ಸೋನು ನಿಗಮ್ ಮೇಲೆ ಹಲ್ಲೆ: ಘಟನೆಗೆ ಕ್ಷಮೆ ಕೇಳಿದ ಉದ್ಧವ್ ಠಾಕ್ರೆ ಬಣದ ಸೇನಾ ನಾಯಕಿ
ಆರೋಪಿ ಸ್ವಪ್ನಿಲ್ ಫತೇರ್ಪೇಕರ್ ಸ್ಥಳೀಯ ಶಾಸಕರೊಬ್ಬರ ಮಗನಾಗಿದ್ದು, ಶಿವಸೇನಾ ಸದಸ್ಯೆಯಾಗಿರುವ ಆತನ ಸಹೋದರಿ ಸುಪ್ರದಾ ಫತೇರ್ಪೇಕರ್ ಮಂಗಳವಾರ ಗಾಯಕ ಸೋನು ನಿಗಮ್ಗೆ ಕ್ಷಮೆಯಾಚಿಸಿದ್ದಾರೆ.
ಮುಂಬೈ (ಫೆಬ್ರವರಿ 21, 2023) : ಮಹಾರಾಷ್ಟ್ರದ ಮುಂಬೈನಲ್ಲಿ ಗಾಯಕ ಸೋನು ನಿಗಮ್ ಹಾಗೂ ತಂಡದ ಮೇಲೆ ಹಲ್ಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಿವಸೇನಾ ನಾಯಕಿ ಮತ್ತು ಆರೋಪಿಯ ಸಹೋದರಿ ಸುಪ್ರದಾ ಫತೇರ್ಪೇಕರ್ ಕ್ಷಮೆಯಾಚಿಸಿದ್ದಾರೆ. ಮುಂಬೈನಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಸೋಮವಾರ ರಾತ್ರಿ ಭಾರತೀಯ ಹಿನ್ನೆಲೆ ಗಾಯಕ ಸೋನು ನಿಗಮ್ ಮೇಲೆ ಪುರುಷರ ಗುಂಪು ಹಲ್ಲೆ ನಡೆಸಿದ್ದ ಆಘಾತಕಾರಿ ಘಟನೆ ನಡೆದಿದ್ದು, ಈ ಪೈಕಿ ಉದ್ಧವ್ ಠಾಕ್ರೆ ಬಣದ ಶಾಸಕ ಪ್ರಕಾಶ್ ಫತೇರ್ಪೇಕರ್ ಅವರ ಪುತ್ರ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಆರೋಪಿ ಸ್ವಪ್ನಿಲ್ ಫತೇರ್ಪೇಕರ್ ಸ್ಥಳೀಯ ಶಾಸಕರೊಬ್ಬರ ಮಗನಾಗಿದ್ದು, ಶಿವಸೇನಾ ಸದಸ್ಯೆಯಾಗಿರುವ ಆತನ ಸಹೋದರಿ ಸುಪ್ರದಾ ಫತೇರ್ಪೇಕರ್ ಮಂಗಳವಾರ ಗಾಯಕ ಸೋನು ನಿಗಮ್ಗೆ ಕ್ಷಮೆಯಾಚಿಸಿದ್ದಾರೆ. ಅಲ್ಲದೆ, ಆಧಾರವಿಲ್ಲದ ವದಂತಿಗಳು ಮತ್ತು ವಿಷಯವನ್ನು ರಾಜಕೀಯಗೊಳಿಸಲು ಪ್ರಯತ್ನಿಸುತ್ತಿರುವವರನ್ನು ನಂಬಬೇಡಿ ಎಂದೂ ಆರೋಪಿ ಸಹೋದರಿ ಕೇಳಿಕೊಂಡಿದ್ದಾರೆ.
ಮಂಗಳವಾರ ಬೆಳಗ್ಗೆ ಸುಪ್ರದಾ ಫತೇರ್ಪೇಕರ್ ತಮ್ಮ ಟ್ವಿಟ್ಟರ್ನಲ್ಲಿ, "ಚೆಂಬೂರ್ ಉತ್ಸವದ ಆಯೋಜಕಿಯಾಗಿ, 2023 ರ ಚೆಂಬೂರ್ ಉತ್ಸವದ ಕೊನೆಯಲ್ಲಿ ಸಂಭವಿಸಿದ ಅಹಿತಕರ ಘಟನೆಯ ಬಗ್ಗೆ ಕೆಲವು ಸಂಗತಿಗಳ ಮೇಲೆ ಬೆಳಕು ಚೆಲ್ಲಲು ನಾನು ಬಯಸುತ್ತೇನೆ. ಶ್ರೀ ಸೋನು ನಿಗಮ್ ಅವರ ಕಾರ್ಯಕ್ರಮ ಮುಗಿದ ನಂತರ ವೇದಿಕೆಯಿಂದ ತರಾತುರಿಯಿಂದ ಕೆಳಗಿಳಿದಾಗ, ನನ್ನ ಸಹೋದರ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ದ್ದ. ಈ ವೇಳೆ ಕೋಲಾಹಲದಿಂದಾಗಿ ಗದ್ದಲ ಉಂಟಾಯಿತು. ಘಟನೆಯಲ್ಲಿ
ಬಿದ್ದ ವ್ಯಕ್ತಿಯನ್ನು ಝೆನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಪರೀಕ್ಷೆಯ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು ಎಂದೂ ಅವರು ಹೇಳಿದರು.
ಅಲ್ಲದೆ, ಸೋನು ನಿಗಮ್ ಅವರು ಈ ಘಟನೆಯಲ್ಲಿ ಗಾಯಗೊಂಡಿಲ್ಲ. ಸಂಸ್ಥೆಯ ತಂಡದ ಪರವಾಗಿ, ಅಹಿತಕರ ಘಟನೆಗಾಗಿ ನಾವು ಸೋನು ಸರ್ ಮತ್ತು ಅವರ ತಂಡಕ್ಕೆ ಅಧಿಕೃತವಾಗಿ ಕ್ಷಮೆಯಾಚಿಸಿದ್ದೇವೆ. ದಯವಿಟ್ಟು ಯಾವುದೇ ಆಧಾರರಹಿತ ವದಂತಿಗಳನ್ನು ಮತ್ತು ಈ ವಿಷಯವನ್ನು ರಾಜಕೀಯ ಮಾಡಲು ಪ್ರಯತ್ನಿಸುತ್ತಿರುವವರು ನಂಬಬೇಡಿ ಎಂದೂ ಟ್ವೀಟ್ ಮೂಲಕ ಕೇಳಿಕೊಂಡಿದ್ದಾರೆ.
ಘಟನೆಯ ವಿವರ..
ಸೋಮವಾರ, ಸೋನು ನಿಗಮ್ ಮುಂಬೈನ ಚೆಂಬೂರ್ನಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಆರೋಪಿ ಸ್ವಪ್ನಿಲ್ ಫತೇರ್ಪೇಕರ್ ತನ್ನ ಕೆಲವು ಸ್ನೇಹಿತರ ಜೊತೆಗೂಡಿ ಗಾಯಕನೊಂದಿಗೆ ಸೆಲ್ಫಿ ಕ್ಲಿಕ್ಕಿಸಲು ಪ್ರಯತ್ನಿಸಿದರು.
ಈ ವೇಳೆ ಗಾಯಕನ ಭದ್ರತಾ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕೆ ಕಾರಣವಾಯಿತು, ಈ ಸಂದರ್ಭದಲ್ಲಿ ಸೋನು ನಿಗಮ್ ಅವರ ಆಪ್ತ ಗುಲಾಮ್ ಮುಸ್ತಫಾ ಖಾನ್ ಅವರ ಮಗ ರಬ್ಬಾನಿ ಖಾನ್, ಅವರ ನಿಕಟ ಸಹವರ್ತಿ ಮತ್ತು ಅಂಗರಕ್ಷಕರು ಗಾಯಗೊಂಡು ಆಸ್ಪತ್ರೆಗೆ ತೆರಳಿದರು. ಅಲ್ಲದೆ, ಸೋನು ನಿಗಮ್ನನ್ನು ಸಹ ತಪಾಸಣೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದು, ನಂತರ ಅವರು ತನ್ನ ಮೇಲೆ ಹಾಗೂ ತನ್ನ ತಂಡದ ಸದಸ್ಯರ ವಿರುದ್ಧ ಹಲ್ಲೆ ಮಾಡಿದ ಆರೋಪಿ ವಿರುದ್ಧ ಪೊಲೀಸರಿಗೆ ದೂರು ನೀಡಿದರು.