿದ್ದ ಕೆ.ಗೌತಮ್: 2017ರಲ್ಲಿ ದುಲೀಪ್ ಟ್ರೋಫಿ ತಂಡವನ್ನು ಅನಾರೋಗ್ಯದ ಕಾರಣದಿಂದಾಗಿ ಕೆ.ಗೌತಮ್ ಬಿಟ್ಟಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಅನಾರೋಗ್ಯದ ನೆಪ ಹೇಳಿ ದುಲೀಪ್ ಟ್ರೋಫಿಯಿಂದ ಹೊರಬಂದಿದ್ದ ಕೆ.ಗೌತಮ್ ಕೆಲ ದಿನಗಳ ಬಳಿಕ ಕರ್ನಾಟಕ ಪ್ರೀಮಿಯರ್ ಲೀಗ್ನಲ್ಲಿ ಆಡಿದ್ದರು. ಇದಕ್ಕೆ ಶಿಸ್ತು ಕ್ರಮವಾಗಿ ಬಿಸಿಸಿಐ, ನ್ಯೂಜಿಲೆಂಡ್ ಎ ತಂಡದ ವಿರುದ್ಧದ ಸರಣಿಯಿಂದ ಅವರನ್ನು ಹೊರಹಾಕಿತ್ತು.