ಬೆಂಗಳೂರು ಬ್ಲಾಸ್ಟರ್ಸ್‌ ತಂಡವು ಮೈಸೂರು ವಾರಿಯರ್ಸ್‌ ಎದುರು 56 ರನ್ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಮತ್ತೊಮ್ಮೆ ಅಂಕಪಟ್ಟಿಯಲ್ಲಿ ಅಗ್ರಸ್ತಾನಕ್ಕೇರಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಬೆಂಗಳೂರು: ಕೆಎಸ್‌ಸಿಎ ಮಹಾರಾಜ ಟ್ರೋಫಿ ಟಿ20 ಲೀಗ್‌ನಲ್ಲಿ 5ನೇ ಗೆಲುವು ಸಾಧಿಸಿದ ಬೆಂಗಳೂರು ಬ್ಲಾಸ್ಟರ್ಸ್‌ ತಂಡ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದೆ. ಭಾನುವಾರ ಮೈಸೂರು ವಾರಿಯರ್ಸ್‌ ವಿರುದ್ಧ ಬೆಂಗಳೂರು 56 ರನ್‌ ಜಯಗಳಿಸಿತು. 8 ಪಂದ್ಯಗಳಲ್ಲಿ 4ನೇ ಸೋಲು ಕಂಡ ಮೈಸೂರು ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.

ಮೊದಲು ಬ್ಯಾಟ್‌ ಮಾಡಿದ ಬೆಂಗಳೂರು 7 ವಿಕೆಟ್‌ಗೆ 189 ರನ್‌ ಕಲೆಹಾಕಿತು. ಎಲ್‌.ಆರ್‌.ಚೇತನ್‌ ಮತ್ತೊಮ್ಮೆ ಸ್ಫೋಟಕ ಆಟವಾಡಿದರು. ಅವರು 53 ಎಸೆತಗಳಲ್ಲಿ 9 ಬೌಂಡರಿ, 5 ಸಿಕ್ಸರ್‌ನೊಂದಿಗೆ 88 ರನ್‌ ಸಿಡಿಸಿದರು. ಉಳಿದಂತೆ ಸೂರಜ್‌ ಅಹುಜಾ 16 ಎಸೆತಗಳಲ್ಲಿ 32, ಶಿವಕುಮಾರ್‌ ರಕ್ಷಿತ್‌ 29 ರನ್‌ ಗಳಿಸಿದರು. ಕಾರ್ತಿಕ್‌ ಸಿ.ಎ. 3 ವಿಕೆಟ್‌ ಕಬಳಿಸಿದರು.

ಮಹಾರಾಜ ಟ್ರೋಫಿ: ಮೈಸೂರು ವಾರಿಯರ್ಸ್‌ ಸವಾಲು ಗೆದ್ದ ಗುಲ್ಬರ್ಗಾ

ದೊಡ್ಡ ಗುರಿ ಬೆನ್ನತ್ತಿದ ಮೈಸೂರು ತಂಡ 17.5 ಓವರ್‌ಗಳಲ್ಲಿ 133 ರನ್‌ಗೆ ಸರ್ವಪತನ ಕಂಡಿತು. ಎಸ್‌.ಯು. ಕಾರ್ತಿಕ್‌(26) ತಂಡದ ಪರ ಗರಿಷ್ಠ ವೈಯಕ್ತಿಕ ಮೊತ್ತ ಗಳಿಸಿದರು. ಹರ್ಷಿಲ್‌ ಧರ್ಮಾನಿ 20, ಕಾರ್ತಿಕ್‌ ಸಿ.ಎ. 17 ರನ್‌ ಸಿಡಿಸಿದ್ದು ಬಿಟ್ಟರೆ ಇತರರಿಂದ ತಂಡಕ್ಕೆ ಉಪಯುಕ್ತ ಕೊಡುಗೆ ಲಭಿಸಲಿಲ್ಲ. ಶುಭಾಂಗ್‌ ಹೆಗ್ಡೆ ಹಾಗೂ ಕ್ರಾಂತಿ ಕುಮಾರ್‌ ತಲಾ 3 ವಿಕೆಟ್‌ ಕಿತ್ತರು.

ಪಂದ್ಯಶ್ರೇಷ್ಠ: ಎಲ್‌.ಆರ್. ಚೇತನ್‌

ಮಂಗಳೂರು ವಿರುದ್ಧ ಶಿವಮೊಗ್ಗ ಲಯನ್ಸ್‌ಗೆ ಜಯ

ಭಾನುವಾರ ನಡೆದ ಮತ್ತೊಂದು ಪಂದ್ಯದಲ್ಲಿ ಮಂಗಳೂರು ವಿರುದ್ಧ ಶಿವಮೊಗ್ಗ ಲಯನ್ಸ್‌ 3 ವಿಕೆಟ್‌ ಗೆಲುವು ಸಾಧಿಸಿತು. ತಂಡಕ್ಕಿದು ಸತತ 2ನೇ ಜಯ. ಅತ್ತ ಮಂಗಳೂರು 7 ಪಂದ್ಯಗಳಲ್ಲಿ 5ನೇ ಸೋಲು. ಮೊದಲು ಬ್ಯಾಟ್ ಮಾಡಿದ ಮಂಗಳೂರು 7 ವಿಕೆಟ್‌ಗೆ 152 ರನ್ ಕಲೆಹಾಕಿತು. ನಿಕಿನ್ ಜೋಸ್ 37 ಎಸೆತಗಳಲ್ಲಿ 57 ರನ್ ಸಿಡಿಸಿದರು. ನಿಕಿನ್ ಹೊರತುಪಡಿಸಿ ಉಳಿದ್ಯಾವ ಬ್ಯಾಟರ್‌ಗಳು 20ಕ್ಕಿಂತ ಹೆಚ್ಚು ರನ್ ಗಳಿಸಲಿಲ್ಲ.

ರೋಹಿತ್ ಶರ್ಮಾ ಖರೀದಿಸಲು ಈ ಎರಡು ಫ್ರಾಂಚೈಸಿಗಳು ಮಾಸ್ಟರ್ ಪ್ಲಾನ್; ಹಿಟ್‌ಮ್ಯಾನ್‌ಗಾಗಿ ಕೋಟಿ-ಕೋಟಿ ಸುರಿಯಲು ರೆಡಿ..!

ಇನ್ನು ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಶಿವಮೊಗ್ಗ 18.4 ಓವರ್‌ಗಳಲ್ಲಿ ಗೆಲುವಿನ ನಗೆ ಬೀರಿತು. ಮತ್ತೊಮ್ಮೆ ಸ್ಪೋಟಕ ಬ್ಯಾಟಿಂಗ್ ನಡೆಸಿದ ಅಭಿನವ್ ಮನೋಹರ್ 43 ರನ್ ಸಿಡಿಸಿ ಶಿವಮೊಗ್ಗ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.

ಇಂದಿನ ಪಂದ್ಯಗಳು: 
ಮಂಗಳೂರು-ಹುಬ್ಬಳ್ಳಿ, ಮಧ್ಯಾಹ್ನ 3 ಗಂಟೆಗೆ
ಬೆಂಗಳೂರು-ಗುಲ್ಬರ್ಗಾ, ಸಂಜೆ 7 ಗಂಟೆಗೆ