ರಾಜ್ಯಾದ್ಯಂತ 5000ಕ್ಕೂ ಹೆಚ್ಚು ವಾಹನ ಜಪ್ತಿ!| ಲಾಕ್‌ಡೌನ್‌ ನಿಯಮ ಉಲ್ಲಂಘನೆ| ಬೆಂಗಳೂರಲ್ಲೇ 2000ಕ್ಕೂ ಹೆಚ್ಚು ವಾಹನಗಳು ವಶಕ್ಕೆ| ಏ.14ರ ನಂತರವೂ ವಾಪಸ್‌ ಇಲ್ಲ?

ಬೆಂಗಳೂರು(ಮಾ.31): ರಾಜ್ಯಾದ್ಯಂತ ಲಾಕ್‌ಡೌನ್‌ ಜಾರಿಯಲ್ಲಿದ್ದರೂ ಅನಾವಶ್ಯಕವಾಗಿ ರಸ್ತೆಗಿಳಿಯುವ ಜನರ ಅಭ್ಯಾಸ ಮಾತ್ರ ನಿಂತಿಲ್ಲ. ಈ ಸಂಬಂಧ ಪದೇ ಪದೆ ಮನವಿ ಮಾಡಿದರೂ ಕಿವಿಗೆ ಹಾಕಿಕೊಳ್ಳದವರ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, 5 ಸಾವಿರಕ್ಕೂ ಹೆಚ್ಚು ವಾಹನಗಳನ್ನು ರಾಜ್ಯಾದ್ಯಂತ ವಶಕ್ಕೆ ತೆಗೆದುಕೊಂಡಿದ್ದಾರೆ. ಲಕ್ಷಾಂತರ ರುಪಾಯಿ ದಂಡವನ್ನೂ ವಿಧಿಸಿದ್ದಾರೆ.

Add Asianetnews Kannada as a Preferred SourcegooglePreferred

ಅಗತ್ಯವಿದ್ದರಷ್ಟೇ ಮನೆಯಿಂದ ಹೊರಗೆ ಬನ್ನಿ, ಸುಖಾಸುಮ್ಮನೆ ರಸ್ತೆ ಖಾಲಿ ಇದೆ ಎಂದು ಓಡಾಡಬೇಡಿ, ಲಾಕ್‌ಡೌನ್‌ ಉದ್ದೇಶ ಹಾಳು ಮಾಡಬೇಡಿ ಎಂದು ರಾಜ್ಯದಲ್ಲಿ ಲಾಕ್‌ಡೌನ್‌ ಘೋಷಣೆಯಾದ ದಿನದಿಂದಲೂ ಪೊಲೀಸರು ಮನವಿ ಮಾಡುತ್ತಲೇ ಬಂದಿದ್ದರು. ಆರಂಭದ ಕೆಲವು ದಿನ ಈ ರೀತಿ ಸುಖಾಸುಮ್ಮನೆ ವಾಹನ ಏರಿ ಓಡಾಡುವವರಿಗೆ ಪೊಲೀಸರು ಲಾಠಿ ರುಚಿ ತೋರಿಸಿ ಸರಿದಾರಿಗೆ ತರುವ ಪ್ರಯತ್ನ ಮಾಡಿದರು. ಇದಕ್ಕೂ ಬುದ್ಧಿಕಲಿಯದಾಗ ಕೊನೆಗೆ ವಾಹನಗಳನ್ನು ವಶಕ್ಕೆ ಪಡೆದು ಕೇಸ್‌ ದಾಖಲಿಸುವಂಥ ಕಠಿಣ ನಿರ್ಧಾರವನ್ನೂ ಪೊಲೀಸರು ಆರಂಭಿಸಿದ್ದಾರೆ.

ಅದರಂತೆ ಬೆಂಗಳೂರೊಂದರಲ್ಲೇ ಪೊಲೀಸರು 2 ಸಾವಿರಕ್ಕೂ ಹೆಚ್ಚು, ಧಾರವಾಡದಲ್ಲಿ 425, ರಾಯಚೂರಲ್ಲಿ 450, ಕಲಬುರಗಿಯಲ್ಲಿ 265ಕ್ಕೂ ಹೆಚ್ಚು, ಬಳ್ಳಾರಿಯಲ್ಲಿ 31, ಕಾರವಾರದಲ್ಲಿ 187, ಬೆಳಗಾವಿಯಲ್ಲಿ 366, ಬಾಗಲಕೋಟೆಯಲ್ಲಿ 362, ವಿಜಯಪುರದಲ್ಲಿ 449 ಹಾಗೂ ಹಾವೇರಿಯಲ್ಲಿ 150, ಚಿತ್ರದುರ್ಗದಲ್ಲಿ 82 ಸೇರಿದಂತೆ ರಾಜ್ಯಾದ್ಯಂತ 5 ಸಾವಿರಕ್ಕೂ ಹೆಚ್ಚು ವಾಹನಗಳನ್ನು ವಶಕ್ಕೆ ತೆಗೆದುಕೊಂಡು ಕೇಸ್‌ ದಾಖಲಿಸಿದ್ದಾರೆ. ಕೋಲಾರದಲ್ಲಿ ವಾಹನ ಸವಾರರ ಮೇಲೆ 310 ಕೇಸ್‌ಗಳನ್ನು ದಾಖಲಿಸಲಾಗಿದೆ. ಮೈಸೂರಿನಲ್ಲಿ ಹುಣಸೂರು ತಾಲೂಕೊಂದರಲ್ಲೇ 200ಕ್ಕೂ ಹೆಚ್ಚು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

ಬೆಂಗಳೂರಲ್ಲಿ ಈ ರೀತಿ 2000 ಸಾವಿರಕ್ಕೂ ಹೆಚ್ಚು ವಾಹನಗಳನ್ನು ವಶಕ್ಕೆ ಪಡೆದಿದ್ದರೂ ಸೋಮವಾರ ಆ ವಾಹನಗಳನ್ನು ಮಾಲೀಕರಿಗೆ ಬಿಡುಗಡೆ ಮಾಡಿರುವ ಪೊಲೀಸರು, ಇನ್ನು ಮುಂದೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಸವಾರರಿಗೆ ಎಚ್ಚರಿಕೆ ನೀಡಿದ್ದಾರೆ. ಮಂಗಳವಾರದಿಂದ ವಶಕ್ಕೆ ಪಡೆದುಕೊಳ್ಳುವ ಯಾವುದೇ ವಾಹನಗಳನ್ನು ಲಾಕ್‌ಡೌನ್‌ ಅವಧಿ ಮುಗಿಯುವ ವರೆಗೆ ಅಂದರೆ ಏ.14ರ ವರೆಗೆ ವಾಪಸ್‌ ನೀಡಲಾಗುವುದಿಲ್ಲ ಎಂದೂ ಸ್ಪಷ್ಟಸಂದೇಶ ರವಾನಿಸಿದ್ದಾರೆ.