ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೂರ್ನಿಯಲ್ಲಿ ಆಸ್ಟ್ರೇಲಿಯಾ ನೀರಸ ಪ್ರದರ್ಶನಮೊದಲೆರಡು ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿರುವ  ಆಸ್ಟ್ರೇಲಿಯಾಪ್ಯಾಟ್‌ ಕಮಿನ್ಸ್‌ ಪಡೆಗೆ ಆಸೀಸ್‌ ಮಾಜಿ ಕ್ರಿಕೆಟಿಗರಿಂದ ವ್ಯಾಪಕ ಟೀಕೆ

ಸಿಡ್ನಿ(ಫೆ.21): ಭಾರತ ವಿರುದ್ಧ ಮೊದಲೆರಡೂ ಟೆಸ್ಟ್‌ಗಳನ್ನು ಮೂರು ದಿನಗಳ ಒಳಗೆ ಸೋತ ಪ್ಯಾಟ್‌ ಕಮಿನ್ಸ್‌ ಪಡೆಯನ್ನು ಆಸ್ಪ್ರೇಲಿಯಾದ ಮಾಜಿ ಕ್ರಿಕೆಟಿಗರು ಕಟುವಾಗಿ ಟೀಕಿಸಿದ್ದಾರೆ. ತಂಡದ ಕಳಪೆಯಾಟದ ಬಗ್ಗೆ ಪ್ರತಿಕ್ರಿಯಿಸಿರುವ ಮ್ಯಾಥ್ಯೂ ಹೇಡನ್‌, ‘ಇದು ಆಸ್ಪ್ರೇಲಿಯಾ ಕ್ರಿಕೆಟ್‌ನ ದುರಂತ’ ಎಂದಿದ್ದಾರೆ. 

Add Asianetnews Kannada as a Preferred SourcegooglePreferred

ಆಸ್ಪ್ರೇಲಿಯಾದ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಆ್ಯಲನ್‌ ಬಾರ್ಡರ್‌ ‘ತಂಡದ ಆಟ ಸಿಟ್ಟು ತರಿಸುತ್ತಿದೆ. ಇಷ್ಟು ಕಳಪೆ ಪ್ರದರ್ಶನವನ್ನು ನಿರೀಕ್ಷೆ ಮಾಡಿರಲಿಲ್ಲ’ ಎಂದಿದ್ದಾರೆ. ಇದೇ ವೇಳೆ ಮಾಜಿ ನಾಯಕ ಮೈಕಲ್‌ ಕ್ಲಾರ್ಕ್ ತಂಡ ಮಾಡಿದ ಎಡವಟ್ಟುಗಳ ಪಟ್ಟಿಯನ್ನೇ ಮಾಡಿದ್ದಾರೆ. ಇದೇ ವೇಳೆ ತಂಡದ ಆಟ ನೋಡಿ ಆಕ್ರೋಶಗೊಂಡ ಮಾರ್ಕ್ ವಾ, ಕಾಮೆಂಟ್ರಿ ವೇಳೆ ತಾಳ್ಮೆ ಕಳೆದುಕೊಂಡು ದಿನೇಶ್‌ ಕಾರ್ತಿಕ್‌ ಜೊತೆ ವಾಗ್ವಾದ ನಡೆಸಿದ ಪ್ರಸಂಗವೂ ನಡೆಯಿತು.

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್‌ ಸರಣಿಯ ಮೊದಲೆರಡು ಪಂದ್ಯಗಳ ಬಗ್ಗೆ ಹೇಳುವುದಾದರೇ, ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಮೊದಲೆರಡು ಟೆಸ್ಟ್‌ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ 2-0 ಮುನ್ನಡೆ ಸಾಧಿಸಿದೆ. ನಾಗ್ಪುರದಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾ ಇನಿಂಗ್ಸ್‌ ಹಾಗೂ 132 ರನ್‌ಗಳ ಗೆಲುವು ಸಾಧಿಸಿತ್ತು. ಇನ್ನು ದೆಹಲಿಯಲ್ಲಿ ನಡೆದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್‌ಗಳ ಜಯ ಸಾಧಿಸಿದೆ. ಮೊದಲೆರಡು ಟೆಸ್ಟ್‌ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಮಾರಕ ದಾಳಿಗೆ ಆಸ್ಟ್ರೇಲಿಯಾ ಅಕ್ಷರಶಃ ತತ್ತರಿಸಿ ಹೋಗಿದೆ.

3ನೇ ಟೆಸ್ಟ್‌ಗೂ ಮುನ್ನ ಆಸೀಸ್‌ಗೆ ಸಂಕಷ್ಟ!

ನವದೆಹಲಿ: ಭಾರತ ವಿರುದ್ಧ ಮೊದಲೆರಡು ಟೆಸ್ಟ್‌ಗಳನ್ನು ಸೋತಿರುವ ಆಸ್ಪ್ರೇಲಿಯಾಕ್ಕೆ 3ನೇ ಟೆಸ್ಟ್‌ಗೂ ಮುನ್ನ ಸಂಕಷ್ಟ ಎದುರಾಗಲಿದೆ. ನಾಯಕ ಪ್ಯಾಟ್‌ ಕಮಿನ್ಸ್‌ ತಮ್ಮ ಕುಟುಂಬಸ್ಥರಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪ್ರೇಲಿಯಾಗೆ ತೆರಳಿದ್ದಾರೆ. ಅವರು ಇಂದೋರ್‌ ಟೆಸ್ಟ್‌ಗೂ ಮುನ್ನ ತಂಡಕ್ಕೆ ಮರಳುವ ಸಾಧ್ಯತೆ ಇದೆ. ಒಂದು ವೇಳೆ ಕಮಿನ್ಸ್‌ ಬರದಿದ್ದರೆ ಸ್ಟೀವ್‌ ಸ್ಮಿತ್‌ ತಂಡ ಮುನ್ನಡೆಸಲಿದ್ದಾರೆ.

Border Gavaskar Trophy: ಸತತ ಎರಡು ಸೋಲಿನ ಬೆನ್ನಲ್ಲೇ ಆಸೀಸ್‌ಗೆ ಮತ್ತೆ ಶಾಕ್‌, ಮಾರಕ ವೇಗಿ ಟೆಸ್ಟ್ ಸರಣಿಯಿಂದ ಔಟ್

ಇನ್ನು ಗಾಯದ ಕಾರಣ ಮೊದಲೆರಡು ಟೆಸ್ಟ್‌ಗಳಿಗೆ ಆಯ್ಕೆಗೆ ಲಭ್ಯರಾಗದ ವೇಗಿ ಜೋಶ್‌ ಹೇಜಲ್‌ವುಡ್‌ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ಸರಣಿಯಿಂದಲೇ ಹೊರಬಿದ್ದಿದ್ದಾರೆ. 2ನೇ ಟೆಸ್ಟ್‌ ವೇಳೆ ಮೊಣಕೈಗೆ ಪೆಟ್ಟು ತಿಂದಿದ್ದ ಆರಂಭಿಕ ಬ್ಯಾಟರ್‌ ಡೇವಿಡ್‌ ವಾರ್ನರ್‌ ಸಹ 3ನೇ ಟೆಸ್ಟ್‌ನಿಂದ ಹೊರಬೀಳಬಹುದು ಎನ್ನಲಾಗಿದೆ. ಆಸ್ಪ್ರೇಲಿಯಾ ಹೊಸದಾಗಿ ಮೂವರು ಆಟಗಾರರನ್ನು ಕರೆಸಿಕೊಳ್ಳಲು ಚಿಂತನೆ ನಡೆಸುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ

ಸ್ಟೇಡಿಯಂಗಳಲ್ಲಿನ ಶೌಚಾಲಯ ಬಗ್ಗೆ ಅಭಿಮಾನಿಗಳ ಆಕ್ರೋಶ!

ನವದೆಹಲಿ: ಭಾರತದ ಕ್ರಿಕೆಟ್‌ ಕ್ರೀಡಾಂಗಣಗಳಲ್ಲಿ ಶೌಚಾಲಯಗಳ ಸ್ಥಿತಿ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಸ್ವಚ್ಛತೆ ಬಗ್ಗೆ ಗಂಭೀರವಾಗಿ ಗಮನ ಹರಿಸುವಂತೆ ಬಿಸಿಸಿಐಗೆ ತಾಕೀತು ಮಾಡಿದ್ದಾರೆ. ಇತ್ತೀಚೆಗೆ ನಡೆದ ಭಾರತ-ಆಸ್ಪ್ರೇಲಿಯಾ 2ನೇ ಟೆಸ್ಟ್‌ ವೇಳೆ ತಮ್ಮ 8 ವರ್ಷ ಮಗಳನ್ನು ಕ್ರೀಡಾಂಗಣಕ್ಕೆ ಕರೆದೊಯ್ದಿದ್ದ ಉನ್ನತ ಮಟ್ಟದ ಅಧಿಕಾರಿಯೊಬ್ಬರು ಜೇಟ್ಲಿ ಕ್ರೀಡಾಂಗಣದಲ್ಲಿನ ಶೌಚಾಲಯಗಳ ಸ್ಥಿತಿ ನೋಡಿ ಆ ಕುರಿತು ಟ್ವೀಟ್‌ ಮಾಡಿದ್ದಾರೆ. 

ನೂರಾರು ಅಭಿಮಾನಿಗಳು ಟ್ವೀಟ್‌ಗೆ ಪ್ರತಿಕ್ರಿಯಿಸಿ ದೇಶದ ಬೇರೆ ಬೇರೆ ನಗರಗಳಲ್ಲಿರುವ ಕ್ರೀಡಾಂಗಣಗಳಲ್ಲಿ ತಾವು ಎದುರಿಸಿದ ಸಮಸ್ಯೆಗಳ ಬಗ್ಗೆ ಬರೆದಿದ್ದಾರೆ. ಪಂದ್ಯದ ಟಿಕೆಟ್‌ಗಳಿಗೆ ಸಾವಿರಾರು ರು. ಪಡೆಯುವ ಕ್ರಿಕೆಟ್‌ ಸಂಸ್ಥೆಗಳು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಅಭಿಮಾನಿಗಳು ಆಗ್ರಹಿಸಿದ್ದಾರೆ.