2011ರ ವಿಶ್ವಕಪ್ ಫೈನಲ್ ಫಿಕ್ಸಿಂಗ್ ಆರೋಪ; ಸತತ 10 ಗಂಟೆ ವಿಚಾರಣೆ ಎದುರಿಸಿದ ಸಂಗಕ್ಕಾರ !
ಕೊರೋನಾ ವೈರಸ್ ನಡುವೆ 2011ರ ವಿಶ್ವಕಪ್ ಫೈನಲ್ ಪಂದ್ಯ ಫಿಕ್ಸ್ ಆರೋಪ ಜೋರಾಗಿ ಕೇಳಿ ಬರುತ್ತಿದೆ. ಶ್ರೀಲಂಕಾ ಮಾಜಿ ಕ್ರೀಡಾ ಸಚಿವ ಮಾಡಿದ ಆರೋಪ ಇದೀಗ ಕೋಲಾಹಲ ಎಬ್ಬಿಸಿದೆ. 2011ರ ವಿಶ್ವಕಪ್ ತಂಡ ಮುನ್ನಡೆಸಿದ ಕುಮಾರ ಸಂಗಕ್ಕಾರ ಇದೀಗ ಸತತ 10 ಗಂಟೆ ವಿಚಾರಣೆ ಎದುರಿಸಿದ್ದಾರೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
ಕೊಲೊಂಬೊ(ಜು.03): ಭಾರತ ಹಾಗೂ ಶ್ರೀಲಂಕಾ ನಡುವಿನ 2011ರ ವಿಶ್ವಕಪ್ ಫೈನಲ್ ಪಂದ್ಯ ಪ್ರತಿಯೊಬ್ಬ ಭಾರತೀಯನ ಮನದಲ್ಲಿ ಹಚ್ಚ ಹಸುರಾಗಿದೆ. ಆದರೆ ಶ್ರೀಲಂಕಾದಲ್ಲಿ ಕಳದೆ ಹಲವು ವರ್ಷಗಳಿಂದ 2011ರ ವಿಶ್ವಕಪ್ ಫೈನಲ್ ಪಂದ್ಯ ಫಿಕ್ಸ್ ಅನ್ನೋ ಆರೋಪ ಕೇಳಿ ಬರುತ್ತಲೇ ಇದೆ. ಇತ್ತೀಚೆಗೆ ಮಾಜಿ ಕ್ರೀಡಾ ಮಂತ್ರಿ, 2011ರ ವಿಶ್ವಕಪ್ ಟೂರ್ನಿ ವೇಳೆ ಸಚಿವರಾಗಿ ಕಾರ್ಯನಿರ್ವಹಿಸಿದ ಮಹಿಂದಾನಂದ ಅಲ್ತುಗಮೆಗೆ ಮಾಡಿ ಆರೋಪ ಗಂಭೀರ ಸ್ವರೂಪ ಪಡೆದುಕೊಂಡಿದೆ.
ವಿಶ್ವಕಪ್ನಲ್ಲಿ ಫಿಕ್ಸಿಂಗ್: 6 ಗಂಟೆಗಳ ಕಾಲ ಡಿ ಸಿಲ್ವಾ, ತರಂಗಾ ವಿಚಾರಣೆ
ವಿಶೇಷ ತನಿಖಾ ತಂಡ ಇದೀಗ 2011ರ ವಿಶ್ವಕಪ್ ಟೂರ್ನಿ ಫೈನಲ್ ಪಂದ್ಯದ ತನಿಖೆ ನಡೆಸುತ್ತಿದೆ. 2011ರ ವಿಶ್ವಕಪ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಉಪುಲ್ ತರಂಗ ವಿಚಾರಣೆ ನಡೆಸಿದ ತನಿಖಾ ತಂಡ ಇದೀಗ ಮಾಜಿ ನಾಯಕ ಕುಮಾರ ಸಂಗಕ್ಕಾರ ವಿಚಾರಣೆ ನಡೆಸಿದೆ. 2011ರ ವಿಶ್ವಕಪ್ ಟೂರ್ನಿಯಲ್ಲಿ ಲಂಕಾ ತಂಡವನ್ನು ಮುನ್ನಡೆಸಿದ ಸಂಗಕ್ಕಾರ ಬಳಿಕ ಇದೀಗ ತನಿಖಾ ತಂಡ ಮಾಜಿ ಕ್ರಿಕೆಟಿಗ ಮಹೇಲಾ ಜಯವರ್ದನೆಯನ್ನೂ ವಿಚಾರಣೆ ನಡೆಸಲಿದೆ.
2011ರ ವಿಶ್ವಕಪ್ ಫೈನಲ್ನಲ್ಲಿ ಫಿಕ್ಸಿಂಗ್; ತನಿಖೆ ಆರಂಭ
ನನ್ನ ಹೇಳಿಕೆಯನ್ನು ನೀಡಲು ವಿಚಾರಣೆಗೆ ಹಾಜರಾಗಿದ್ದೇನೆ. ಕ್ರಿಕೆಟ್ನ್ನು ಗೌರವಿಸುತ್ತೇನೆ. ಹೀಗಾಗಿ ವಿಚಾರಣೆ ಹಾಜರಾಗುವುದು ನನ್ನ ಕರ್ತವ್ಯವಾಗಿದೆ ಎಂದು ಕುಮಾರ ಸಂಗಕ್ಕಾರ ಸತತ 10 ಗಂಟೆಗಳ ವಿಚಾರಣೆ ಬಳಿಕ ಹೇಳಿದ್ದಾರೆ. ಮಾಜಿ ಕ್ರೀಡಾ ಮಂತ್ರಿ ಮಾಡಿದ ಆರೋಪಕ್ಕೆ ಈ ವಿಚಾರಣೆಯಿಂದ ಉತ್ತರ ಸಿಗಲಿದೆ ಅನ್ನೋ ವಿಶ್ವಾಸವಿದೆ ಎಂದು ಸಂಗಕ್ಕಾರ ಹೇಳಿದ್ದಾರೆ.
ಮಹಿಂದಾನಂದ ಅಲ್ತುಗಮೆ 2011ರ ವಿಶ್ವಕಪ್ ಫೈನಲ್ ಕುರಿತು ಗಂಭೀರ ಆರೋಪ ಮಾಡಿದ್ದರು. ಶ್ರೀಲಂಕಾ ಗೆಲುವಿಗೆ ಎಲ್ಲಾ ಸಾಧ್ಯತೆಗಳಿತ್ತು. ಆದರೆ ಕಳಪೆ ಬೌಲಿಂಗ್, ಕಳಪೆ ಫೀಲ್ಡಿಂಗ್ನಿಂದ ಲಂಕಾ ಸೋಲಿಗೆ ಶರಣಾಯಿತು. ಪಂದ್ಯದ ಟಾಸ್ ಕೂಡ ಎರಡು ಬಾರಿ ನಡೆಸಲಾಯಿತು. ಮೊದಲ ಟಾಸ್ ಪ್ರಕ್ರಿಯೆಯಲ್ಲಿ ಲಂಕಾ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿತ್ತು. ಭಾರತ ಪರವಾಗಲು ಎರಡನೇ ಬಾರಿ ಟಾಸ್ ಪ್ರಕ್ರಿಯೆ ನಡೆಸಿತು. ಚೇಸಿಂಗ್ನಲ್ಲಿ ಬಲಿಷ್ಠವಾದ ಶ್ರೀಲಂಕಾ ಮೊದಲು ಬ್ಯಾಟಿಂಗ್ ಮಾಡಬೇಕಾಯಿತು. ಈ ರೀತಿ ಹಲವು ಘಟನೆಗಳು 2011ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿದೆ ಎಂದು ಅಲ್ತುಗಮೆಗೆ ಆರೋಪ ಮಾಡಿದ್ದರು.