ದೇಸಿ ಕ್ರಿಕೆಟ್: ಬಿಸಿಸಿಐನಿಂದ 100 ಪುಟ ಮಾರ್ಗಸೂಚಿ
ಬಿಸಿಸಿಐ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ 100 ಪುಟಗಳ ಮಾರ್ಗಸೂಚಿಯನ್ನು ಕಳಿಸಿದೆ. ಇದರಲ್ಲಿ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ತಿಳಿಸಲಾಗಿದೆ. ದೇಸಿ ಕ್ರಿಕೆಟ್ಗೆ ಸಂಬಂಧಿಸಿದಂತೆ ಬಿಸಿಸಿಐ ಸಲಹೆಗಳೇನು ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ
ನವದೆಹಲಿ(ಆ.04): ಕೊರೋನಾ ಸೋಂಕಿನ ಭೀತಿ ನಡುವೆಯೇ ಕ್ರಿಕೆಟ್ ಅಭ್ಯಾಸಕ್ಕೆ ಮರಳುವ ದೇಸಿ ಕ್ರಿಕೆಟಿಗರು, ಸೋಂಕು ತಗುಲಿದರೆ ತಾವೇ ಜವಾಬ್ದಾರರು ಎಂದು ತಮ್ಮ ತಮ್ಮ ರಾಜ್ಯ ಸಂಸ್ಥೆಗಳಿಗೆ ಒಪ್ಪಿಗೆ ಪತ್ರ ನೀಡಬೇಕು ಎಂದು ಬಿಸಿಸಿಐ ತನ್ನ ಮಾರ್ಗಸೂಚಿಯಲ್ಲಿ ತಿಳಿಸಿದೆ.
ಭಾನುವಾರ 100 ಪುಟಗಳ ಮಾರ್ಗಸೂಚಿ ಪ್ರಕಟಿಸಿರುವ ಬಿಸಿಸಿಐ, ಆಟಗಾರರು ಕ್ರೀಡಾಂಗಣಗಳಿಗೆ ಆಗಮಿಸಿ ಅಭ್ಯಾಸ ನಡೆಸುವ ವೇಳೆ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು. ಅಭ್ಯಾಸ ಶಿಬಿರ ಆರಂಭಗೊಳ್ಳುವ ಮುನ್ನ ಆಟಗಾರರ 2 ವಾರಗಳ ಪ್ರವಾಸ ಹಾಗೂ ಆರೋಗ್ಯ ವಿವರಗಳನ್ನು ಆನ್ಲೈನ್ನಲ್ಲಿ ಸಂಗ್ರಹಿಸಬೇಕು ಎಂದು ತಿಳಿಸಿದೆ. ಯಾವುದೇ ಆಟಗಾರನಿಗೆ ಸೋಂಕಿನ ಲಕ್ಷಣ ಕಂಡು ಬಂದಲ್ಲಿ 2 ಬಾರಿ ಪರೀಕ್ಷೆ ನಡೆಸುವಂತೆ ರಾಜ್ಯ ಸಂಸ್ಥೆಗಳಿಗೆ ಬಿಸಿಸಿಐ ಸೂಚಿಸಿದೆ. ಐಸಿಸಿ ನಿಯಮದ ಪ್ರಕಾರ, ಆಟಗಾರರು ಚೆಂಡಿಗೆ ಎಂಜಲು ಹಾಕಿ ಉಜ್ಜುವಂತಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.
2004ರ ಸುನಾಮಿ ಅಲೆಯಿಂದ ಪಾರಾಗಿದ್ದ ಅನಿಲ್ ಕುಂಬ್ಳೆ!
60 ದಾಟಿದವರಿಗಿಲ್ಲ ಪ್ರವೇಶ: 60 ವರ್ಷದ ದಾಟಿದ ಕೋಚ್, ಸಹಾಯಕ ಸಿಬ್ಬಂದಿ, ಮೈದಾನ ಸಿಬ್ಬಂದಿ ಸೇರಿ ಇನ್ಯಾವುದೇ ಅಧಿಕಾರಿಗಳು ಅಭ್ಯಾಸ ಶಿಬಿರ ನಡೆಯುವ ಸ್ಥಳಕ್ಕೆ ಪ್ರವೇಶಿಸುವಂತಿಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಿರುವ ಬಿಸಿಸಿಐ, ದೇಸಿ ಕ್ರಿಕೆಟ್ ಟೂರ್ನಿಗಳನ್ನು ಆರಂಭಿಸಲು ಟಾಸ್ಕ್ ಫೋರ್ಸ್ ರಚನೆ ಮಾಡಲು ಮುಂದಾಗಿದೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ರಾಹುಲ್ ದ್ರಾವಿಡ್, ಟಾಸ್ಕ್ ಫೋರ್ಸ್ನ ಭಾಗವಾಗಿರಲಿದ್ದಾರೆ.
2020-21ರ ದೇಸಿ ಋುತು ಆಗಸ್ಟ್ನಲ್ಲಿ ಆರಂಭಗೊಳ್ಳಬೇಕಿತ್ತು. ಆದರೆ ಕೊರೋನಾ ಹಿನ್ನೆಲೆಯಲ್ಲಿ ಕೆಲ ಟೂರ್ನಿಗಳನ್ನು ನಡೆಸದಿರುವ ನಿರ್ಧರಿಸಿರುವ ಬಿಸಿಸಿಐ, ಕೆಲ ದಿನಗಳಲ್ಲಿ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸುವ ಸಾಧ್ಯತೆ ಇದೆ.