ಲಖನೌ ಸೂಪರ್ ಜೈಂಟ್ಸ್ ತಂಡದ ನೆಟ್ಸ್ನಲ್ಲಿ ನಾಯಕ ರಿಷಭ್ ಪಂತ್ಗೆ ಅರ್ಜುನ್ ತೆಂಡೂಲ್ಕರ್ ನಿಖರ ಯಾರ್ಕರ್ಗಳನ್ನು ಎಸೆದು ಗಮನ ಸೆಳೆದಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಮುಂಬರುವ ಪಂದ್ಯಗಳಲ್ಲಿ ಅರ್ಜುನ್ಗೆ ಆಡುವ ಬಳಗದಲ್ಲಿ ಅವಕಾಶ ಸಿಗಬಹುದೆಂಬ ನಿರೀಕ್ಷೆ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.
ಲಖನೌ: ಐಪಿಎಲ್ನಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್ಗೆ, ಎಡಗೈ ವೇಗಿ ಅರ್ಜುನ್ ತೆಂಡೂಲ್ಕರ್ ನೆಟ್ಸ್ನಲ್ಲಿ ಬೆವರಿಳಿಸಿದ್ದಾರೆ. ಬ್ಯಾಟಿಂಗ್ ಅಭ್ಯಾಸದ ವೇಳೆ ಪಂತ್ಗೆ ಅರ್ಜುನ್ ಸತತವಾಗಿ ನಿಖರ ಯಾರ್ಕರ್ಗಳನ್ನು ಎಸೆಯುತ್ತಿರುವ ವಿಡಿಯೋವನ್ನು ಲಖನೌ ಸೂಪರ್ ಜೈಂಟ್ಸ್ ತಂಡವೇ ತನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಈ ವಿಡಿಯೋವೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಚಿನ್ ಪುತ್ರನ ಬೌಲಿಂಗ್ ಕೌಶಲ್ಯಕ್ಕೆ ಫಿದಾ ಆಗಿದ್ದಾರೆ.
ಹಿಂದೆ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದ ಅರ್ಜುನ್, ಈ ಬಾರಿಯ ಐಪಿಎಲ್ ಹರಾಜಿನಲ್ಲಿ ತಮ್ಮ ಮೂಲ ಬೆಲೆ 30 ಲಕ್ಷ ರುಪಾಯಿಗೆ ಲಖನೌ ತಂಡ ಸೇರಿದ್ದರು. ಆದರೆ, ಸೀಸನ್ನ ಮೊದಲ ಎರಡು ಪಂದ್ಯಗಳಲ್ಲಿ ಅವರಿಗೆ ಆಡುವ ಬಳಗದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಇದೀಗ ನೆಟ್ಸ್ನಲ್ಲಿ ಕ್ಯಾಪ್ಟನ್ಗೇ ಚಳ್ಳೆಹಣ್ಣು ತಿನ್ನಿಸಿರೋದ್ರಿಂದ, ಅರ್ಜುನ್ಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಚಾನ್ಸ್ ಸಿಗಬಹುದಾ ಅಂತಾ ಫ್ಯಾನ್ಸ್ ಕಾಯ್ತಿದ್ದಾರೆ.
ವಿಡಿಯೋ ವೈರಲ್:
ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಮಗ ಅನ್ನೋ ಒತ್ತಡ ನನ್ನ ಮೇಲಿಲ್ಲ ಅಂತ 26 ವರ್ಷದ ಅರ್ಜುನ್ ಇತ್ತೀಚೆಗೆ ಹೇಳಿಕೊಂಡಿದ್ದರು. "ನಾನು ಕ್ರಿಕೆಟ್ ಆಡೋದು ನನ್ನ ಪ್ಯಾಷನ್ಗೋಸ್ಕರ, ಯಾರಿಗೂ ಏನನ್ನೂ ಸಾಬೀತು ಮಾಡಲಿಕ್ಕಲ್ಲ. ಕಠಿಣ ಪರಿಶ್ರಮ ಮತ್ತು ಆಟವನ್ನು ಎಂಜಾಯ್ ಮಾಡುವುದರ ಮೇಲೆ ನಾನು ಗಮನ ಹರಿಸುತ್ತೇನೆ" ಎಂದು ಶುಭಂಕರ್ ಮಿಶ್ರಾ ಅವರ ಪಾಡ್ಕಾಸ್ಟ್ನಲ್ಲಿ ಅರ್ಜುನ್ ಹೇಳಿದ್ದರು.
ಅಚ್ಚರಿಯ ಹೇಳಿಕೆ ನೀಡಿದ್ದ ರವಿಚಂದ್ರನ್ ಅಶ್ವಿನ್
ಅರ್ಜುನ್ಗೆ ಲಖನೌ ತಂಡದಲ್ಲಿ ಜಾಗ ಸಿಗಲ್ಲ ಅಂತ ಮಾಜಿ ಭಾರತೀಯ ಆಟಗಾರ ರವಿಚಂದ್ರನ್ ಅಶ್ವಿನ್ ನೀಡಿದ್ದ ಹೇಳಿಕೆ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಮಾಯಾಂಕ್ ಯಾದವ್, ಮೊಹ್ಸಿನ್ ಖಾನ್, ಆವೇಶ್ ಖಾನ್ ಮತ್ತು ಮೊಹಮ್ಮದ್ ಶಮಿ ಅವರಂತಹ ಬಲಿಷ್ಠ ವೇಗಿಗಳಿರುವಾಗ ಅರ್ಜುನ್ಗೆ ಸ್ಥಾನ ಸಿಗೋದು ಕಷ್ಟ ಅಂತ ಅಶ್ವಿನ್ ಅಭಿಪ್ರಾಯಪಟ್ಟಿದ್ದರು. ಆದರೆ, ಅಶ್ವಿನ್ ಅವರ ಈ ಮಾತುಗಳಿಗೆ ಅರ್ಜುನ್ ಕೋಚ್ ಯೋಗರಾಜ್ ಸಿಂಗ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು. "ಅಶ್ವಿನ್ ಹೇಳುತ್ತಿರುವುದು ಅಸಂಬದ್ಧ. ಒಬ್ಬರ ಸಾಮರ್ಥ್ಯವನ್ನು ಅಳೆಯಲು ಇವರಾರು?" ಎಂದು ಯೋಗರಾಜ್ ಪ್ರಶ್ನಿಸಿದ್ದರು.
ಐಪಿಎಲ್ ಕೆರಿಯರ್: ಅರ್ಜುನ್ ಇದುವರೆಗೆ ಐದು ಪಂದ್ಯಗಳನ್ನು ಆಡಿದ್ದು, ಮೂರು ವಿಕೆಟ್ಗಳನ್ನು ಪಡೆದಿದ್ದಾರೆ. ಲಖನೌ ತಂಡ ಆಡಿದ ಎರಡು ಪಂದ್ಯಗಳಲ್ಲಿ ಒಂದನ್ನು ಗೆದ್ದು, ಪಾಯಿಂಟ್ಸ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಗುರುವಾರ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಲಖನೌ ತನ್ನ ಮುಂದಿನ ಪಂದ್ಯವನ್ನು ಆಡಲಿದೆ.


