ಶೃಂಗೇರಿ ಶಾರದೆ ದರ್ಶನ ಪಡೆದ ಸುಪ್ರೀಂ ಸಿಜೆ ಎಸ್‌.ಎ.ಬೊಬ್ಡೆ| ಬುಧವಾರ ಕೊಲ್ಲೂರು ಕ್ಷೇತ್ರಕ್ಕೆ ಭೇಟಿ ನೀಡಿದ್ದ ಮುಖ್ಯ ನ್ಯಾಯಮೂರ್ತಿ

ಶೃಂಗೇರಿ[ಡಿ.27]: ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೊಬ್ಡೆ ಗುರುವಾರ ಶೃಂಗೇರಿ ಕ್ಷೇತ್ರಕ್ಕೆ ಭೇಟಿ ನೀಡಿದರು.

ಬುಧವಾರ ಕೊಲ್ಲೂರು ಕ್ಷೇತ್ರಕ್ಕೆ ಭೇಟಿ ನೀಡಿದ್ದ ಮುಖ್ಯ ನ್ಯಾಯಮೂರ್ತಿಯವರು ಗುರುವಾರ ಮಧ್ಯಾಹ್ನ ಶೃಂಗೇರಿ ಮಠಕ್ಕೆ ಆಗಮಿಸಿದರು. ಶ್ರೀಮಠದಲ್ಲಿ ಸಂಪ್ರದಾಯದಂತೆ ಸಕಲ ಗೌರವಗಳೊಂದಿಗೆ ಸಿಜೆಐ ಎಸ್‌.ಎ.ಬೋಬ್ಡೆ ಅವರನ್ನು ಸ್ವಾಗತಿಸಲಾಯಿತು.

ಮೊದಲಿಗೆ ಶ್ರೀ ಶಾರದಾಂಬಾ ದೇವಾಲಯಕ್ಕೆ ತೆರಳಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಅವರು ಬಳಿಕ ಜಗದ್ಗುರು ಶ್ರೀ ಭಾರತೀತೀರ್ಥರು ಹಾಗೂ ಶ್ರೀ ವಿಧುಶೇಖರ ಭಾರತೀ ತೀರ್ಥರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ತರುವಾಯ ಶಂಕರಾಚಾರ್ಯ, ತೋರಣಗಣಪತಿ, ವಿದ್ಯಾಶಂಕರ, ಶ್ರೀ ಸುಬ್ರಹ್ಮಣ್ಯ ದೇವಾಲಯಗಳಿಗೆ ತೆರಳಿ ದರ್ಶನ ಪಡೆದು ಕ್ಷೇತ್ರದಲ್ಲಿಯೇ ವಾಸ್ತವ್ಯ ಹೂಡಿದರು.