ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಟಿ20 ಲೀಗ್‌ಗಳನ್ನು ಬಿಸಿಸಿಐ ರದ್ದು ಮಾಡುವ ಸಾಧ್ಯತೆ ಇದೆ. ಯಾಕೆ ಹೀಗೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ. 

ನವದೆಹಲಿ(ಫೆ.08): ಕರ್ನಾಟಕ ಪ್ರೀಮಿಯರ್‌ ಲೀಗ್‌ (ಕೆಪಿಎಲ್‌) ಸೇರಿದಂತೆ ರಾಜ್ಯ ಕ್ರಿಕೆಟ್‌ ಸಂಸ್ಥೆಗಳು ಆಯೋಜಿಸುವ ಟಿ20 ಲೀಗ್‌ಗಳನ್ನು ರದ್ದುಗೊಳಿಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ‘ಮಿನಿ ಐಪಿಎಲ್‌’ಗಳೆಂದು ಕರೆಸಿಕೊಳ್ಳುವ ಈ ಟೂರ್ನಿಗಳಲ್ಲಿ ವ್ಯಾಪಕವಾಗಿ ಭ್ರಷ್ಟಾಚಾರ ನಡೆಯುತ್ತಿದ್ದು, ಕಳೆದ ವರ್ಷ ಕೆಪಿಎಲ್‌ನಲ್ಲೂ ಫಿಕ್ಸಿಂಗ್‌, ಬೆಟ್ಟಿಂಗ್‌ ನಡೆದಿರುವುದು ಬೆಳಕಿಗೆ ಬಂದಿತ್ತು. ಆಟಗಾರರು, ಆಡಳಿತಗಾರರನ್ನು ಪೊಲೀಸಲು ಬಂಧಿಸಿ ವಿಚಾರಣೆ ನಡೆಸಿದ್ದರು.

Add Asianetnews Kannada as a Preferred SourcegooglePreferred

ಇಂತಹ ಟೂರ್ನಿಗಳಲ್ಲಿ ತಂಡ ಖರೀದಿಸುವ ಮಾಲಿಕರ ಬಗ್ಗೆ, ಅವರ ವ್ಯವಹಾರಗಳ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ. ಹೀಗಿರುವಾಗ ಅಂತವರು ಬಂಡವಾಳ ಹೂಡಿಕೆ ಮಾಡಿ, ಆದಾಯ ಗಳಿಸಲು ಭ್ರಷ್ಟಾಚಾರ ನಡೆಸುವ ಸಾಧ್ಯತೆಗಳು ಹೆಚ್ಚಿರುತ್ತವೆ. ಬಹುತೇಕ ಲೀಗ್‌ಗಳಲ್ಲಿ ಇಂತಹ ಘಟನೆಗಳು ನಡೆದ ಉದಾಹಣೆಗಳಿದ್ದು, ಇದಕ್ಕೆ ಶಾಶ್ವತವಾಗಿ ಕಡಿವಾಣ ಹಾಕುವಂತೆ ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ದಳದ ಮುಖ್ಯಸ್ಥ ಅಜಿತ್‌ ಸಿಂಗ್‌, ಅಧ್ಯಕ್ಷ ಸೌರವ್‌ ಗಂಗೂಲಿ ಹಾಗೂ ಕಾರ‍್ಯದರ್ಶಿ ಜಯ್‌ ಶಾ ಅವರ ಪ್ರಸ್ತಾಪ ಇರಿಸಿದ್ದಾಗಿ ಹೇಳಲಾಗಿದೆ. 

ದೇಶ ಮೊದಲು ಎಂದ ಸಚಿನ್ ತೆಂಡುಲ್ಕರ್‌ಗೆ ಭಾರಿ ಬೆಂಬಲ!

ಫ್ರಾಂಚೈಸಿ ಮಾದರಿಯ ಮಿನಿ ಐಪಿಎಲ್‌ಗಳನ್ನು ರದ್ದುಗೊಳಿಸಿ, ರಾಜ್ಯ ಸಂಸ್ಥೆಗಳೇ ಟಿ20 ಟೂರ್ನಿಗಳನ್ನು ನಡೆಸಬೇಕು ಎನ್ನುವ ನಿಯಮವನ್ನು ಜಾರಿಗೊಳಿಸಲು ಬಿಸಿಸಿಐ ಶೀಘ್ರ ನಿರ್ಧಾರ ಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.