ಧೋನಿಯನ್ನೂ ಬಿಟ್ಟಿಲ್ಲ IPL ಕಾಂಟ್ರವರ್ಸಿಗಳು..! ಈ 3 ವಿವಾದ ನಿಮಗೆ ನೆನಪಿದೆಯಾ..?
* ಕ್ಯಾಪ್ಟನ್ ಕೂಲ್ ಖ್ಯಾತಿಯ ಧೋನಿಯನ್ನು ಬಿಟ್ಟಿಲ್ಲ ವಿವಾದಗಳು
* ಐಪಿಎಲ್ ಧೋನಿಯೂ ಮಾಡಿಕೊಂಡಿದ್ದಾರೆ ಐಪಿಎಲ್ ಕಾಂಟ್ರವರ್ಸಿ
* ಸಿಎಸ್ಕೆ ನಾಯಕರಾಗಿದ್ದಾಗ ಧೋನಿ ಕೂಡಾ ತಾಳ್ಮೆ ಕಳೆದುಕೊಂಡಿದ್ದಾರೆ..!
ಬೆಂಗಳೂರು(ಮಾ.26): 12 ವರ್ಷಗಳ ಕಾಲ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡವನ್ನ ಮುನ್ನಡೆಸಿದ್ದ ಎಂ ಎಸ್ ಧೋನಿ(MS Dhoni), ಇಂದಿನಿಂದ ಕೇವಲ ಆಟಗಾರನಾಗಿ ಐಪಿಎಲ್ (IPL) ಕಣಕ್ಕಿಳಿಯುತ್ತಿದ್ದಾರೆ. ಸಿಎಸ್ಕೆಗೆ ನಾಲ್ಕು ಐಪಿಎಲ್ ಟ್ರೋಫಿ ಗೆಲ್ಲಿಸಿಕೊಟ್ಟು ಯಶಸ್ವಿ ನಾಯಕ ಎನಿಸಿಕೊಂಡಿದ್ದರು. ವಯಸ್ಸು 40 ಆಗಿರೋದ್ರಿಂದ ತಾವಾಗಿಯೇ ನಾಯಕತ್ವ ತ್ಯಜಿಸಿ, ಕೇವಲ ಆಟಗಾರನಾಗಿ ಐಪಿಎಲ್ ಆಡಲು ರೆಡಿಯಾಗಿದ್ದಾರೆ. ಕೂಲ್ ಕ್ಯಾಪ್ಟನ್, ಗ್ರೇಟ್ ಕ್ಯಾಪ್ಟನ್, ಸಕ್ಸಸ್ ಫುಲ್ ಕ್ಯಾಪ್ಟನ್. ಹೀಗೆ ಎಲ್ಲಾ ಯಶಸ್ಸುಗಳು ಧೋನಿ ಬೆನ್ನಿಗಿದೆ. ಇದೆಲ್ಲದರ ಜತೆಗೆ ಕೂಲ್ ಕ್ಯಾಪ್ಟನ್ ಧೋನಿಯನ್ನೂ ಬಿಟ್ಟಿಲ್ಲ ಐಪಿಎಲ್ ಕಾಂಟ್ರವರ್ಸಿಗಳು (IPL Controversy). ಸಿಎಸ್ಕೆಗೆ ನಾಯಕನಾಗಿದ್ದ ಸಂದರ್ಭ ಮಹೇಂದ್ರ ಸಿಂಗ್ ಧೋನಿ ಮೂರು ವಿವಾದಗಳನ್ನೂ ಮಾಡಿಕೊಂಡಿದ್ದಾರೆ. ಆದರೆ ತಮ್ಮ ಅದ್ಭುತ ನಾಯಕತ್ವದಿಂದ ಆ ವಿವಾದಗಳು ಮಾತ್ರ ಮೆಲ್ಲಗೆ ತೆರೆ ಮರೆಗೆ ಸರಿದಿವೆ ಅಷ್ಟೆ.
ಮೈದಾನಕ್ಕಿಳಿದು ಅಂಪೈರ್ ಜೊತೆ ಧೋನಿ ವಾಗ್ವಾದ:
2019ರ ಸೀಸನ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ (Rajasthan Royals) ತಂಡಗಳು ಮುಖಾಮುಖಿಯಾಗಿದ್ದವು. ರಾಯಲ್ಸ್ ವಿರುದ್ಧ ಸಿಎಸ್ಕೆ ಗೆಲ್ಲಲು ಕೊನೆ ಓವರ್ನಲ್ಲಿ 18 ರನ್ ಬೇಕಿತ್ತು. ರವೀಂದ್ರ ಜಡೇಜಾ (Ravindra Jadeja) ಮತ್ತು ಮಿಚೆಲ್ ಸ್ಯಾಂಟ್ನರ್ ಕ್ರೀಸಿನಲ್ಲಿದ್ದರು. ರಾಯಲ್ಸ್ ಬೌಲರ್ ಬೆನ್ ಸ್ಟೋಕ್ಸ್ (Ben Stokes), ಮೊದಲ ಮೂರು ಎಸೆತಗಳಲ್ಲಿ 10 ರನ್ ಬಿಟ್ಟುಕೊಟ್ಟರು. 4ನೇ ಬಾಲ್ ದೊಡ್ಡ ಬೌನ್ಸರ್ ಆಗಿತ್ತು. ಆದ್ರೂ ಸಾಂಟ್ನರ್ ಎರಡು ರನ್ ಗಳಿಸಿದ್ರು. ಆ ಬಾಲ್ ಬೌನ್ಸರ್ ಎಂದು ಕ್ರೀಸಿನಲ್ಲಿದ್ದ ಜಡೇಜಾ ಮತ್ತು ಮಿಚೆಲ್ ಅಂಪೈರ್ ಬಳಿ ಹೇಳಿದ್ರೂ ಅಂಪೈರ್ ನೋ ಬಾಲ್ ನೀಡಲೇ ಇಲ್ಲ. ಇದರಿಂದ ಕುಪಿತಗೊಂಡ ಆಗಿನ ನಾಯಕ ಎಂಎಸ್ ಧೋನಿ, ಡಗೌಟ್ನಿಂದ ಫೀಲ್ಡಿಂಗ್ಗಿಳಿದು ಅಂಪೈರ್ ಜೊತೆ ವಾಗ್ವಾದಕ್ಕಿಳಿದರು.
IPL 2022 'ಕೊನೇ ಪ್ಲೇಸ್ ಅಲ್ಲಿ ಇರೋಕೆ ಲಾಯಕ್ಕು ನೀವು..' ಗೇಲಿ ಮಾಡಲು ಹೋಗಿ ತಾವೇ ತಮಾಷೆಯಾದ ರಾಜಸ್ಥಾನ ರಾಯಲ್ಸ್!
ಯುವ ಆಟಗಾರರ ಮೇಲೆ ಧೋನಿ ಟೀಕಾಸ್ತ್ರ:
ಎಂ ಎಸ್ ಧೋನಿ ಸದಾ ತಮ್ಮ ಸಹ ಆಟಗಾರರ ಬೆಂಬಲಕ್ಕೆ ನಿಲ್ಲುವ ನಾಯಕ. ತಮ್ಮ ತಂಡದ ಆಟಗಾರರನ್ನ ಎಲ್ಲೂ ಬಿಟ್ಟುಕೊಡಲ್ಲ. ಆದರೆ ಐಪಿಎಲ್ ಇತಿಹಾಸದಲ್ಲಿಯೇ ಫಾರ್ ದ ಫಸ್ಟ್ ಟೈಮ್ ಸಿಎಸ್ಕೆ ತಂಡ 2020ರಲ್ಲಿ ಲೀಗ್ನಿಂದಲೇ ಹೊರಬಿದ್ದಿತ್ತು. ಈ ಬೇಸರದಲ್ಲಿದ್ದ ಧೋನಿ, ತಮ್ಮ ತಂಡದ ಯುವ ಆಟಗಾರರಲ್ಲಿ ಉತ್ತಮ ಪ್ರದರ್ಶನ ನೀಡಬೇಕೆಂಬ ಹಂಬಲ ಇಲ್ಲ ಎಂಬ ಹೇಳಿಕೆಯನ್ನು ನೀಡಿಬಿಟ್ಟಿದ್ದರು. ಅಂದು ಅನುಭವಿ ನಾಯಕನಾಗಿ ಈ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದರು ಧೋನಿ.
ಅಂಪೈರ್ ಗುರಾಯಿಸಿ ವೈಡ್ ಬಾಲ್ ಕ್ಯಾನ್ಸಲ್ ಮಾಡಿಸಿದ್ದ ಧೋನಿ:
ಕಳೆದ ವರ್ಷದ ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ (Sunrisers Hyderabad) ವಿರುದ್ಧದ ಪಂದ್ಯದಲ್ಲಿ ಸಿಎಸ್ಕೆ ಬೌಲರ್ ಶಾರ್ದೂಲ್ ಠಾಕೂರ್ (Shardul Thakur), ಎಸೆದ ಬಾಲನ್ನು ವೈಡ್ ಎಂದು ಘೋಷಿಸಲು ಅಂಪೈರ್ ಮುಂದಾಗಿದ್ದರು. ಆದರೆ ಈ ಸಮಯಕ್ಕೆ ಸರಿಯಾಗಿ ಕೀಪಿಂಗ್ ಮಾಡುತ್ತಿದ್ದ ಧೋನಿ, ಅಂಪೈರ್ನತ್ತ (Umpire) ದಿಟ್ಟಿಸಿ ನೋಡುವುದರ ಮೂಲಕ ಇದು ವೈಡ್ ಬಾಲ್ ಅಲ್ಲ ಎಂದು ಹೇಳಿದ್ದರು. ಮಹಿ ಈ ರೀತಿ ದಿಟ್ಟಿಸಿ ನೋಡಿದ್ದರಿಂದ ವೈಡ್ ಬಾಲ್ ನೀಡಲು ಮುಂದಾಗಿದ್ದ ಅಂಪೈರ್, ವೈಡ್ ನೀಡದೆಯೇ ಉತ್ತಮ ಎಸೆತ ಎಂದು ತೀರ್ಮಾನಿಸಿ ಬಿಟ್ಟಿದ್ದರು. ಹೀಗೆ ಅಂಪೈರ್ನನ್ನ ಬೆದರಿಸಿದ ಧೋನಿ, ವಿವಾದಕ್ಕೀಡಾಗಿದ್ದರು. ಡಗೌಟ್ನಲ್ಲಿ ಸನ್ ರೈಸರ್ಸ್ ಆಟಗಾರರೆಲ್ಲಾ ಅಂಪೈರ್ ಮತ್ತು ಧೋನಿ ವಿರುದ್ಧ ಸಿಟ್ಟಾಗಿದ್ದರು.