ಆಸ್ಟ್ರೇಲಿಯಾ ಸರಣಿ ಸೋಲಿನ ಬೆನ್ನಲ್ಲೇ ಬಿಸಿಸಿಐ ಜ12ರಂದು ಮುಂಬೈನಲ್ಲಿ ಸಭೆ ಕರೆದಿದೆ. ಗಂಭೀರ್ ಭವಿಷ್ಯ, ರೋಹಿತ್-ಕೊಹ್ಲಿ ಟೆಸ್ಟ್ ಮುಂದುವರಿಕೆ ಕುರಿತು ಚರ್ಚಿಸಲಾಗುವುದು. ಇಂಗ್ಲೆಂಡ್ ಪ್ರವಾಸ ಹಾಗೂ 2025-27ರ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ತಂಡ ಕಟ್ಟುವ ಬಗ್ಗೆಯೂ ನಿರ್ಧಾರ ಕೈಗೊಳ್ಳಲಾಗುವುದು. 

ನವದೆಹಲಿ: ಆಸ್ಟ್ರೇಲಿಯಾದಲ್ಲಿ ಭಾರತ ತಂಡ ಟೆಸ್ಟ್‌ ಸರಣಿ ಸೋತ ಬೆನ್ನಲ್ಲೇ, ಕೆಲ ಪ್ರಮುಖ ಪ್ರಶ್ನೆಗಳಿಗೆ ಉತ್ತರ ಹುಡುಕಲು ಬಿಸಿಸಿಐ ಮುಂದಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಜ.12ಕ್ಕೆ ಮುಂಬೈನಲ್ಲಿ ವಿಶೇಷ ಸಾಮಾನ್ಯ ಸಭೆ ಕರೆಯಲಾಗಿದ್ದು, ಬಿಸಿಸಿಐನ ನೂತನ ಕಾರ್ಯದರ್ಶಿಯಾಗಿ ದೇವ್‌ಜಿತ್‌ ಸಾಯ್ಕಿಯಾ ಹಾಗೂ ಖಜಾಂಚಿಯಾಗಿ ಪ್ರಭ್‌ತೇಜ್‌ ಭಾಟಿಯಾ ಅವಿರೋಧ ಆಯ್ಕೆಯಾಗಲಿದ್ದಾರೆ. ಅದೇ ದಿನ ಭಾರತ ತಂಡದ ಕುರಿತೂ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ತವರಿನಲ್ಲಿ ನ್ಯೂಜಿಲೆಂಡ್‌ ವಿರುದ್ಧ 0-3ರಲ್ಲಿ ವೈಟ್‌ವಾಶ್‌ ಮುಖಭಂಗ ಅನುಭವಿಸಿದಾಗಲೇ ಗೌತಮ್‌ ಗಂಭೀರ್‌ರನ್ನು ಕೇವಲ ಸೀಮಿತ ಓವರ್ ತಂಡಗಳಿಗೆ ಕೋಚ್‌ ಆಗಿ ಉಳಿಸಿ, ಟೆಸ್ಟ್‌ ತಂಡಕ್ಕೆ ವಿವಿಎಸ್‌ ಲಕ್ಷ್ಮಣ್‌ ಅಥವಾ ಮತ್ತಿನ್ಯಾರಾದರೂ ಹೊಸಬರನ್ನು ನೇಮಿಸುವ ಕುರಿತು ಬಿಸಿಸಿಐ ಚಿಂತನೆ ಶುರು ಮಾಡಿತ್ತು ಎನ್ನಲಾಗಿದೆ. ಇದೀಗ ಬಾರ್ಡರ್‌-ಗವಾಸ್ಕರ್‌ ಟೂರ್ನಿಯಲ್ಲಿ ಎದುರಾದ ಸೋಲು, ಕೋಚ್‌ ಗಂಭೀರ್‌ಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿದಂತೆ ಕಾಣುತ್ತಿದೆ.

ಗಂಭೀರ್‌ರನ್ನು ಟೆಸ್ಟ್‌ ತಂಡದ ಕೋಚ್‌ ಆಗಿ ಮುಂದುವರಿಸಬೇಕೇ ಬೇಡವೆ ಎನ್ನುವ ಬಗ್ಗೆ ಬಿಸಿಸಿಐನ ನೂತನ ಕಾರ್ಯದರ್ಶಿ ದೇವ್‌ಜಿತ್‌ ಅವರು ಪ್ರಧಾನ ಆಯ್ಕೆಗಾರ ಅಜಿತ್‌ ಅಗರ್ಕರ್‌ ಜೊತೆ ಚರ್ಚಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ವಿರಾಟ್ ಕೊಹ್ಲಿ ಈ ಆಸೀಸ್ ಆಟಗಾರರ ಜೊತೆ ಜಗಳಕ್ಕೆ ಇಳಿಯಬಾರದಿತ್ತು: ಗವಾಸ್ಕರ್

ಹಿರಿಯ ಬ್ಯಾಟರ್‌ಗಳ ಬಗ್ಗೆಯೂ ಚರ್ಚೆ

ಭಾರತ ತಂಡ ಇನ್ನು 6 ತಿಂಗಳು ಟೆಸ್ಟ್‌ ಆಡುವುದಿಲ್ಲ. ಜೂನ್‌ನಲ್ಲಿ ಇಂಗ್ಲೆಂಡ್‌ ಪ್ರವಾಸ ಕೈಗೊಳ್ಳಲಿದ್ದು, 2025-27ರ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಭಿಯಾನವನ್ನು ಅಲ್ಲೇ ಆರಂಭಿಸಲಿದೆ. 2 ವರ್ಷ ಅವಧಿಯಲ್ಲಿ ನಡೆಯಲಿರುವ ಎಲ್ಲಾ ಸರಣಿಗಳನ್ನು ಆಡುವ ಆಟಗಾರರನ್ನು ಗುರುತಿಸಿ ಆಯ್ಕೆ ಮಾಡಬೇಕಿದೆ. 

ಹಿರಿಯ ಬ್ಯಾಟರ್‌ಗಳಾದ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ 2027ರ ವರೆಗೂ ಟೆಸ್ಟ್‌ ಕ್ರಿಕೆಟ್‌ನಲ್ಲಿ ಮುಂದುವರಿಯಲಿದ್ದಾರೆಯೇ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. ಹೀಗಾಗಿ, ಈ ಇಬ್ಬರು ಆಟಗಾರರ ಜೊತೆಯೂ ಅಗರ್ಕರ್‌ ಹಾಗೂ ಕಾರ್ಯದರ್ಶಿ ದೇವ್‌ಜಿತ್‌ ಸಾಯ್ಕಿಯಾ ಮಾತುಕತೆ ನಡೆಸಿ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಗೆ ಆಯ್ಕೆ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಬಹುದು ಎಂದು ಹೇಳಲಾಗುತ್ತದೆ.

ಗಾಯಾಳು ಬುಮ್ರಾ ಇಂಗ್ಲೆಂಡ್‌ ಸರಣಿಗೆ ಅನುಮಾನ: ಚಾಂಪಿಯನ್ಸ್‌ ಟ್ರೋಫಿಗೆ ಫಿಟ್‌ ಆಗ್ತಾರಾ?

ಬಾರ್ಡರ್-ಗವಾಸ್ಕರ್ ಸರಣಿ ಸೋಲಿಗಿಂತ ತವರಲ್ಲಿ 0-3 ವೈಟ್‌ವಾಶ್ ನೋವು ನೀಡಿತು: ಯುವಿ

ದುಬೈ: ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್- ಗವಾಸ್ಕರ್ ಟ್ರೋಫಿಯಲ್ಲಿ 1-3ರ ಅಂತರದಲ್ಲಿ ಸೋತಿದ್ದಕ್ಕಿಂತ, ಕಳೆದ ವರ್ಷ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ 0-3ರಲ್ಲಿ ವೈಟ್‌ವಾಶ್ ಮುಖಭಂಗ ಅನುಭವಿಸಿದ್ದು, ಹೆಚ್ಚು ನೋವು ನೀಡಿತು ಎಂದು ಭಾರತದ ಮಾಜಿ ಆಲ್ರೌಂಡರ್‌ ಯುವರಾಜ್ ಸಿಂಗ್ ಹೇಳಿದ್ದಾರೆ.

ಸುದ್ದಿ ಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿರುವ ಯುವರಾಜ್, ತವರಿನಲ್ಲಿ ನಮ್ಮವರು 0-3ರಲ್ಲಿ ಸೋತಿದ್ದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಆ ಫಲಿತಾಂಶ ಬಹಳ ನೋವು ನೀಡಿತು. ಆಸ್ಟ್ರೇಲಿಯಾದಲ್ಲಿ ಈ ಹಿಂದಿನ 2 ಸರಣಿಯಲ್ಲಿ ನಾವು ಗೆದ್ದಿದ್ದೆವು. ಹಾಗಾಗಿ ಈ ಸಲದ ಸೋಲನ್ನು ತಕ್ಕಮಟ್ಟಿಗೆ ಒಪ್ಪಬಹುದು. ಆದರೆ, ನ್ಯೂಜಿಲೆಂಡ್ ವಿರುದ್ಧ ಕಳೆದ ವರ್ಷ ಭಾರತದಲ್ಲೇ ನಡೆದ ಸರಣಿಯಲ್ಲಿ ನಮ್ಮ ತಂಡ ಸಂಪೂರ್ಣ ವೈಫಲ್ಯ ಅನುಭವಿಸಿತು' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.