ಅನಾರೋಗ್ಯ ಪೀಡಿತ ಅಭಿಮಾನಿಗೆ ಕರೆ ಮಾಡಿದ ರಜನಿಕಾಂತ್; ವಿಡಿಯೋ ವೈರಲ್!
ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿರುವ ಅಭಿಮಾನಿ ಮುತ್ತುಮಣಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ ರಜನಿಕಾಂತ್. ವಿಡಿಯೋ ನೋಡಿ ಕಣ್ಣೀರಿಟ್ಟ ಅಭಿಮಾನಿ ಬಳಗ.
ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ಗೆ ಅಭಿಮಾನಿಗಳು ಒಬ್ರಾ, ಇಬ್ರಾ? ತಲೈವಾಗೆ ಊರು ಊರಲ್ಲೂ ಅಭಿಮಾನಿಗಳಿದ್ದಾರೆ. ಸೋಷಿಯಲ್ ಮೀಡಿಯಾ ಮೂಲಕ ಎಲ್ಲರ ಜೊತೆ ಸಂಪರ್ಕದಲ್ಲಿರುವ ರಜನಿಕಾಂತ್ ಅವರ ಅಪ್ಪಚ ಅಭಿಮಾನಿಯೊಬ್ಬ ಅನಾರೋಗ್ಯದಿಂದ ಬಳಲುತ್ತಿದ್ದು ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.
ಹೌದು, ರಜನಿಕಾಂತ್ ಹೆಸರಿನಲ್ಲಿ ಮೊದಲ ಅಭಿಮಾನಿಗಳ ಬಳಗ ಕಟ್ಟಿದ ಮುತ್ತುಮಣಿ ಎಂಬುವವರು ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮದುರೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಚಾರ ತಿಳಿದ ರಜನಿಕಾಂತ್ ಕರೆ ಮಾಡಿ, ಕುಟುಂಬಸ್ಥರ ಜೊತೆ ಮಾತನಾಡಿ ಧೈರ್ಯ ತುಂಬಿ ಆರ್ಥಿಕ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ಮುತ್ತುಮಣಿ ಜೊತೆ ಮಾತನಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ತ.ನಾ. ನಲ್ಲಿ ಕರುಣಾನಿಧಿ, ಜಯಲಲಿತಾ ಇಲ್ಲದ ಮೊದಲ ಚುನಾವಣೆ ; ರಜನಿಗಾಗಿ ಕಾದು ಕಾದು ಬಿಜೆಪಿ ಸುಸ್ತು!
ವಿಡಿಯೋದಲ್ಲಿ ಏನಿದೆ?
ಮುತ್ತುಮಣಿ ಆರೋಗ್ಯದ ಬಗ್ಗೆ ವಿಚಾರಿಸಿದ ರಜನಿಕಾಂತ್ ತುಂಬಾ ಆಪ್ತವಾಗಿ ಮಾತನಾಡಿದ್ದಾರೆ. ಹಲವು ವರ್ಷಗಳ ಪರಿಚಯವಿದ್ದ ಕಾರಣ ಈ ಇಬ್ಬರೂ ಈ ಆಪ್ತತೆ ಇದೆ ಎನ್ನಲಾಗಿದೆ. ಕೆಲವು ದಿನಗಳಿಂದ ಶ್ವಾಸಕೋಶದ ಸಮಸ್ಯೆ ಎದುರಿಸುತ್ತಿದ್ದು, ತಕ್ಷಣವೇ ಸರಿಯಾದ ಚಿಕಿತ್ಸೆ ಪಡೆಯದೆ ಫಂಗಲ್ ಸೋಂಕಿನಂತಾಗಿದೆ. ಇದೀಗ ದಿನವೂ ಪರೀಕ್ಷೆ ಮಾಡಿಸಿಕೊಂಡು ವೈದ್ಯರ ಸಲಹೆಯಂತೆ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅಲ್ಲದೇ ಗಾಬರಿಗೊಂಡ ಕುಟುಂಬಸ್ಥರು ಕೊರೋನಾ ಪರೀಕ್ಷೆಯನ್ನೂ ಮಾಡಿಸಿದ್ದಾರೆ. ವರದಿಯಲ್ಲಿ ನೆಗೆಟಿವ್ ಬಂದಿದೆ ಎಂದು ಮುತ್ತುಮಣಿ ಹೇಳಿದ್ದಾರೆ.
ನೋವಿನಿಂದ ಬೇಸರದಲ್ಲಿದ್ದ ಮುತ್ತುಮಣಿ ಅವರಿಗೆ ರಜನಿಕಾಂತ್ ಕರೆ ಮಾಡಿದ್ದು ಉತ್ಸಾಹ ಕೊಟ್ಟಿದೆ. ತನಗೆ ತಂದೆ-ತಾಯಿ ಎಲ್ಲವೂ ನೀವೇ ಎಂದು ಮುತ್ತುಮಣಿ ಮಾತನಾಡಿ, ಭಾವುಕರಾಗಿದ್ದಾರೆ. ರಜನಿಕಾಂತ್ ಅಭಿಮಾನಿಗಳ ಜೊತೆ ಇಷ್ಟೊಂದು ಕ್ಲೋಸ್ ಅಗಿ ಮಾತನಾಡಿರುವುದನ್ನು ನೋಡಿ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.