ಲಾಕ್‌ಡೌನ್ ಬಿಡುವಿನ ಸಮಯದಲ್ಲಿ ಬಂಗಾಳ ರಣಜಿ ಕ್ರಿಕೆಟಿಗರಿಗೆ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಕ್ರಿಕೆಟ್ ಪಾಠ ಮಾಡಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ.

ಕೋಲ್ಕತಾ(ಏ.19): ಲಾಕ್‌ಡೌನ್‌ನಿಂದಾಗಿ ಕ್ರಿಕೆಟ್‌ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಇತ್ತೀಚೆಗೆ ಮುಕ್ತಾಯಗೊಂಡ ರಣಜಿ ಟ್ರೋಫಿ ಫೈನಲ್‌ನಲ್ಲಿ ಸೌರಾಷ್ಟ್ರ ವಿರುದ್ಧ ಸೋಲಂಡ ಬಂಗಾಳ ತಂಡದ ಆಟಗಾರರಿಗೆ ಭಾರತದ ಮಾಜಿ ಕ್ರಿಕೆಟಿಗ ವಿವಿಎಸ್‌ ಲಕ್ಷ್ಮಣ್‌ ಆನ್‌ಲೈನ್‌ನಲ್ಲಿ ಪಾಠ ಮಾಡುತ್ತಿದ್ದಾರೆ. 

Add Asianetnews Kannada as a Preferred SourcegooglePreferred

ಫೈನಲ್‌ನಲ್ಲಿ ಆದ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಲಕ್ಷ್ಮಣ್‌ ಪ್ರತಿಯೊಬ್ಬ ಆಟಗಾರನ ಜತೆ ಪ್ರತ್ಯೇಕವಾಗಿ ಚರ್ಚೆ ನಡೆಸಿ ಸಲಹೆ, ಮಾರ್ಗದರ್ಶನ ನಿಡುತ್ತಿದ್ದಾರೆ ಎಂದು ಬಂಗಾಳ ಕ್ರಿಕೆಟ್‌ ಸಂಸ್ಥೆ ಅಧ್ಯಕ್ಷ ಅಭಿಷೇಕ್‌ ದಾಲ್ಮೀಯಾ ಹೇಳಿದ್ದಾರೆ.

ಬಂಗಾಳ ತಂಡವು ಬರೋಬ್ಬರಿ 13 ವರ್ಷಗಳ ಬಳಿಕ ರಣಜಿ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿತ್ತು. ಆದರೆ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದಾಗಿ 1989-90ರ ಬಳಿಕ ರಣಜಿ ಟ್ರೋಫಿ ಜಯಿಸುವ ಕನಸಿಗೆ ಸೌರಾಷ್ಟ್ರ ತಣ್ಣೀರೆರಚಿತ್ತು. ಇದರೊಂದಿಗೆ ಸೌರಾಷ್ಟ್ರ ಚೊಚ್ಚಲ ರಣಜಿ ಟ್ರೋಫಿ ಗೆದ್ದು ಸಂಭ್ರಮಿಸಿತು.

ಬಂಗಾಳ ಮಣಿಸಿ ಚೊಚ್ಚಲ ರಣಜಿ ಟ್ರೋಫಿ ಗೆದ್ದ ಸೌರಾಷ್ಟ್ರ!

2019-20ನೇ ಸಾಲಿನ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸೌರಾಷ್ಟ್ರ ಮೊದಲ ಇನಿಂಗ್ಸ್‌ನಲ್ಲಿ 425 ರನ್ ಬಾರಿಸಿತು. ಇದಕುತ್ತರವಾಗಿ ಬಂಗಾಳ ಒಂದು ಹಂತದಲ್ಲಿ 35 ರನ್ ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಅಂತಿಮವಾಗಿ ಬಂಗಾಳ 381 ರನ್ ಗಳಿಸುವಷ್ಟರಲ್ಲೇ ಆಲೌಟ್ ಆಯಿತು. ಮೊದಲ ಇನಿಂಗ್ಸ್ ಇನಿಂಗ್ಸ್ ಮುನ್ನಡೆಯ ಆಧಾರದಲ್ಲಿ ಸೌರಷ್ಟ್ರ ಚಾಂಪಿಯನ್ ಪಟ್ಟ ಅಲಂಕರಿಸಿತು. 2018-19ನೇ ಸಾಲಿನ ರಣಜಿ ಟ್ರೋಫಿಯಲ್ಲಿ ಬಂಗಾಳ ಆರಂಭಿಕ ಬ್ಯಾಟ್ಸ್‌ಮನ್ ಅಭಿಮನ್ಯು ಈಶ್ವರನ್ 2 ದ್ವಿಶತಕ ಸಹಿತ ಭರ್ಜರಿ ರನ್ ಭೇಟೆಯಾಡಿದ್ದರು. ಆದರೆ 2019-20ನೇ ಸಾಲಿನ ಟೂರ್ನಿಯಲ್ಲಿ 17 ಇನಿಂಗ್ಸ್‌ಗಳಲ್ಲಿ 17.20 ಸರಾಸರಿಯಲ್ಲಿ ಕೇವಲ258 ರನ್ ಬಾರಿಸಲಷ್ಟೇ ಶಕ್ತರಾಗಿದ್ದಾರೆ.