Asianet Suvarna News Asianet Suvarna News

ಉಡುಪಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಅಗ್ನಿಪಥ ತರಬೇತಿ ಕೇಂದ್ರ ರೆಡಿ

ಉಡುಪಿಯಲ್ಲಿ ಅಗ್ನಿಪಥ ಯೋಜನೆಗೆ ಯುವಕರನ್ನು ತರಬೇತಿ ಗೊಳಿಸುವ ಕೇಂದ್ರ ಸಜ್ಜಾಗಿದೆ. ಇದಕ್ಕೆ ಪೂರಕವಾಗಿ  ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರ ತವರು ಜಿಲ್ಲೆ ಉಡುಪಿಯಲ್ಲಿ ಅಗ್ನಿಪಥ ತರಬೇತಿ ಕೇಂದ್ರವನ್ನು ಸಜ್ಜುಗೊಳಿಸಿದೆ.

Agniveer Training Center is ready by the Backward Classes Welfare Department in Udupi gow
Author
First Published Sep 27, 2022, 7:40 PM IST

ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ (ಸೆ.27): ಕೇಂದ್ರ ಸರ್ಕಾರ ಅಗ್ನಿಪಥ ಯೋಜನೆಯನ್ನು ಘೋಷಿಸಿದಾಗ ಈ ಬಗ್ಗೆ ಅನೇಕ ಪರ ವಿರೋಧ ಚರ್ಚೆಗಳು ತಾರಕಕ್ಕೇರಿದ್ದವು. ಅನೇಕ ಜನ ಯೋಜನೆಯನ್ನು ವಿರೋಧಿಸಿ ಹೇಳಿಕೆ ನೀಡಿದ್ದರು. ಈಗ ವಿವಾದಗಳೆಲ್ಲ ತಣ್ಣಗಾಗಿದೆ. ಅಗ್ನಿಪಥ ಯೋಜನೆಯನ್ನು ಯಶಸ್ವಿಗೊಳಿಸಲು ರಾಜ್ಯದ ಸರಕಾರಿ ಇಲಾಖೆಗಳು, ಸಾಮಾಜಿಕ ಸಂಘಟನೆಗಳು ಮುಂದೆ ಬಂದಿವೆ. ದೇಶ ಸೇವೆ ನಡೆಸಲು ಇದೊಂದು ಅವಕಾಶ ಎಂದು ಭಾವಿಸಿ ಜನ ಅಗ್ನಿಪಥ ಯೋಜನೆಗೆ ಪೂರಕ ಚಟುವಟಿಕೆಗಳನ್ನು ಕೈಗೊಂಡಿದ್ದಾರೆ, ಉಡುಪಿಯಲ್ಲಿ ಅಗ್ನಿಪಥ ಯೋಜನೆಗೆ ಯುವಕರನ್ನು ತರಬೇತಿ ಗೊಳಿಸುವ ಕೇಂದ್ರ ಸಜ್ಜಾಗಿದೆ. ದೇಶದ ಮಿಲಿಟರಿ ವ್ಯವಸ್ಥೆಯನ್ನು ಮತ್ತಷ್ಟು ಸದೃಢಗೊಳಿಸುವ ಉದ್ದೇಶ ಇಟ್ಟುಕೊಂಡು ಕೇಂದ್ರ ಸರಕಾರ ಅಗ್ನಿಪಥ ಯೋಜನೆ ಘೋಷಿಸಿತು. ಇದಕ್ಕೆ ಪೂರಕವಾಗಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರ ತವರು ಜಿಲ್ಲೆ ಉಡುಪಿಯಲ್ಲಿ ಅಗ್ನಿಪಥ ತರಬೇತಿ ಕೇಂದ್ರವನ್ನು ಸಜ್ಜುಗೊಳಿಸಿದೆ. ಜಿಲ್ಲೆಯ ಬಾರಕೂರು ಎಂಬಲ್ಲಿ ತುಳುನಾಡಿನ ಇತಿಹಾಸ ಪುರುಷರಾದ ಕೋಟಿ ಚೆನ್ನಯ್ಯ ಅವರ ಹೆಸರಿನಲ್ಲಿ ಅಗ್ನಿಪಥ ತರಬೇತಿ ಕೇಂದ್ರ ಇದೀಗ ಸಿದ್ಧಗೊಳ್ಳುತ್ತಿದೆ. ಭಾರತೀಯ ಸೇನೆಯಲ್ಲಿ ಕಿರು ಅವಧಿಗೆ ಸೇವೆ ಸಲ್ಲಿಸುವ ಸೈನಿಕರಿಗೆ ಇಲ್ಲಿ ತರಬೇತಿ ನೀಡಲಾಗುವುದು.

ಪ್ರಧಾನಮಂತ್ರಿಯವರ ಮಹತ್ವಾಕಾಂಕ್ಷೆಯ ಅಗ್ನಿಪಥ ವೀರರ ದೈಹಿಕ ತರಬೇತಿ ಕೇಂದ್ರಕ್ಕೆ ಬಾರಕೂರು ಬಳಿಯ ಹನೆ ಹಳ್ಳಿ ಗ್ರಾಮದ ನ್ಯಾಷನಲ್ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯನ್ನು ಆಯ್ಕೆ ಮಾಡಲಾಗಿದೆ. 97 ವರ್ಷಗಳ ಇತಿಹಾಸ ಇರುವ ಶಾಲೆಯಲ್ಲಿ ಇದೀಗ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಹಾಗಾಗಿ ಶಾಲಾ ಆಡಳಿತ ಮಂಡಳಿ ಈ ಯೋಜನೆಗೆ ಶಾಲಾ ಕಟ್ಟಡವನ್ನು ನೀಡಿದೆ. ಈ ಶಾಲೆಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿಗಳನ್ನು ಅದೇ ಆಡಳಿತದ ಮತ್ತೊಂದು ಶಾಲೆಗೆ ವರ್ಗಾಯಿಸಲಾಗಿದೆ.

ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಅಗ್ನಿಪಥ ವೀರರಿಗೆ ಉಚಿತವಾಗಿ ನಾಲ್ಕು ತಿಂಗಳ ತರಬೇತಿಯನ್ನು ಇಲ್ಲಿ ನೀಡಲಾಗುತ್ತಿದೆ. ಏಕಕಾಲದಲ್ಲಿ 100 ಮಂದಿಯಂತೆ ವರ್ಷದಲ್ಲಿ ಮೂರು ತಂಡವನ್ನು ರಚಿಸಿ ತರಬೇತಿ ವ್ಯವಸ್ಥೆ ಮಾಡಲಾಗಿದೆ. ನಿವೃತ್ತ ಯೋಧರಾದ ರವಿಶೆಟ್ಟಿ ತೆಕ್ಕಟ್ಟೆ ಮತ್ತು ಕೃಷ್ಣಪ್ಪ ಪರ್ಕಳ ತರಬೇತಿದಾರರಾಗಿ ಇಲ್ಲಿ ಕಾರ್ಯನಿರ್ವಹಿಸುತ್ತಾರೆ. 

ಉಡುಪಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸಚಿನ್ ಅವರು ಈ ಕೆಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಕ್ಟೋಬರ್ ಮೊದಲ ವಾರದಲ್ಲಿ ತರಬೇತಿ ಕೇಂದ್ರ ವ್ಯವಸ್ಥಿತವಾಗಿ ತೆರೆಯಲಿದೆ.

Agnipath recruitment rally: ನೇಮಕಾತಿಗೆ ಬಂದವರ ಹಸಿವು ನೀಗಿಸುತ್ತಿರುವ ಸೇವಾ ಸಂಸ್ಥೆಗಳು

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿವೃತ್ತ ಯೋಧರಾದ ರವಿಚಂದ್ರ ಶೆಟ್ಟಿ, ಸೇನೆ ಸೇರಿ ದೇಶದ ಸೇವೆ ಮಾಡುವ ಅವಕಾಶಕ್ಕೆ ಯುವಕರು ಕಾತರರಾಗಿದ್ದಾರೆ. ಇಂತಹ ಯುವಕರಿಗೆ ತರಬೇತಿ ವೆಚ್ಚವನ್ನು ಸರಕಾರವೇ ಭರಿಸುವುದರಿಂದ ಆಸಕ್ತ ದೇಶಭಕ್ತ ಯುವಜನತೆ ಇದರ ಸದವಕಾಶ ಪಡೆದುಕೊಳ್ಳಲು ಅನುಕೂಲವಾಗಿದೆ ಎಂದಿದ್ದಾರೆ.

ದಾನಿಗಳ ಸಹಾಯ-ಸಹಕಾರದಿಂದ ಅಗ್ನಿವೀರರ ನೇಮಕಾತಿ Rally ಯಶಸ್ವಿ

ಅಗ್ನಿಪಥ್ ಸೇರ್ಪಡೆಗೆ 17 ವರ್ಷ ಆರು ತಿಂಗಳು ಪೂರ್ತಿಯಾದ ಮತ್ತು 21 ಒಳಗಿನವರಾಗಿರಬೇಕು. ಪೊಲೀಸ್, ಬಿಎಸ್‌ಎಫ್, ಸಿಆರ್‌ಪಿಎಫ್, ಐಟಿಬಿಪಿ ಸಿಐಎಸ್‌ಎಫ್‌ಗೆ 18 ವರ್ಷದಿಂದ 25 ವರ್ಷ ವಯೋಮಿತಿಯವರಾಗಿರಬೇಕು ಅಭ್ಯರ್ಥಿಯ ಎತ್ತರ 166 ಸೆಮೀ, 77 ಸೆ.ಮೀ. ಎದೆ ಸುತ್ತಳತೆ ಉಬ್ಬಿಸಿದಾಗ 5 ಸೆ.ಮೀ. ಹೆಚ್ಚಬೇಕು. 1,600 ಮೀಟರ್ ದೂರವನ್ನು 5.30 ನಿಮಿಷದಲ್ಲಿ ಕ್ರಮಿಸಬೇಕು. ನಿರಂತರ 10 ಪುಲ್‌ಅಪ್ ತೆಗೆಯುವ, 9 ಅಡಿ ದೂರವನ್ನು ಜಂಪ್ ಮಾಡುವ ಮತ್ತು ಜಿಗ್‌ಜಾಗ್ ಬ್ಯಾಲೆನ್ಸ್ ಕಾಪಾಡುವ ಸಾಮರ್ಥ್ಯ ಹೊಂದಿರಬೇಕು. ಪೊಲೀಸ್ ಇನ್ನಿತರ ವಿಭಾಗಗಳಿಗೆ 5 ಕಿ.ಮೀ. ದೂರವನ್ನು 24 ನಿಮಿಷ, 1, 600 ಮೀಟರ್ ದೂರವನ್ನು 6.30 ನಿಮಿಷದಲ್ಲಿ ಕ್ರಮಿಸಬೇಕು. ಮಹಿಳೆಯರು 400 ಮೀಟರ್ ದೂರವನ್ನು 2 ನಿಮಿಷದಲ್ಲಿ ಕ್ರಮಿಸಬೇಕು.

Follow Us:
Download App:
  • android
  • ios