T 20 World Cup India vs Pakistan: ಭಾರತ ಮತ್ತು ಪಾಕಿಸ್ತಾನ ಟಿ 20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಮತ್ತೊಮ್ಮೆ ಮುಖಾಮುಖಿಯಾಗುವ ಸಾಧ್ಯತೆಯಿದೆ. ಈ ಬಗ್ಗೆ ಪಾಕಿಸ್ತಾನ ನಾಯಕ ಬಾಬರ್‌ ಆಜಮ್‌ ಪ್ರತಿಕ್ರಿಯೆ ನೀಡಿದ್ದಾರೆ.

ನವದೆಹಲಿ: ಸೂಪರ್‌ 12 ಹಂತದಲ್ಲೇ ಆಚೆ ಹೋಗಬೇಕಿದ್ದ ಬಾಬರ್‌ ಆಜಮ್‌ ನೇತೃತ್ವದ ಪಾಕಿಸ್ತಾನ ತಂಡ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿ ಫೈನಲ್‌ ತಲುಪಿದ್ದಾರೆ. ಒಂದು ಪಂದ್ಯದಲ್ಲೂ ಎರಡಂಕಿ ದಾಟದ ಬಾಬರ್‌ ಆಜಮ್‌ ಕೂಡ ಫಾರ್ಮ್‌ಗೆ ಮರಳಿದ್ದಾರೆ. ಆರಂಭಿಕರಾದ ಬಾಬರ್‌ ಮತ್ತು ಮೊಹಮ್ಮದ್‌ ರಿಜ್ವಾನ್‌ ಇಬ್ಬರೂ ಶತಕದ ಜತೆಯಾಟವಾಡುವ ಮೂಲಕ ಪಾಕಿಸ್ತಾನ ತಂಡಕ್ಕೆ ಆತ್ಮಸ್ಥೈರ್ಯ ಹೆಚ್ಚಿಸಿದ್ದಾರೆ. ಜಿಂಬಾಬ್ವೆ ವಿರುದ್ಧ ಸೋತ ಬಳಿಕ ಜಿಂಬಾಬ್ವೆ ಅಧ್ಯಕ್ಷ ಪಾಕಿಸ್ತಾನ ತಂಡವನ್ನು ಹೀಗಳೆದಿದ್ದರು. ಇದರ ನಂತರ ಪಾಕಿಸ್ತಾನ ಪ್ರಧಾನಿ ಶರೀಫ್‌ ಕೂಡ ಪ್ರತಿಕ್ರಿಯೆ ನೀಡಿ, ಪಾಕಿಸ್ತಾನ ಮೈಕೊಡವಿ ಎದ್ದು ನಿಲ್ಲುವುದಕ್ಕೆ ಹೆಸರುವಾಸಿ ಎಂದಿದ್ದರು. ಇದಾದ ಬಳಿಕ ಪಾಕಿಸ್ತಾನ ತಂಡ ಭಯಂಕರ ಕಮ್‌ಬ್ಯಾಕ್‌ ಮಾಡಿದೆ. 

Add Asianetnews Kannada as a Preferred SourcegooglePreferred

ಇದೀಗ ಫೈನಲ್‌ ತಲುಪಿರುವ ಪಾಕಿಸ್ತಾನ ತಂಡ ಇಂದು ಭಾರತ ಮತ್ತು ಇಂಗ್ಲೆಂಡ್‌ ನಡುವಿನ ಪಂದ್ಯದ ಮೇಲೆ ಕಣ್ಣಿಟ್ಟಿದೆ. ಇಂಗ್ಲೆಂಡ್‌ ಫೈನಲ್‌ಗೆ ಬಂದರೆ ಪಾಕಿಸ್ತಾನಕ್ಕೆ ಅಷ್ಟೇನೂ ಪ್ರೆಷರ್‌ ಬೀಳುವುದಿಲ್ಲ. ಭಾರತ ತಂಡಕ್ಕಿಂತ ಬಲಿಷ್ಟ ತಂಡವಾದರೂ, ಪಾಕಿಸ್ತಾನ ಸೋತರೆ ಮುಂದೇನು ಎಂಬ ಯೋಚನೆ ಮಾಡಬೇಕಿಲ್ಲ. ಮೈ ಚಳಿ ಬಿಟ್ಟು ಇಂಗ್ಲೆಂಡ್‌ ಎದುರಿಸಲು ಪಾಕಿಸ್ತಾನ ಸಜ್ಜಾಗುತ್ತದೆ. ಆದರೆ ಭಾರತ ತಂಡ ಫೈನಲ್‌ ತಲುಪಿದರೆ ಮಾತ್ರ ಪಾಕಿಸ್ತಾನಕ್ಕೆ ಭಯ ಆರಂಭವಾಗಲಿದೆ. ಭಾರತಕ್ಕೂ ಅಷ್ಟೇ ಭಯ ಇರಲಿದೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಮತ್ತು ಭಾರತ ಪಂದ್ಯದ ವೇಳೆ ಆಡುವವರಿಗಷ್ಟೇ ಅಲ್ಲ, ಪಂದ್ಯ ವೀಕ್ಷಿಸುವ ಅಭಿಮಾನಿಗಳಿಗೂ ಅಷ್ಟೇ ಭಯವಿರುತ್ತದೆ. ತುದಿಗಾಲಿನಲ್ಲೇ ಕುಳಿತು ಪಂದ್ಯ ನೋಡಬೇಕು. 

ಇದನ್ನೂ ಓದಿ: T20 WORLD CUP ಅಡಿಲೇಡ್‌ನಲ್ಲಿಂದು ಭಾರತ-ಇಂಗ್ಲೆಂಡ್ ಸೆಮೀಸ್ ಕದನ

ಭಾರತ ಇನ್ಯಾವುದಾದರೂ ತಂಡದ ವಿರುದ್ಧ ಆಡುತ್ತಿದ್ದರೆ ಅದು ಕ್ರೀಡೆ. ಆದರೆ ಪಾಕಿಸ್ತಾನದ ವಿರುದ್ಧ ಆಡುತ್ತಿದ್ದರೆ ಅದು ಎಮೋಷನ್‌. ಪಾಕಿಸ್ತಾನ ತಂಡಕ್ಕೂ ಕೂಡ ಇದೇ ರೀತಿಯಾಗಿರುತ್ತದೆ. ಲೀಗ್‌ ಹಂತದಲ್ಲಿ ಪಾಕಿಸ್ತಾನವನ್ನು ಭಾರತ ಸೋಲಿಸಿತ್ತು. ಅದಾದ ಬಳಿಕ ಈಗ ಭಾರತ ಫೈನಲ್‌ ತಲುಪಿದರೆ ಮತ್ತೆ ಪಾಕಿಸ್ತಾನವನ್ನು ಎದುರಿಸಲಿದೆ. ಈ ಬಗ್ಗೆ ಪಾಕಿಸ್ತಾನ ನಾಯಕ ಬಾಬರ್‌ ಆಜಮ್‌ಗೆ ಪತ್ರಕರ್ತರೊಬ್ಬರು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಬಾಬರ್‌, "ಯಾವುದೇ ತಂಡ ಫೈನಲ್‌ಗೆ ಬರಲಿ ನಾವು ನಮ್ಮ 100% ಕೊಡಲು ಪ್ರಯತ್ನಿಸುತ್ತೇವೆ. ಫೈನಲ್‌ ತಲುಪಿದ ನಂತರ ನಾವು ಫಿಯರ್‌ಲೆಸ್‌ ಕ್ರಿಕೆಟ್‌ ಆಡಲು ಬಯಸುತ್ತೇವೆ. ತಂಡ ಯಾವುದೇ ಬರಲಿ, ನಮ್ಮ ಆಟ ನಾವು ಆಡುತ್ತೇವೆ. ಫೈನಲ್‌ ಎಂದ ಮೇಲೆ ಒತ್ತಡ ಇದ್ದೇ ಇರುತ್ತದೆ. ಅದು ಭಾರತದ ಮೇಲಿರಲಿ ಅಥವಾ ಬೇರೆ ತಂಡಗಳ ಮೇಲಿರಲಿ," ಎಂದಿದ್ದಾರೆ. 

ಇದನ್ನೂ ಓದಿ: T20 World cup ಭಾರತ ಇಂಗ್ಲೆಂಡ್ ಪಂದ್ಯಕ್ಕೆ ಆತಂಕ, ಆಡಿಲೇಡ್‌ನಲ್ಲಿ ಗುಡುಗು ಸಿಡಿಲು!

ಇಂದು ಅಡಿಲೇಡ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್‌ ನಡುವೆ ಎರಡನೇ ಸೆಮಿ ಫೈನಲ್‌ ನಡೆಯಲಿದೆ. ಆದರೆ ನಿನ್ನೆ ಇಡೀ ಮಳೆಯಾಗಿದ್ದು, ಇಂದು ಕೂಡ ಮಳೆರಾಯ ಪಂದ್ಯ ನಡೆಯದಂತೆ ಮಾಡುವ ನಿರೀಕ್ಷೆಯೂ ಇದೆ. ಒಂದು ವೇಳೆ ಪಂದ್ಯ ಇಂದು ನಡೆಯದಿದ್ದರೆ, ನಾಳೆ ನಡೆಯುತ್ತದೆ. ಸೆಮಿ ಫೈನಲ್‌ ಮತ್ತು ಫೈನಲ್‌ ಪಂದ್ಯಗಳಲ್ಲಿ ಒಂದು ದಿನ ಮೀಸಲಿಡಲಾಗುತ್ತದೆ. ಹಾಗೊಂದು ವೇಳೆ ಪಂದ್ಯ ನಡೆಯದೇ ಹೋದಲ್ಲಿ ಪಾಯಿಂಟ್ಸ್‌ ಟೇಬಲ್‌ನಲ್ಲಿ ಮೇಲಿರುವ ತಂಡ ಫೈನಲ್‌ಗೆ ಆಯ್ಕೆಯಾಗುತ್ತದೆ.