ಅಷ್ಟಕ್ಕೂ ನೋಟು ನಿಷೇಧದ ಸಾಧನೆಯಾದರೂ ಏನು?! ಟೀಕಾಕಾರರ ಪ್ರಶ್ನೆಗಳಿಗೆ ವಿತ್ತ ಸಚಿವರ ಉತ್ತರ ಏನು?! ದೇಶದ ಆರ್ಥಿಕತೆ ಸುಗಮವಾಗಿದ್ದೇ ನೋಟು ನಿಷೇಧದಿಂದ! ತೆರಿಗೆ ಸಂಗ್ರಹ ಪ್ರಮಾಣದಲ್ಲಿ ಅಪಾರ ವೃದ್ಧಿಗೆ ನಿಷೇಧ ಸಹಕಾರಿ! ಕಪ್ಪುಹಣ ಹೊರಗೆಳೆಯುವಲ್ಲಿ ನೋಟ್ ಬ್ಯಾನ್ ಮಹತ್ವದ ಪಾತ್ರ
ನವದೆಹಲಿ(ಆ.31): ಇತ್ತೀಚೆಗಷ್ಟೇ ಭಾರತೀಯ ರಿಸರ್ವ್ ಬ್ಯಾಂಕ್ ನೋಟು ನಿಷೇಧ ಕುರಿತು ವರದಿ ನೀಡಿ, ನಿಷೇಧಗೊಂಡಿದ್ದ ಬಹುತೇಕ ಎಲ್ಲಾ 500 ಮತ್ತು ಸಾವಿರ ಮುಖಬೆಲೆಯ ನೋಟುಗಳು ಬ್ಯಾಂಕ್ ಗೆ ಜಮೆಯಾಗಿದೆ ಎಂದು ವರದಿ ನೀಡಿತ್ತು. ಈ ವರದಿ ವ್ಯಾಪಕ ಚರ್ಚೆ ಮತ್ತು ವಿವಾದಕ್ಕೆ ಗ್ರಾಸವಾಗಿತ್ತು. ಅಲ್ಲದೆ ಸರ್ಕಾರ ಈ ಕಠಿಣ ಕ್ರಮದಿಂದ ಏನು ಸಾಧನೆ ಮಾಡಿತು ಎಂಬ ವ್ಯಾಪಕ ಟೀಕೆಗಳೂ ಕೂಡ ಕೇಳಿಬಂದಿತ್ತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿತ್ತ ಅರುಣ್ ಜೇಟ್ಲಿ, ನೋಟು ನಿಷೇಧ ಕ್ರಮಕ್ಕೆ ಸಂಬಂಧಿಸಿದಂತೆ ನಾನಾ ಬಗೆಯ ಚರ್ಚೆಗಳು ನಡೆಯುತ್ತಿವೆ. ಆದರೆ ಸರ್ಕಾರದ ಕ್ರಮದಿಂದಾಗಿ ಇಂದು ದೇಶದ ಆರ್ಥಿಕತೆ ಸುಗಮವಾಗಿದೆ. ಅಲ್ಲದೆ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ತೆರಿಗೆ ಸಂಗ್ರಹವನ್ನೇ ಕೇಂದ್ರವಾಗಿಟ್ಟುಕೊಂಡು ನೋಟು ನಿಷೇಧ ಮಾಡಲಾಗಿತ್ತು. ಅಲ್ಲದೆ ಕಪ್ಪುಹಣ ಹೊರಗೆಳೆಯುವುದು ಇದರ ಪ್ರಮುಖ ಉದ್ದೇಶವಾಗಿತ್ತು. ಇದರಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ಜೇಟ್ಲಿ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ಸ್ವಿಸ್ ಬ್ಯಾಂಕ್ ನಲ್ಲಿದ್ದ ಭಾರತೀಯರ ಠೇವಣಿ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದೂ ಅವರು ಮಾಹಿತಿ ನೀಡಿದರು.
ನೋಟು ನಿಷೇಧಕ್ಕೂ ಮೊದಲ 2 ವರ್ಷಗಳ ಅವಧಿಯಲ್ಲಿ ತೆರಿಗೆ ಸಂಗ್ರಹ ಅಭಿವೃದ್ಧಿ ದರ ಶೇ.6.6ರಿಂದ ಶೇ.9ರಷ್ಟಿತ್ತು, ಆದರೆ ನೋಟು ನಿಷೇಧದ ಬಳಿಕ ಈ ಪ್ರಮಾಣ ಶೇ.15 ರಿಂದ ಶೇ.18ಕ್ಕೆ ಏರಿಕೆಯಾಗಿದೆ. ಐಟಿ ಸಲ್ಲಿಕ್ಕೆ ಅರ್ಜಿಗಳ ಸಂಖ್ಯೆ 3.8 ಕೋಟಿಗಳಿಗೇರಿದೆ. ಈ ಪ್ರಮಾಣ 2017-18ನೇ ಸಾಲಿನಲ್ಲಿ 6.86ಕ್ಕೆ ಏರಿಕೆಯಾಗಿದೆ. ಆ ಮೂಲಕ ತೆರಿಗೆ ಸಲ್ಲಿಕೆ ಅಭಿವೃದ್ಧಿಯಲ್ಲೂ ಶೇ.19ರಿಂದ 25ರಷ್ಟು ಏರಿಕೆಯಾಗಿದೆ ಎಂಬುದು ಗಮನಾರ್ಹ ಎಂದು ಹೇಳಿದರು.
