'65000ಕ್ಕೂ ಅಧಿಕ ಕಾರ್ಮಿಕರಿದ್ದರೂ 6 ಸಾವಿರ ಕಾರ್ಮಿಕರಿಗೆ ಕೋವಿಡ್-19 ಪರಿಹಾರ'
65000ಕ್ಕೂ ಅಧಿಕ ಕಾರ್ಮಿಕರಿದ್ದರೂ 6 ಸಾವಿರ ಕಾರ್ಮಿಕರಿಗೆ ಪರಿಹಾರ| ನೋಂದಣಿ ಪರಿಷ್ಕರಣೆ ಆಗದಿರುವುದರಿಂದ ಸಮಸ್ಯೆ| ನೋಂದಣಿ ಪರಿಷ್ಕೃತವಾಗಿದ್ದರೆ ಸಾವಿರಾರು ಕಾರ್ಮಿಕರು ಊಟಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ: ಕುಮಾರ್ ಬಿ.ಆರ್|
ಜಿ.ಡಿ. ಹೆಗಡೆ
ಕಾರವಾರ(ಏ.01): ಜಿಲ್ಲೆಯಲ್ಲಿ 65,000ಕ್ಕೂ ಅಧಿಕ ನೋಂದಾಯಿತ ಕಾರ್ಮಿಕರಿದ್ದರೂ ಕೋವಿಡ್- 19 ಹಿನ್ನೆಲೆಯಲ್ಲಿ ಕೇಂದ್ರ ಒದಗಿಸಿದ ಪರಿಹಾರ ಸಿಕ್ಕಿದ್ದು ಆರು ಸಾವಿರ ಜನರಿಗೆ ಮಾತ್ರ. ನೋಂದಣಿ ಪರಿಷ್ಕರಣೆ ಆಗದೇ ಸರ್ಕಾರ ಪರಿಹಾರ ನೀಡಿದರೂ ಕಾರ್ಮಿಕರ ಕೈಗೆ ಸಿಗದಂತಾಗಿದೆ.
ಕೋವಿಡ್-19 ಸೋಂಕಿನಿಂದ ದೇಶ ಲಾಕ್ಡೌನ್ ಆಗಿದ್ದು, ಕೆಲಸವಿಲ್ಲದೇ ನೋಂದಾಯಿತ ಪ್ರತಿ ಕಾರ್ಮಿಕರು ತೊಂದರೆಗೆ ಸಿಲುಕಬಾರದು ಎಂದು ನೋಂದಾಯಿತ ಪ್ರತಿ ಕಾರ್ಮಿಕನಿಗೆ 1000 ನೀಡಲು ಪ್ರಸ್ತಾವನೆ ಸಲ್ಲಿಸಲು ಸರ್ಕಾರ ಕಾರ್ಮಿಕ ಇಲಾಖೆಗೆ ಸೂಚನೆ ನೀಡಿತ್ತು. ಆದರೆ, ಜಿಲ್ಲೆಯಿಂದ 6,000 ಜನರಿಗೆ ಮಾತ್ರ ಪರಿಹಾರದ ಪ್ರಸ್ತಾವನೆ ಸಲ್ಲಿಸಲಾಗಿದೆ.
ಭಾರತ್ ಲಾಕ್ಡೌನ್: 'ಬೇರೆ ರಾಜ್ಯದಲ್ಲಿರುವ ಕನ್ನಡಿಗರ ನೆರವಿಗೆ ಮನವಿ'
65,000ಕ್ಕೂ ಅಧಿಕ ಕಾರ್ಮಿಕರು ನೋಂದಾಯಿಸಿಕೊಂಡಿದ್ದರೂ ಪ್ರತಿ ಮೂರು ವರ್ಷಕ್ಕೊಮ್ಮೆ ನೋಂದಣಿ ಪರಿಷ್ಕರಿಸಬೇಕು. ಆದರೆ, ಜಿಲ್ಲೆಯಲ್ಲಿ ಹಲವಾರು ವರ್ಷದಿಂದ ನೋಂದಣಿ ಪರಿಷ್ಕರಣೆಯೇ ನಡೆದಿಲ್ಲ. ಹೀಗಾಗಿ, ಕಾರ್ಮಿಕರು ಸರ್ಕಾರದ ಯೋಜನೆಯ ಫಲಾನುಭವಿಗಳಾಗಲು ಸಾಧ್ಯವಾಗುತ್ತಿಲ್ಲ. ಮೊದಲ ಹಂತದಲ್ಲಿ ಕೇವಲ 6,000 ಕಾರ್ಮಿಕರ ಹೆಸರನ್ನು ಮಾತ್ರ ಕಳಿಸಲಾಗಿದ್ದು, 2ನೇ ಹಂತದ ಹೆಸರು ಕಳಿಸಲು ಸರ್ಕಾರ ತಡೆ ಹಿಡಿದಿದೆ.
ಕೋವಿಡ್ -19 ಸೋಂಕಿನ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ಡೌನ್ ಘೋಷಣೆಯಾಗಿದ್ದು, ಎಲ್ಲ ಕೆಲಸಗಳು ಸ್ತಬ್ಧಗೊಂಡಿವೆ. ಇದರಿಂದ ಕಾರ್ಮಿಕರಿಗೆ ಬಹಳಷ್ಟು ತೊಂದರೆ ಆಗಿದ್ದು, ನೋಂದಣಿ ಪರಿಷ್ಕೃತವಾಗಿದ್ದರೆ ಸಾವಿರಾರು ಕಾರ್ಮಿಕರು ಊಟಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಸರ್ಕಾರ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಕಾರ್ಮಿಕರ ನೋಂದಣಿ ಪರಿಷ್ಕರಣೆ ಮಾಡುವುದರ ಬಗ್ಗೆ ಕಟ್ಟುನಿಟ್ಟಿನ ಆದೇಶ ನೀಡುವುದರ ಜತೆಗೆ 2ನೇ ಹಂತದ ಪರಿಹಾರದ ಹಣ ಬಿಡುಗಡೆಗೂ ಆದ್ಯತೆ ನೀಡಬೇಕಿದೆ.
ಈ ಬಗ್ಗೆ ಮಾತನಾಡಿದ ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್ ಬಿ.ಆರ್ ಅವರು, ನೋಂದಣಿ ಆದವರಿಗೆ ಸರ್ಕಾರ ಕೋವಿಡ್- 19 ಹಿನ್ನೆಲೆಯಲ್ಲಿ ಹಣ ನೀಡಲು ಪ್ರಸ್ತಾವನೆ ಸಲ್ಲಿಸಲು ಸೂಚಿಸಿತ್ತು. ಅದರಂತೆ ನಮ್ಮ ಜಿಲ್ಲೆಯಿಂದ ಕಳಿಸಲಾಗಿದೆ. 65,000ಕ್ಕೂ ಅಧಿಕ ಕಾರ್ಮಿಕರು ನೋಂದಣಿ ಹೊಂದಿದ್ದರೂ ಈ ಹಿಂದಿನ ವರ್ಷಗಳಲ್ಲಿ ಪರಿಷ್ಕರಣೆ ಆಗಿಲ್ಲ ಎಂದು ತಿಳಿಸಿದ್ದಾರೆ.