ಕೊರೋನಾಗೆ ತಲೆ ಕೆಡೆಸಿಕೊಳ್ಳದ ಜನ: ಅಧಿಕಾರಿಗಳ ಕಣ್ಣು ತಪ್ಪಿಸಿ ಮಟನ್ ಮಾರಾಟ!
ಸರ್ಕಾರಿ ಆಸ್ಪತ್ರೆಯಲ್ಲಿಯೇ ಅಂತರ ಕಾಯ್ದುಕೊಳ್ಳದ ಜನತೆ|ಕೊಪ್ಪಳ ಜಿಲ್ಲೆಯ ಕುಷ್ಟಗಿ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗಾಗಿ ಸರದಿಯಲ್ಲಿ ನಿಲ್ಲುವವರು ಮಾತ್ರ ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ|
ಕುಷ್ಟಗಿ(ಮಾ.28): ಸರ್ಕಾರ ಕೊರೋನಾ ವೈರಸ್ ತಡೆಗಾಗಿ ದೇಶವ್ಯಾಪಿ ಸಾಕಷ್ಟು ಮುಂಜಾಗೃತಾ ಕ್ರಮಗಳನ್ನು ಅನುಸರಿಸುತ್ತಿದ್ದರೂ ಸಹ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗಾಗಿ ಸರದಿಯಲ್ಲಿ ನಿಲ್ಲುವವರು ಮಾತ್ರ ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.
ಶುಕ್ರವಾರ ಬೆಳಗಿನ ಜಾವ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ತಾಲೂಕಿನ ವಿವಿಧ ಗ್ರಾಮಗಳ ಕೂಲಿ ಕಾರ್ಮಿಕರು ತಮ್ಮ ಆರೋಗ್ಯ ತಪಾಸಣೆಯ ಜತೆಗೆ ಕೊರೋನಾ ಸೋಂಕು ಇರುವುದನ್ನು ಖಚಿತಪಡಿಸಿಕೊಂಡು ತಮ್ಮ ತಮ್ಮ ಗ್ರಾಮಗಳಿಗೆ ತೆರಳುವುದಕ್ಕಾಗಿ ಸಾಲುಗಟ್ಟಿನಿಂತಾಗ ಅಂತರ ಕಾಯ್ದುಕೊಳ್ಳದಿರುವುದು ಆಸ್ಪತ್ರೆಯ ಆವರಣದಲ್ಲಿ ಕಂಡುಬಂದಿತು.
ಮನೆಯಲ್ಲಿರುವುದೇ ಕೊರೋನಾಗೆ ಮದ್ದು: ಕೊಪ್ಪಳದ ಗವಿಸಿದ್ಧೇಶ್ವರ ಶ್ರಿಗಳ ಸಂದೇಶ
ಆಸ್ಪತ್ರೆಗೆ ಶಾಸಕ ಭೇಟಿ:
ಶಾಸಕ ಅಮರೇಗೌಡ ಭಯ್ಯಾಪುರ ಅವರು ಸ್ಥಳಕ್ಕೆ ಆಗಮಿಸಿ, ವೈದ್ಯರಿಗೆ ಎಚ್ಚರ ವಹಿಸುವಂತೆ ಸೂಚನೆ ನೀಡಿದರು. ಸರದಿಯಲ್ಲಿ ಮತ್ತು ಅಂತರ ಕಾಯ್ದುಕೊಳ್ಳುವಂತೆ ನಿಲ್ಲಿಸಿದ ನಂತರವೇ ಅವರ ತಪಾಸಣೆ ನಡೆಸಿ ಎಂದರು.
ಸೋಂಕಿತರ ಫೋಟೋ ವೈರಲ್ ಮಾಡಿದ್ದಕ್ಕೆ ಕೇಸ್
ಮಟನ್ ಮಾರಾಟ:
ಇನ್ನು ಪಟ್ಟಣದ ಮುಲ್ಲಾರ್ ಓಣಿಯ ಕೆಲ ಮಾಂಸದ ವ್ಯಾಪಾರಿಗಳ ಶುಕ್ರವಾರ ಇರುವುದರಿಂದ ಮನೆಗಳಲ್ಲಿ ಕುರಿ ಮಾಂಸದ ವ್ಯಾಪಾರ ನಡೆಸುತ್ತಿರುವುದು ಕಂಡು ಬಂದಿತು. ಜತೆಗೆ ಕಳೆದ ಕೆಲ ದಿನಗಳ ಹಿಂದೆ ಕೆಜಿ ಮಟನ್ಗೆ 400 ರಿಂದ 500 ಇದಿದ್ದು ಶುಕ್ರವಾರ 550ಕ್ಕೆ ಏರಿದ್ದರೂ ಕೊಳ್ಳುವವರ ಸಂಖ್ಯೆ ಮಾತ್ರ ಕಡಿಮೆ ಯಾಗಿರಲಿಲ್ಲ. ಜತೆಗೆ ಅಧಿಕಾರಿಗಳ ಕಣ್ಣು ತಪ್ಪಿಸಿ ಮನೆಗಳಲ್ಲಿ ಮಾರಾಟವಾಗಿರುವುದು ಕಂಡುಬಂದಿತು.