10 ತಿಂಗಳ ಮಗುವಿಗೆ ಚಿಕಿತ್ಸೆ ನೀಡಿದ ದಾದಿಗೆ ಬಹಿಷ್ಕಾರ
10 ತಿಂಗಳ ಮಗುವಿಗೆ ಚಿಕಿತ್ಸೆ ನೀಡಿದ್ದ ದಾರಿಯೊಬ್ಬರು ಕ್ವಾರಂಟೈನ್ನಲ್ಲಿರುವ ಸುದ್ದಿ ಕೇಳಿದ ಗ್ರಾಮಸ್ಥರು ಇಡೀ ಕುಟುಂಬ ಬಹಿಷ್ಕರಿಸಿರುವ ವಿದ್ಯಮಾನ ಮಂಗಳೂರು ಹೊರವಲಯದ ಕೊಣಾಜೆಯಲ್ಲಿ ನಡೆದಿದೆ.
ಮಂಗಳೂರು(ಏ.03): 10 ತಿಂಗಳ ಮಗುವಿಗೆ ಚಿಕಿತ್ಸೆ ನೀಡಿದ್ದ ದಾರಿಯೊಬ್ಬರು ಕ್ವಾರಂಟೈನ್ನಲ್ಲಿರುವ ಸುದ್ದಿ ಕೇಳಿದ ಗ್ರಾಮಸ್ಥರು ಇಡೀ ಕುಟುಂಬ ಬಹಿಷ್ಕರಿಸಿರುವ ವಿದ್ಯಮಾನ ಮಂಗಳೂರು ಹೊರವಲಯದ ಕೊಣಾಜೆಯಲ್ಲಿ ನಡೆದಿದೆ.
ಕೊಣಾಜೆ ನಿವಾಸಿ ಸರಸ್ವತಿ, ದೇರಳಕಟ್ಟೆಖಾಸಗಿ ಆಸ್ಪತ್ರೆಯಲ್ಲಿ ದಾದಿಯಾಗಿದ್ದು, ವಾರದ ಹಿಂದೆ ಆಸ್ಪತ್ರೆಯಲ್ಲಿ ಜ್ವರಪೀಡಿತ ಮಗುವೊಂದನ್ನು ನಿಗಾಕ್ಕೆ ಒಳಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅಂದು ಕರ್ತವ್ಯ ನಿರ್ವಹಿಸಿದ ವೈದ್ಯರು ಹಾಗೂ ದಾದಿ ಎಲ್ಲರನ್ನೂ ನಿಗಾದಲ್ಲಿ ಇರುವಂತೆ ವೈದ್ಯರು ಸೂಚಿಸಿದ್ದರು. ಅದರಂತೆ ಸರಸ್ವತಿ ಕೂಡ ಮನೆಯಲ್ಲೇ ಪ್ರತ್ಯೇಕ ನಿಗಾದಲ್ಲಿದ್ದರು.
COVID19: ಲಾಕ್ಡೌನ್ ಮೀರಿ ಹೊರ ಬಂದ್ರೆ 2 ವರ್ಷ ಜೈಲು
ಈ ವಿಚಾರ ತಿಳಿದ ಗ್ರಾಮಸ್ಥರು ಸರಸ್ವತಿ, ಪತಿ, ಮಕ್ಕಳು ಯಾರೂ ಮನೆಯ ಹೊರಗೆ ಕಾಲಿಡುವಂತಿಲ್ಲ ಎಂದು ಬಹಿಷ್ಕರಿಸಿದ್ದಾರೆ. ಅಲ್ಲದೇ ಸರಸ್ವತಿಯ ಪತಿಯನ್ನೂ ಸೆಕ್ಯುರಿಟಿ ಕೆಲಸದಿಂದ ಸದ್ಯಕ್ಕೆ ಮನೆಗೆ ಕಳುಹಿಸಿದ್ದು, ತುತ್ತಿನ ಕೂಳಿಗೆ ಈ ಕುಟುಂಬ ಪರದಾಡುವಂತಾಗಿದೆ. ಗ್ರಾಮಸ್ಥರು ಇಡೀ ಕುಟುಂಬದ ಬಗ್ಗೆ ಹೆದರಿಕೊಂಡಿದ್ದು, ಸಾಮಗ್ರಿಗೆ ಹೊರಗೆ ತೆರಳಿದರೆ, ತಕ್ಷಣ ಫೋನಾಯಿಸಿ ಜನಸೇರಿಸಿ ಮನೆಯಲ್ಲೇ ಇರುವಂತೆ ಬೆದರಿಸುತ್ತಾರೆ. ಗ್ರಾಮಸ್ಥರ ಈ ನಡೆಯಿಂದ ಕುಟುಂಬಕ್ಕೆ ತೀವ್ರ ಬೇಸರ ಉಂಟಾಗಿದೆ.
ನೆರವು:
ವಿಷಯ ಬಹಿರಂಗಗೊಂಡ ಬಳಿಕ ಗುರುವಾರ ಸಂಜೆ ಸ್ಥಳೀಯ ಬಿಜೆಪಿ ಮುಖಂಡ ಸಂತೋಷ್ ಕುಮಾರ್ ರೈ ಹಾಗೂ ಬಿಜೆಪಿ ಕಾರ್ಯಕರ್ತರು ದಾದಿಯ ಮನೆಗೆ ತೆರಳಿ ಕುಟುಂಬಕ್ಕೆ ದಿನಸಿ ನೀಡಿ ನೆರವಾದರು.
ಸಾಮಾಜಿಕ ಅಂತರದ್ದೇ ಸಮಸ್ಯೆ: ಜನ ಜಂಗುಳಿಯಿಂದಾಗಿ ಡೇಂಜರ್ ಝೋನ್ನಲ್ಲಿ ಮಾರ್ಕೆಟ್!
ಗ್ರಾಮಸ್ಥರು ಬಹಿಷ್ಕರಿಸಿರುವ ವಿಚಾರ ಗಮನಕ್ಕೆ ಬಂದಿದೆ. ದಾದಿ ನಿಗಾದಲ್ಲಿ ಇರುವ ಕಾರಣ ಕುಟುಂಬವನ್ನು ಭೀತಿಯಲ್ಲಿ ನೋಡಿರುವ ಸಾಧ್ಯತೆ ಇದೆ. ನಾನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಈ ಕುಟುಂಬಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ ಎಂದು ಮಂಗಳೂರು ಶಾಸಕ ಯು. ಟಿ. ಖಾದರ್ ತಿಳಿಸಿದ್ದಾರೆ.