Border Gavaskar Trophy: ಭಾರತ ಎದುರು ಟಾಸ್ ಗೆದ್ದ ಆಸೀಸ್ ಬ್ಯಾಟಿಂಗ್ ಆಯ್ಕೆ; ಭಾರತದ ಪರ ಇಬ್ಬರು ಪಾದಾರ್ಪಣೆ..!
ನಾಗ್ಪುರದಿಂದ ಆರಂಭವಾದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ
ಮೊದಲ ಟೆಸ್ಟ್ನಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಆಯ್ಕೆ
ಉಭಯ ತಂಡದಲ್ಲೂ ಮಹತ್ವದ ಬದಲಾವಣೆ
ನಾಗ್ಪುರ(ಫೆ.09): ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ 4 ಪಂದ್ಯಗಳ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಇಲ್ಲಿನ ವಿಸಿಎ ಮೈದಾನ ಆತಿಥ್ಯವನ್ನು ವಹಿಸಿದೆ. ಟಾಸ್ ಗೆದ್ದ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್, ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಆಸ್ಟ್ರೇಲಿಯಾ ತಂಡದಲ್ಲಿ ಎರಡು ಬದಲಾವಣೆಗಳನ್ನು ಮಾಡಲಾಗಿದ್ದರೇ,. ಟೀಂ ಇಂಡಿಯಾ ಪರ ಇಬ್ಬರು ಆಟಗಾರರು ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದಾರೆ
ಹೌದು, ಆಸ್ಟ್ರೇಲಿಯಾ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದ್ದು, ಟ್ರಾವಿಸ್ ಹೆಡ್ ಬದಲಿಗೆ ಪೀಟರ್ ಹ್ಯಾಂಡ್ಸ್ಕಂಬ್ ತಂಡ ಕೂಡಿಕೊಂಡಿದ್ದಾರೆ. ಇನ್ನು ಆಸ್ಟನ್ ಏಗರ್ ಬದಲಿಗೆ ಟಾಂಡ್ ಮೋರ್ಫೆ ಇದೀಗ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದಾರೆ. ಇನ್ನುಳಿಂದಂತೆ ಟೀಂ ಇಂಡಿಯಾದಲ್ಲೂ ಎರಡು ಮಹತ್ವದ ಬದಲಾವಣೆ ಮಾಡಲಾಗಿದ್ದು, ರಿಷಭ್ ಪಂತ್ ಬದಲಿಗೆ ವಿಕೆಟ್ ಕೀಪರ್ ಬ್ಯಾಟರ್ ಕೆ ಎಸ್ ಭರತ್ ಹಾಗೂ ಶ್ರೇಯಸ್ ಅಯ್ಯರ್ ಬದಲಿಗೆ ಸೂರ್ಯಕುಮಾರ್ ಯಾದವ್ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದಾರೆ.
ಭಾರತ ಕ್ರಿಕೆಟ್ ತಂಡವು ಮೂವರು ಸ್ಪಿನ್ನರ್ಗಳು, ಇಬ್ಬರು ವೇಗಿಗಳು ಹಾಗೂ ಆರು ಬ್ಯಾಟರ್ಗಳೊಂದಿಗೆ ಕಣಕ್ಕಿಳಿದಿದೆ. ಸ್ಪಿನ್ನರ್ಗಳ ರೂಪದಲ್ಲಿ ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ಹಾಗೂ ಅಕ್ಷರ್ ಪಟೇಲ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ವೇಗಿಗಳ ರೂಪದಲ್ಲಿ ಮೊಹಮ್ಮದ್ ಶಮಿ ಹಾಗೂ ಮೊಹಮ್ಮದ್ ಸಿರಾಜ್ ಸ್ಥಾನ ಪಡೆದಿದ್ದಾರೆ.
ಟೆಸ್ಟ್ ಕ್ರಿಕೆಟ್ಗೆ ಸೂರ್ಯ, ಭರತ್ ಪಾದಾರ್ಪಣೆ: ಈಗಾಗಲೇ ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಮಿಂಚಿನ ಪ್ರದರ್ಶನ ತೋರಿರುವ ಸೂರ್ಯಕುಮಾರ್ ಯಾದವ್, ಇದೀಗ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದಾರೆ. ವಿಸ್ಪೋಟಕ ಬ್ಯಾಟಿಂಗ್ ಮೂಲಕ ಮಿಂಚಿರುವ ಸೂರ್ಯ, ಇದೀಗ ರೆಡ್ ಬಾಲ್ ಕ್ರಿಕೆಟ್ನಲ್ಲಿ ಯಾವ ರೀತಿ ಪ್ರದರ್ಶನ ತೋರಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಇನ್ನು ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ಕೆ ಎಸ್ ಭರತ್, ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ತಂಡಗಳು ಹೀಗಿವೆ ನೋಡಿ:
ಭಾರತ: ರೋಹಿತ್ ಶರ್ಮಾ(ನಾಯಕ), ಶುಭ್ಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಕೆ ಎಸ್ ಭರತ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್
ಆಸ್ಪ್ರೇಲಿಯಾ: ಡೇವಿಡ್ ವಾರ್ನರ್, ಉಸ್ಮಾನ್ ಖವಾಜ, ಮಾರ್ನಸ್ ಲಬುಶೇನ್, ಸ್ಟೀವ್ ಸ್ಮಿತ್, ಮ್ಯಾಟ್ ರೆನ್ಶೋ, ಪೀಟರ್ ಹ್ಯಾಂಡ್ಸ್ಕಂಬ್, ಅಲೆಕ್ಸ್ ಕೇರಿ, ಪ್ಯಾಟ್ ಕಮಿನ್ಸ್(ನಾಯಕ), ಟೋಡ್ ಮರ್ಫಿ, ನೇಥನ್ ಲಯನ್, ಸ್ಕಾಟ್ ಬೋಲೆಂಡ್
ಪಿಚ್ ರಿಪೋರ್ಚ್
ನಾಗ್ಪುರ ಪಿಚ್ ಸ್ಪಿನ್ ಸ್ನೇಹಿ ಪಿಚ್ ಆಗಿದ್ದು, ಇಲ್ಲಿ ಬ್ಯಾಟರ್ಗಳು ರನ್ ಗಳಿಸಲು ಹೆಚ್ಚಿನ ಪರಿಶ್ರಮ ವಹಿಸಬೇಕಾಗಬಹದು. ಅಶ್ವಿನ್ 3 ಟೆಸ್ಟ್ನಲ್ಲಿ 23 ವಿಕೆಟ್ ಕಬಳಿಸಿದ್ದು, ಜಡೇಜಾ 3 ಟೆಸ್ಟ್ನಲ್ಲಿ 12 ವಿಕೆಟ್ ಕಿತ್ತಿದ್ದಾರೆ. ಇಲ್ಲಿ ನಡೆದಿರುವ 6 ಟೆಸ್ಟ್ಗಳ ಪೈಕಿ 3 ಟೆಸ್ಟ್ಗಳು ಇನ್ನಿಂಗ್್ಸ ಜಯಕ್ಕೆ ಸಾಕ್ಷಿಯಾಗಿವೆ. ಇನ್ನೆರಡು ಪಂದ್ಯದಲ್ಲಿ 100ಕ್ಕೂ ಹೆಚ್ಚು ರನ್ ಗೆಲುವು ದಾಖಲಾಗಿದೆ.
ಟೆಸ್ಟ್ ವಿಶ್ವಕಪ್ ಫೈನಲ್ ಲೆಕ್ಕಾಚಾರ ಹೇಗೆ?
* ಆಸ್ಪ್ರೇಲಿಯಾ ವಿರುದ್ಧ ಭಾರತಕ್ಕೆ ಸರಣಿ ಗೆಲುವು ಅಗತ್ಯ
* ಸರಣಿ 2-2ರಲ್ಲಿ ಡ್ರಾಗೊಂಡು, ಕಿವೀಸ್ ವಿರುದ್ಧ ಲಂಕಾ 2-0ಯಲ್ಲಿ ಗೆದ್ದರೆ ಭಾರತ ಔಟ್
* ಸರಣಿ 1-1ರಲ್ಲಿ ಡ್ರಾಗೊಂಡು, ತವರಲ್ಲಿ ವಿಂಡೀಸ್ ವಿರುದ್ಧ ದ.ಆಫ್ರಿಕಾ 2-0ಯಲ್ಲಿ ಗೆದ್ದರೆ ಭಾರತ ಹೊರಕ್ಕೆ
* ಭಾರತ ವಿರುದ್ಧ ಆಸೀಸ್ 0-4ರಲ್ಲಿ ಸೋತು, ಕಿವೀಸ್ ವಿರುದ್ಧ ಲಂಕಾ 2-0ಯಲ್ಲಿ ಗೆದ್ದರೆ ಆಸೀಸ್ ಔಟ್