8 ಪತ್ರಿಕೆ ಏಕ ಸಂಪಾದಕೀಯಕ್ಕೆ ಸಚಿವರ ಮೆಚ್ಚುಗೆ| ಇದು ಪತ್ರಿಕೋದ್ಯಮದಲ್ಲಿ ಐತಿಹಾಸಿಕ ಬೆಳವಣಿಗೆ: ಪ್ರಹ್ಲಾದ್‌ ಜೋಶಿ|  ಡಿಸಿಎಂ ಲಕ್ಷ್ಮಣ ಸವದಿ, ಸಚಿವ ರಮೇಶ್‌ ಜಾರಕಿಹೊಳಿ ಕೂಡ ಶ್ಲಾಘನೆ

ಬೆಂಗಳೂರು(ಮಾ.25): ಪತ್ರಿಕೆಗಳನ್ನು ಖರೀದಿಸಿದರೆ ಕೊರೋನಾ ವೈರಸ್‌ ಹರಡುತ್ತದೆ ಎಂಬ ವದಂತಿಯನ್ನು ನಂಬಬೇಡಿ ಎಂದು ಕನ್ನಡದ ಎಂಟು ಪ್ರಮುಖ ದಿನಪತ್ರಿಕೆಗಳ ಮುಖಪುಟದಲ್ಲೂ ಒಂದೇ ಸಂಪಾದಕೀಯ ಪ್ರಕಟಗೊಂಡಿದ್ದರ ಬಗ್ಗೆ ಹಲವು ಸಚಿವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Add Asianetnews Kannada as a Preferred SourcegooglePreferred

ಕೊರೋನಾ ವಿರುದ್ಧದ ಹೋರಾಟದಲ್ಲಿ ಪತ್ರಿಕೆಗಳ ಪ್ರಾಮುಖ್ಯತೆ ಕುರಿತು ಕನ್ನಡದ ಪ್ರಮುಖ ದಿನಪತ್ರಿಕೆಗಳಲ್ಲಿ ಒಂದೇ ಸಂಪಾದಕೀಯ ಪ್ರಕಟವಾಗಿದ್ದು ಪತ್ರಿಕೋದ್ಯಮದಲ್ಲಿ ಐತಿಹಾಸಿಕವಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಟ್ವೀಟ್‌ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ.

ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೊರೋನಾ ವಿರುದ್ಧದ ಹೋರಾಟಕ್ಕಾಗಿ ಪ್ರಮುಖ ಎಂಟು ದಿನಪತ್ರಿಕೆಗಳಲ್ಲಿ ಏಕ ರೀತಿಯ ಸಂಪಾದಕೀಯ ಪ್ರಕಟಗೊಂಡಿದ್ದು ಪ್ರಶಂಸಾರ್ಹ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.

ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಇವತ್ತಿನ ಕೊರೋನಾ ಆಪತ್ತಿನತನಕ ಜನರಿಗೆ ಅಗತ್ಯ-ಅಧಿಕೃತ ಸುದ್ದಿ ಮುಟ್ಟಿಸುವಲ್ಲಿ ದಿನಪತ್ರಿಕೆಗಳು ಮಹತ್ವದ ಪಾತ್ರ ವಹಿಸಿವೆ. ಇಡೀ ದೇಶ ಕೊರೋನಾತಂಕದಿಂದ ತತ್ತರಿಸಿರುವ ಇಂಥ ಮಹತ್ವದ ಸಂದರ್ಭದಲ್ಲಿ ದಿನಪತ್ರಿಕೆಗಳ ಕುರಿತು ಯಾವುದೇ ಆತಂಕ ಬೇಡ ಎಂದು ಓದುಗರಿಗೆ ಧೈರ್ಯ ತುಂಬಿದ ಅವರು, ಕರ್ನಾಟಕದ ಎಲ್ಲ ಪ್ರಮುಖ ಎಂಟು ದಿನಪತ್ರಿಕೆಗಳಲ್ಲಿ ಪ್ರಕಟವಾದ ಒಂದೇ ಸಂಪಾದಕೀಯವೇ ಪತ್ರಿಕೆಗಳ ಸಾಮಾಜಿಕ ಕಳಕಳಿಯನ್ನು ತೋರಿಸುತ್ತದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಶ್ಲಾಘಿಸಿದ್ದಾರೆ.

ಪತ್ರಿಕೆಗಳಿಂದ ಕೊರೋನಾ ಹರಡುತ್ತದೆ ಎಂಬ ವದಂತಿ ಹಿನ್ನೆಲೆಯಲ್ಲಿ ಹಾಗೂ ಕೊರೋನಾ ವಿರುದ್ಧದ ಹೋರಾಟದಲ್ಲಿ ದಿನಪತ್ರಿಕೆಗಳ ಪ್ರಾಮುಖ್ಯತೆ ಕುರಿತು ಪ್ರಕಟವಾಗಿರುವ ಒಂದೇ ರೀತಿಯ ಸಂಪಾದಕೀಯ ಕನ್ನಡ ಪತ್ರಿಕೋದ್ಯಮದಲ್ಲಿ ಐತಿಹಾಸಿಕವಾಗಿದೆ. ಸ್ನೇಹಿತರೇ, ಭಯ ಬೇಡ, ನಮ್ಮ ಪತ್ರಿಕೆಗಳು ಅತ್ಯಂತ ಸುರಕ್ಷಿತವಾಗಿವೆ. ಎಂದಿನಂತೆ ಸ್ಪರ್ಶಿಸಿ, ಸುದ್ದಿಗಳನ್ನು ಓದಿ ಎಂದು ಜಾರಕಿಹೊಳಿ ಅವರು ಓದುಗರಿಗೆ ಸಂದೇಶ ನೀಡಿದ್ದಾರೆ.