Asianet Suvarna News Asianet Suvarna News

ಛಲದಂಕಮಲ್ಲ ದಾದಾಗಿಂದು 48ನೇ ಹುಟ್ಟುಹಬ್ಬದ ಸಂಭ್ರಮ

ಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿ ಪಾದಾರ್ಪಣೆ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿ ಅಬ್ಬರಿಸಿದ ದಾದಾ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಹಲವು ಏಳು ಬೀಳುಗಳನ್ನು ಕಂಡಿದ್ದಾರೆ. ದಾದಾ ಹುಟ್ಟುಹಬ್ಬಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

BCCI President Former Skipper Sourav Ganguly Celebrates his 48th Birthday
Author
Bengaluru, First Published Jul 8, 2020, 12:30 PM IST

ಬೆಂಗಳೂರು(ಜು.08): ಬಿಸಿಸಿಐ ಅಧ್ಯಕ್ಷ, ಪ್ರಿನ್ಸ್ ಆಫ್ ಕೋಲ್ಕತಾ ಖ್ಯಾತಿಯ ಸೌರವ ಗಂಗೂಲಿ ಇಂದು 48ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಆಕ್ರಮಣಕಾರಿ ನಾಯಕತ್ವದ ಮೂಲಕ ವಿದೇಶದಲ್ಲೂ ಭಾರತ ಸರಣಿ ಗೆಲ್ಲಲಿದೆ ಎನ್ನುವುದನ್ನು ಸಾಧಿಸಿ ತೋರಿಸಿದ ಛಲದಂಕಮಲ್ಲನಿಗೆ ಜನ್ಮದಿನದಂದು ಶುಭಾಶಯಗಳ ಮಹಾಪೂರವೇ ಹರಿದು ಬರಲಾರಂಭಿಸಿವೆ.
 
ಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿ ಪಾದಾರ್ಪಣೆ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿ ಅಬ್ಬರಿಸಿದ ದಾದಾ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಹಲವು ಏಳು ಬೀಳುಗಳನ್ನು ಕಂಡಿದ್ದಾರೆ. ಮ್ಯಾಚ್‌ ಫಿಕ್ಸಿಂಗ್‌ ವಿವಾದದ ಬಳಿಕ ಹಲವು ಮಹಾನ್‌ ತಲೆಗಳು ಉರುಳಿದಾಗ ದಾದಾಗೆ ಟೀಂ ಇಂಡಿಯಾ ನಾಯಕ ಪಟ್ಟ ಒಲಿದು ಬಂತು. ಈ ಸವಾಲನ್ನು ಅವಕಾಶವಾಗಿ ಬಳಸಿಕೊಂಡ ದಾದಾ ಟೀಂ ಇಂಡಿಯಾಗೆ ಭದ್ರಬುನಾದಿಯನ್ನು ಹಾಕುವಲ್ಲಿ ಯಶಸ್ವಿಯಾದರು. ವಿರೇಂದ್ರ ಸೆಹ್ವಾಗ್, ಜಹೀರ್ ಖಾನ್, ಹರ್ಭಜನ್ ಸಿಂಗ್, ಯುವರಾಜ್ ಸಿಂಗ್, ಮಹೇಂದ್ರ ಸಿಂಗ್ ಧೋನಿ, ಗೌತಮ್ ಗಂಭೀರ್ ಅವರಂತಹ ಆಟಗಾರರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪರಿಚಯಿಸಿದರು. 2003ರಲ್ಲಿ ಸೌರವ್ ನೇತೃತ್ವದ ತಂಡ ವಿಶ್ವಕಪ್ ಫೈನಲ್ ಪ್ರವೇಶಿಸಿತ್ತಾದರೂ ಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದರೆ ಇದೇ ಆರು ಆಟಗಾರರು 2011ರ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 

ವಿಶ್ವಗೆದ್ದ ಧೋನಿಗಿಂದು 39ನೇ ಹುಟ್ಟುಹಬ್ಬದ ಸಂಭ್ರಮ

ಗಾಡ್ ಆಫ್ ಆಪ್‌ಸೈಡ್ ಎನ್ನುವ ಬಿರುದಾಂಕಿತ ಸೌರವ್ ಗಂಗೂಲಿ ಸಿಕ್ಸರ್ ಬಾರಿಸುವುದನ್ನು ನೋಡುವುದೇ ಕಣ್ಣಿಗೆ ಒಂದು ರೀತಿಯ ಹಬ್ಬ. ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 10 ಸಾವಿರ ರನ್ ಪೂರೈಸಿದ ಮೂರನೇ ಕ್ರಿಕೆಟಿಗ, ಏಕದಿನ ವಿಶ್ವಕಪ್‌ನಲ್ಲಿ ಭಾರತ ಪರ ಗರಿಷ್ಠ ವೈಯುಕ್ತಿಕ ಸ್ಕೋರ್(183), ನಾಟ್ ವೆಸ್ಟ್ ಸರಣಿಯ ಸ್ಮರಣೀಯ ಗೆಲುವುಗಳು ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿದಿವೆ. ಸಚಿನ್, ದ್ರಾವಿಡ್, ಶ್ರೀನಾಥ್, ಕುಂಬ್ಳೆ ಅವರಂತಹ ಹಿರಿಯ ಆಟಗಾರರ ಜತೆ ಯುವಿ, ಕೈಫ್, ಸೆಹ್ವಾಗ್, ಭಜ್ಜಿ ಆಟಗಾರರನ್ನೊಳಗೊಂಡ ಬಲಿಷ್ಠ ತಂಡ ಕಟ್ಟಿದ ಕೀರ್ತಿ ದಾದಾಗೆ ಸಲ್ಲುತ್ತದೆ. ಕ್ರಿಕೆಟ್ ಮಾಣಿಕ್ಯ ಧೋನಿಯ ಆರಂಭಿಕ ವೈಫಲ್ಯದ ಹೊರತಾಗಿಯೂ ಹೆಚ್ಚೆಚ್ಚು ಅವಕಾಶ ನೀಡಿ ದಿಗ್ಗಜ ಆಟಗಾರನಾಗುವುದರ ಹಿಂದೆ ದಾದಾ ದೂರದೃಷ್ಠಿ ಇತ್ತು ಎಂದರೆ ಅತಿಶಯೋಕ್ತಿಯಾಗಲಾರದು.

ಸದಾ ಕ್ರಿಯಾಶೀಲ ವ್ಯಕ್ತಿಯಾಗಿರುವ ಸೌರವ್, ಬಿಸಿಸಿಐ ಅಧ್ಯಕ್ಷರಾದ ಬಳಿಕ ಅರ್ಹನಿಶಿ ಟೆಸ್ಟ್ ಪಂದ್ಯವನ್ನು ಆಯೋಜಿಸಿ ಸೈ ಎನಿಸಿಕೊಂಡಿದ್ದಾರೆ. ಕೋಲ್ಕತಾದ ಈಡನ್ ಗಾರ್ಡನ್ ಮೈದಾನ ಭಾರತ-ಬಾಂಗ್ಲಾದೇಶ ನಡುವಿನ ಹಗಲು ರಾತ್ರಿ ಟೆಸ್ಟ್ ಪಂದ್ಯಕ್ಕೆ ಸಾಕ್ಷಿಯಾಗಿತ್ತು. ಈ ಮೂಲಕ ತಾವು ಕೇವಲ ಉತ್ತಮ ನಾಯಕ ಮಾತ್ರವಲ್ಲ, ಅತ್ಯುತ್ತಮ ಆಡಳಿತಗಾರನೂ ಹೌದು ಎನಿಸಿಕೊಂಡಿದ್ದಾರೆ 

ಸೌರವ್ ಗಂಗೂಲಿ ಭಾರತ ಪರ 113 ಟೆಸ್ಟ್ ಹಾಗೂ 311 ಏಕದಿನ ಪಂದ್ಯಗಳನ್ನಾಡಿದ್ದು, ಕ್ರಮವಾಗಿ 7,212 ಹಾಗೂ 11363 ರನ್ ಬಾರಿಸಿದ್ದಾರೆ. ದಾದಾ ಹುಟ್ಟುಹಬ್ಬಕ್ಕೆ ಸಚಿನ್ ತೆಂಡುಲ್ಕರ್ ಸೇರಿದಂತೆ ಹಲವು ಮಾಜಿ ಹಾಗೂ ಹಾಲಿ ಕ್ರಿಕೆಟಿಗರು ಶುಭಕೋರಿದ್ದಾರೆ. 

#NewsIN100Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"

Follow Us:
Download App:
  • android
  • ios