‘ಅಗ್ಗ’ದ ಪೆಟ್ರೋಲ್ಗೆ ಮಹಾರಾಷ್ಟ್ರದತ್ತ ಮ.ಪ್ರ. ಜನರ ದೌಡು!
* ಮಧ್ಯಪ್ರದೇಶದಲ್ಲಿ 120 ರು. ಗಡಿ ದಾಟಿದ ಪೆಟ್ರೋಲ್
* ‘ಅಗ್ಗ’ದ ಪೆಟ್ರೋಲ್ಗೆ ಮಹಾರಾಷ್ಟ್ರದತ್ತ ಮ.ಪ್ರ. ಜನರ ದೌಡು!
ಭೋಪಾಲ್(ನ.01): ಮಧ್ಯಪ್ರದೇಶದಲ್ಲಿ (Madhya Pradesh) ಪೆಟ್ರೋಲ್ (Petrol) ಬೆಲೆ 120 ರು. ಗಡಿ ದಾಟಿದ್ದರಿಂದ ಗಡಿ ಭಾಗದ ಬಾಲ್ಘಾಟ್ ನಗರದ ಜನರು ಪೆಟ್ರೋಲ್, ಡೀಸೆಲ್(Diesel) ಹಾಕಿಸಿಕೊಳ್ಳಲು ಪಕ್ಕದ ಮಹಾರಾಷ್ಟ್ರ, ಛತ್ತೀಸ್ಗಢದತ್ತ (Chhattisgarh) ಮುಖಮಾಡುತ್ತಿದ್ದಾರೆ.
ಮಧ್ಯಪ್ರದೇಶದ ಬಾಲ್ಘಾಟ್ನಿಂದ ಮಹಾರಾಷ್ಟ್ರದ(Maharashtra) ಗೋಂಡಿಯಾ ನಗರ ಕೇವಲ 45 ಕಿಲೋಮೀಟರ್ ದೂರವಿದ್ದು, ಅಲ್ಲಿಗಿಂತ ಇಲ್ಲಿ ತೈಲ ದರದಲ್ಲಿ 4ರಿಂದ 5ರುಪಾಯಿ ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ವಾಹನ ಸವಾರರು ಗೋಂಡಿಯಾಗೆ ಬಂದು ಫುಲ್ ಟ್ಯಾಂಕ್ ಮಾಡಿಸಿಕೊಂಡು ಹೋಗುತ್ತಿದ್ದಾರೆ.
ಅಲ್ಲದೇ ಗೋಂಡಿಯಾದ ಪೆಟ್ರೋಲ್ ಬ್ಯಾಂಕ್ ಮಾಲೀಕರು ತಮ್ಮ ವ್ಯಾಪಾರ ಹೆಚ್ಚಿಸಿಕೊಳ್ಳಲು, ‘ನಿಮ್ಮಲ್ಲಿಗಿಂತ ನಮ್ಮಲ್ಲಿ ತೈಲ ಬೆಲೆ ಕಡಿಮೆಯಿದೆ’ ಎಂದು ಕರಪತ್ರಗಳನ್ನು ಮುದ್ರಿಸಿ ದಿನಪತ್ರಿಕೆಗಳೊಂದಿಗೆ ಬಾಲ್ಘಾಟ್ನಲ್ಲಿ ಹಂಚುತ್ತಿದ್ದಾರೆ. ಈ ಮೂಲಕ ಮಧ್ಯಪ್ರದೇಶದ ಗಡಿಭಾಗದ ವಾಹನಸವಾರರನ್ನು ತಮ್ಮತ್ತ ಸೆಳೆಯುತ್ತಿದ್ದಾರೆ.
ತೈಲ ಬೆಲೆ ಹೆಚ್ಚಾಗಿದ್ದರಿಂದ ಅನೇಕ ಜನರು ಖಾಸಗಿ ವಾಹನಗಳನ್ನು ರಸ್ತೆಗಿಳಿಸದೇ ಸಾರ್ವಜನಿಕ ಸಾರಿಗೆ ಬಳಸುತ್ತಿದ್ದಾರೆ, ಇನ್ನೂ ಕೆಲವರು ಮಹಾರಾಷ್ಟ್ರಕ್ಕೆ ಬಂದು ಪೆಟ್ರೋಲ್, ಡೀಸೆಲ್ ಹಾಕಿಸಿಕೊಳ್ಳುತ್ತಿರುವದರಿಂದ ಬಾಲ್ಘಾಟ್ನ ಪೆಟ್ರೋಲ್ ಬಂಕ್ಗಳ ಮಾಲೀಕರು ವ್ಯಾಪಾರವಿದಲ್ಲದೇ ಚಿಂತೆಗೀಡಾಗಿದ್ದಾರೆ.
ಸತತ 4ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ 35 ಪೈಸೆ ಹೆಚ್ಚಳ
ಸತತ 4ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 35ಪೈಸೆ ಏರಿಕೆಯಾಗಿದ್ದು, ಭಾನುವಾರ ದೇಶದ ಹಲವು ರಾಜ್ಯಗಳಲ್ಲಿ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಮುಟ್ಟಿದೆ. ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಪೆಟ್ರೋಲ್ ಬೆಲೆ 120 ರು. ಗಡಿ ದಾಟಿದೆ.
ಬೆಂಗಳೂರಲ್ಲಿ ಪೆಟ್ರೋಲ್ 113.15 ಹಾಗೂ ಡೀಸೆಲ್ 104.09 ರು.ಗೆ ಏರಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ 109.34 ರು. ಮತ್ತು ಡೀಸೆಲ್ ಬೆಲೆ 98.07 ರು.ಗೆ ತಲುಪಿದೆ. ಇನ್ನು ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್ ಬೆಲೆ 115.15 ರು. ಮತ್ತು ಡೀಸೆಲ್ ಬೆಲೆ 106.23 ರು.ಗೆ ಮುಟ್ಟಿದೆ.
ದೇಶದ ಎಲ್ಲಾ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಬೆಲೆ ನೂರರ ಗಡಿ ದಾಟಿದ್ದು, ಅರ್ಧದಷ್ಟುರಾಜ್ಯಗಳಲ್ಲಿ ಡೀಸೆಲ್ ಬೆಲೆ ಕೂಡ ಶತಕ ದಾಟಿದೆ. ಮಧ್ಯಪ್ರದೇಶದ ಪನ್ನಾ, ಸಾತ್ನಾ, ರೇವಾ, ಚಿಂದ್ವಾಡಾ, ಬಾಲ್ಘಾಟ್ ಸೇರಿ ಹಲವೆಡೆ ಪೆಟ್ರೋಲ್ ದರ 120 ರು. ದಾಟಿದೆ. ರಾಜಸ್ಥಾನದ ಶ್ರೀಗಂಗಾನಗರ ಮತ್ತು ಹನುಮಗಢದಲ್ಲೂ ಪೆಟ್ರೋಲ್ 120ರ ಗಡಿ ದಾಟಿದೆ.
ಪೆಟ್ರೋಲ್ ಬೆಲೆಯಲ್ಲಿ ಸೆಪ್ಟಂಬರ್ 28ರಿಂದ 25 ಬಾರಿ ಏರಿಕೆಯಾಗಿದ್ದರೆ, ಡೀಸೆಲ್ ಬೆಲೆಯಲ್ಲಿ ಸೆಪ್ಟಂಬರ್ 24ರಿಂದ 28 ಬಾರಿ ಏರಿಕೆಯಾಗಿದೆ.
ಉತ್ತರ ಪ್ರದೇಶದಲ್ಲಿ ಪೆಟ್ರೋಲ್, ಡೀಸೆಲ್ ಅಗ್ಗ: VAT ಇಳಿಸುವ ಬಗ್ಗೆ ಯೋಗಿ ಸಭೆ!
ಪೆಟ್ರೋಲ್(Petrol), ಡೀಸೆಲ್(Diesel) ಬೆಲೆ ಏರಿಕೆಯಿಂದ ರಾಜ್ಯದ ಜನತೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Chief Minister Yogi Adityanath) ಗುರುವಾರ ಸಂಜೆ 5.30ಕ್ಕೆ ಅಧಿಕೃತ ನಿವಾಸದಲ್ಲಿ ಮಹತ್ವದ ಸಭೆ ಕರೆದಿದ್ದಾರೆ. ಸಿಕ್ಕಿರುವ ಮಾಹಿತಿ ಪ್ರಕಾರ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವಿಧಿಸಿರುವ ವ್ಯಾಟ್(VAT) ಬಗ್ಗೆ ಈ ಸಭೆಯಲ್ಲಿ ಚರ್ಚೆ ನಡೆಸಬಹುದು. ಸಭೆಯಲ್ಲಿ ವ್ಯಾಟ್ ಕಡಿತಗೊಳಿಸುವಾಗ ಹೆಚ್ಚಿದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಸಾಮಾನ್ಯ ಜನರಿಗೆ ಪರಿಹಾರ ನೀಡಲು ನಿರ್ಧರಿಸಬಹುದು. ಸದ್ಯ ರಾಜ್ಯದಲ್ಲಿ ಪೆಟ್ರೋಲ್ ಬೆಲೆ 100 ರೂ.ಗಿಂತ ಹೆಚ್ಚು ಮಾರಾಟವಾಗುತ್ತಿದ್ದು, ಡೀಸೆಲ್ ಕೂಡ ಶತಕದ ಸಮೀಪದಲ್ಲಿದೆ ಎಂಬುವುದು ಉಲ್ಲೇಖನೀಯ. ಮುಂದಿನ ವರ್ಷ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ನಡೆಯಲಿದ್ದು, ಯೋಗಿ ಸರ್ಕಾರ ವ್ಯಾಟ್ ದರ ಕಡಿತಗೊಳಿಸುವ ಮೂಲಕ ರಾಜ್ಯದ ಜನತೆಗೆ ಕೊಂಚ ನೆಮ್ಮದಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ನಾವು ಗುರುವಾರ ಉತ್ತರ ಪ್ರದೇಶದಲ್ಲಿ ಪೆಟ್ರೋಲ್ ಬೆಲೆ ಹೇಗಿದೆ ಎಂದು ನೋಡುವುದಾದರೆ, ಲೀಟರ್ಗೆ 105 ರೂ ಹಾಗೂ ಡೀಸೆಲ್ ಲೀಟರ್ಗೆ 97.48 ರೂ.ಗೆ ಮಾರಾಟವಾಗುತ್ತಿದೆ. ಸರ್ಕಾರ ವ್ಯಾಟ್ ದರವನ್ನು ಕಡಿತಗೊಳಿಸಿದರೆ, ಡೀಸೆಲ್ ಪೆಟ್ರೋಲ್ ಬೆಲೆಯಲ್ಲಿ ಸ್ವಲ್ಪ ಇಳಿಕೆಯಾಗಬಹುದು. ಮತ್ತೊಂದೆಡೆ, ಮಂಗಳವಾರ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿಮೆ ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ. ಸೌದಿ ಅರೇಬಿಯಾ, ಗಲ್ಫ್ ರಾಷ್ಟ್ರಗಳು ಮತ್ತು ರಷ್ಯಾದೊಂದಿಗೆ ಸರ್ಕಾರದ ಮಾತುಕತೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
ಕಾಳಧನ ಮತ್ತು ಬ್ಲಾಕ್ ಮಾರ್ಕೆಟಿಂಗ್ ಕಡಿವಾಣ
ಇಂದು ಮುಖ್ಯಮಂತ್ರಿಗಳ ನಿವಾಸದಲ್ಲಿ ನಡೆಯಲಿರುವ ಸಭೆಗೆ ಹಣಕಾಸು ಇಲಾಖೆಯ ಅಧಿಕಾರಿಗಳು ಕೂಡ ಆಗಮಿಸಲಿದ್ದಾರೆ. ಸಿಕ್ಕಿರುವ ಮಾಹಿತಿಯ ಪ್ರಕಾರ ಕಾಳಧನ ಮತ್ತು ಬ್ಲಾಕ್ ಮಾರ್ಕೆಟಿಂಗ್ ತಡೆಯಲು ಪ್ರಮುಖ ನಿರ್ಧಾರಗಳನ್ನೂ ತೆಗೆದುಕೊಳ್ಳಬಹುದು. ಹಬ್ಬದ ಸಂದರ್ಭದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಖಾದ್ಯ ತೈಲಗಳ ಬೆಲೆ ಏರಿಕೆ, ತರಕಾರಿಗಳ ಬೆಲೆಗೆ ಕಡಿವಾಣ ಮುಂತಾದ ಎಲ್ಲಾ ವಿಷಯಗಳ ಬಗ್ಗೆ ಅಧಿಕಾರಿಗಳಿಗೆ ಹೆಚ್ಚಿನ ಸೂಚನೆಗಳನ್ನು ನೀಡಬಹುದು. ಇಂದು ಮುಂಜಾನೆ ತಂಡ 09ರ ಸಭೆಯಲ್ಲಿ ಡೀಸೆಲ್, ಪೆಟ್ರೋಲ್ ಬೆಲೆ ಮತ್ತು ಹಣದುಬ್ಬರ ವಿಷಯದ ಬಗ್ಗೆಯೂ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ.