ಆಟೋ ಮೊಬೈಲ್, ಷೇರು ಮಾರುಕಟ್ಟೆ ತಲ್ಲಣ: ಮತ್ತೊಂದು ಆರ್ಥಿಕ ಹಿಂಜರಿಕೆಯ ಛಾಯೆ!
ಆಟೋ ಮೊಬೈಲ್, ಷೇರು ಮಾರುಕಟ್ಟೆ ತಲ್ಲಣ| ಕೈಗಾರಿಕೆಗಳಲ್ಲಿ ಉದ್ಯೋಗ ಕಡಿತದ ಭೀತಿ| ಮತ್ತೊಂದು ಆರ್ಥಿಕ ಹಿಂಜರಿಕೆಯ ಛಾಯೆ!
ನವದೆಹಲಿ[ಆ.04]:
ಕಳೆದೊಂದು ವರ್ಷದಿಂದ ದೇಶದ ಆರ್ಥಿಕತೆ ಹಂತಹಂತವಾಗಿ ಕುಸಿತ ಕಾಣುತ್ತಿದೆ ಎಂದು ವಿಪಕ್ಷಗಳು ಆರೋಪ ಮಾಡುತ್ತಲೇ ಬರುತ್ತಿವೆ. ವಿಪಕ್ಷಗಳ ಆರೋಪವನ್ನು ಸರ್ಕಾರ ಸತತವಾಗಿ ನಿರಾಕರಿಸುತ್ತ ಬರುತ್ತಲೇ ಇದ್ದರೂ, ಇದೀಗ ಆರ್ಥಿಕತೆ ಕುಸಿದಿರುವ ಲಕ್ಷಣಗಳು ನಿಧನವಾಗಿ ಬೆಳಕಿಗೆ ಬರುತ್ತಿವೆ. ಅದರಲ್ಲಿ ಕೆಲ ಪ್ರಮುಖ ಅಂಶಗಳು ಹೀಗಿವೆ.
1. ದಿನಬಳಕೆಯ ವಸ್ತುಗಳ ಮಾರಾಟ ಕುಸಿತ
ದೇಶದ ಆರ್ಥಿಕತೆಯ ಪ್ರಮುಖ ಸೂಚ್ಯಂಕಗಳ ಪೈಕಿ ದಿನಬಳಕೆ ವಸ್ತುಗಳ ಮಾರಾಟ ಪ್ರಮುಖವಾದುದು. ಆದರೆ ಈ ಉದ್ಯಮದ ಪ್ರಮುಖ ಕಂಪನಿಗಳು ಇತ್ತೀಚೆಗೆ ಪ್ರಕಟಿಸಿದ ತಮ್ಮ ಎರಡನೇ ತ್ರೈಮಾಸಿಕ ವರದಿ ಅತ್ಯಂತ ನಿರಾಶಾದಾಯಕವಾಗಿದೆ. ಮೊದಲ ತ್ರೈಮಾಸಿಕದಲ್ಲಿ ಎರಡಂಕಿಯ ಪ್ರಗತಿ ದಾಖಲಿಸಿದ್ದ ಹಿಂದುಸ್ತಾನ್ ಯುನಿಲಿವರ್, ಐಟಿಸಿ, ಗೋದ್ರೇಜ್ ಸೇರಿ ಹಲವು ಕಂಪನಿಗಳು 2ನೇ ತ್ರೈಮಾಸಿಕದಲ್ಲಿ ಕೇವಲ ಒಂದಂಕಿ ಬೆಳವಣಿಗೆ ದಾಖಲಿಸಿವೆ.
2. ಆಟೋಮೊಬೈಲ್ ಸಾರ್ವಕಾಲಿಕ ಕುಸಿತ
ಆಟೋಮೊಬೈಲ್ ಕ್ಷೇತ್ರದಲ್ಲಿ ಸಾರ್ವಕಾಲಿಕ ಕುಸಿತ ಕಂಡುಬಂದಿದೆ. ಈ ಕ್ಷೇತ್ರದಲ್ಲಿ ಒಟ್ಟು 3.7 ಕೋಟಿ ಜನ ಕೆಲಸ ಮಾಡುತ್ತಿದ್ದು, ದೇಶದ ಜಿಡಿಪಿಗೆ ಶೇ.7 ರಷ್ಟುಕೊಡುಗೆ ನೀಡುತ್ತಿದೆ. ಸದ್ಯ ಈ ಕ್ಷೇತ್ರ ಕೂಡ ಹಳ್ಳ ಹಿಡಿದಿದ್ದು, ಕಳೆದ ಕೆಲ ತಿಂಗಳಿನಿಂದ 5 ಲಕ್ಷ ಪ್ರಯಾಣಿಕ ವಾಹನಗಳು ಮತ್ತು 30 ಲಕ್ಷ ದ್ವಿಚಕ್ರ ವಾಹನಗಳು ಮಾರಾಟವಾಗದೆ ಉಳಿದಿದೆ. ಅಟೋಮೊಬೈಲ್ ದೈತ್ಯ ಮಾರುತಿಯ ಷೇರು ಮೌಲ್ಯ ಕಳೆದೊಂದು ವರ್ಷದಿಂದ ಶೇ.26 ರಷ್ಟುಕುಸಿದಿದ್ದು, ಇದು ಭಾರತದಲ್ಲಿ ಅಟೋಮೊಬೈಲ್ ಕ್ಷೇತ್ರದ ಕುಸಿತವನ್ನು ಸಾರಿ ಹೇಳುತ್ತಿದೆ.
ಆರ್ಥಿಕತೆ: 7ನೇ ಸ್ಥಾನಕ್ಕೆ ಕುಸಿದ ಭಾರತ, ಮೇಲಕ್ಕೇರಿದ ಬ್ರಿಟನ್, ಫ್ರಾನ್ಸ್!
3. ಕಂಪನಿಗಳಿಗೆ ಸರ್ಕಾರದಿಂದ ಮೂಗುದಾರ
ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ನಲ್ಲಿ ಆಗರ್ಭ ಶ್ರೀಮಂತ ತೆರಿಗೆ ವಿಧಿಸಿರುವುದು ಕಂಪನಿಗಳಿಗೆ ಹಿನ್ನಡೆಯಾಗಿದೆ. ಇದರಿಂದಾಗಿ ಕಂಪನಿಗಳು ತನ್ನ ರಚನೆಯನ್ನು ಬದಲಿಕೊಳ್ಳಬೇಕಾದ ಅನಿವಾರ್ಯ ಎದುರಾಗಿದೆ. ಅಲ್ಲದೇ ಕೇಂದ್ರ ಸರ್ಕಾರದ ಹೊಸ ಕಾರ್ಮಿಕ ನೀತಿಯಿಂದಾಗಿ ಈಗಾಗಲೇ ಕೈಗೊಂಡಿರುವ ನೌಕರರ ನೇಮಕಾತಿಯನ್ನೂ ಕೂಡ ಕಂಪನಿಗಳು ತಡೆ ಹಿಡಿದಿವೆ. ಇದರ ಜತೆಗೆ ಬ್ಯಾಂಕ್ಗಳ ಮರುಬಂಡವಾಳ, ನಗದಿನ ಕೊರತೆಯಿಂದಾಗಿ ಕಂಪನಿಗಳ ಬೆಳವಣಿಗೆಯ ವೇಗಕ್ಕೆ ಬ್ರೇಕ್ ಬಿದ್ದಿದೆ.
4. ಜಾಗತಿಕ ಸುಂಕ ಯುದ್ಧ
ಕಳೆದೊಂದು ವರ್ಷದಲ್ಲಿ ಭಾರತದ ರಫ್ತು ಶೇ.10 ರಷ್ಟುಕುಂಠಿತವಾಗಿದ್ದು, ಅಮೆರಿಕಾ- ಚೀನಾ ತೆರಿಗೆ ಸಮರದಿಂದಾಗಿ ಇದು ಮತ್ತಷ್ಟುಬಿಗಡಾಯಿಸಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ ಕೂಡ ಇದನ್ನು ಸ್ಪಷ್ಟಪಡಿಸಿದ್ದು ಆಂತರಿಕ ಬೇಡಿಕೆ ಕುಸಿತದೊಂದಿಗೆ ಕೆಲ ಬಾಹ್ಯ ಕಾರಣಗಳೂ ಕೂಡ ಭಾರತದ ಬೆಳವಣಿಗೆಗೆ ತಡೆಯಾಗಿದೆ ಎಂದು ಹೇಳಿದೆ. ಇದರ ಜತೆಗೆ ಕೃಷಿ ಸುಧಾರಣೆ, ಜಿಎಸ್ಟಿ ಮರುಪಾವತಿ ಆರ್ಥಿಕತೆಗೆ ದೊಡ್ಡ ಹೊಡೆತ ನೀಡಿದೆ.
5. ಮಾರುಕಟ್ಟೆಯಲ್ಲಿ ಕರಡಿ ಕುಣಿತ
ಎರಡನೇ ಅವಧಿಗೆ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹೂಡಿಕೆದಾರರ ಸಂಪತ್ತಿನಲ್ಲಿ 12 ಲಕ್ಷ ಕೋಟಿ ಮಾಯವಾಗಿದೆ. ಪ್ರತಿ 10ರಲ್ಲಿ 9 ಷೇರುಗಳು ಕುಸಿತ ಕಂಡಿವೆ. ಇದು ದೇಶದ ಆರ್ಥಿಕತೆ ಬೆಳವಣಿಗೆ ಬಗ್ಗೆ ಉಂಟಾಗಿರುವ ಸಂಶಯಕ್ಕೆ ಉದಾಹರಣೆ ಎನ್ನಲಾಗುತ್ತಿದೆ.