Chitra Ramkrishna Case: ಷೇರುಪೇಟೆಯ ಹಿಮಾಲಯ ಯೋಗಿ ರಹಸ್ಯ ಬಯಲು!
ರಾಷ್ಟ್ರೀಯ ಷೇರು ಸೂಚ್ಯಂಕ (ಎನ್ಎಸ್ಇ)ದಲ್ಲಿ ಭಾರೀ ಹಗರಣ ನಡೆಸಿದ ಆರೋಪದ ಪ್ರಕರಣ ಸಂಬಂಧ, ಎನ್ಎಸ್ಇದ ಮಾಜಿ ಗ್ರೂಪ್ ಆಪರೇಟಿಂಗ್ ಆಫೀಸರ್ ಆನಂದ್ ಸುಬ್ರಮಣಿಯನ್ ಅವರನ್ನು ಸಿಬಿಐ ಬಂಧಿಸಿದೆ.
ನವದೆಹಲಿ (ಫೆ.26): ರಾಷ್ಟ್ರೀಯ ಷೇರು ಸೂಚ್ಯಂಕ (ಎನ್ಎಸ್ಇ)ದಲ್ಲಿ ಭಾರೀ ಹಗರಣ ನಡೆಸಿದ ಆರೋಪದ ಪ್ರಕರಣ ಸಂಬಂಧ, ಎನ್ಎಸ್ಇದ ಮಾಜಿ ಗ್ರೂಪ್ ಆಪರೇಟಿಂಗ್ ಆಫೀಸರ್ ಆನಂದ್ ಸುಬ್ರಮಣಿಯನ್ (Anand Subramanian) ಅವರನ್ನು ಸಿಬಿಐ (CBI) ಬಂಧಿಸಿದೆ. ಇದೇ ವೇಳೆ ತಾವು ಹಿಮಾಲಯದ ಅಗೋಚರ ಯೋಗಿಯೊಬ್ಬರ ಸೂಚನೆ ಅನ್ವಯ ಎನ್ಎಸ್ಇದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳುತ್ತಿದ್ದಾಗಿ ಎನ್ಎಸ್ಇದ ಮಾಜಿ ಸಿಇಒ ಚಿತ್ರಾ ರಾಮಕೃಷ್ಣ (Chitra Ramkrishna) ಅವರು ಹೇಳಿದ್ದ ಯೋಗಿ ಇದೀಗ ಆನಂದ್ ಎಂಬ ವಿಷಯವೂ ಬೆಳಕಿಗೆ ಬಂದಿದೆ.
ಸುಬ್ರಮಣಿಯನ್ ಅವರನ್ನು ಶುಕ್ರವಾರ ತಮಿಳುನಾಡಿನಲ್ಲಿ ವಶಕ್ಕೆ ಪಡೆಯಲಾಗಿದೆ. ವಿಚಾರಣೆಯ ಸಮಯದಲ್ಲಿ ಸುಬ್ರಮಣಿಯನ್ ಅವರೇ ಆ ರಹಸ್ಯ ಯೋಗಿ ಎಂಬ ಅಂಶ ಬೆಳಕಿಗೆ ಬಂದಿದೆ. ಷೇರುಪೇಟೆಯ ಯಾವುದೇ ಹೆಚ್ಚಿನ ಅನುಭವ ಇಲ್ಲದೇ ಇದ್ದರೂ ಆನಂದ್ ಅವರನ್ನು ಚಿತ್ರಾ ಅವರು ಹಿರಿಯ ಹುದ್ದೆಗೆ ನೇಮಕ ಮಾಡಿಕೊಂಡಿದ್ದರು. ಜೊತೆಗೆ ಅವರಿಗೆ ಹಲವು ಬಾರಿ ಪದೋನ್ನತಿ ನೀಡಲಾಗಿತ್ತು. ವಿನಾಕಾರಣ ವೇತನ ಹೆಚ್ಚಳ ಮಾಡಲಾಗಿತ್ತು. ಜೊತೆಗೆ ಆನಂದ್ ಉನ್ನತ ಹುದ್ದೆ ವಹಿಸಿಕೊಂಡ ಅವಧಿಯಲ್ಲಿ ಎನ್ಎಸ್ಇದಲ್ಲಿ ಹಲವು ವಂಚನೆಗಳು ನಡೆದಿದ್ದವು.
Chitra Ramkrishna Case : ಚಿತ್ರಾ ಅವರ ಅಕ್ರಮ ಗೊತ್ತಿದ್ದರೂ ಸುಮ್ಮನಿದ್ದ NSE ಮಂಡಳಿ!
ಈ ಕುರಿತು ಸುದೀರ್ಘ ತನಿಖೆ ನಡೆಸಿದ್ದ ಸೆಬಿ, ಇತ್ತೀಚೆಗೆ ಚಿತ್ರಾ, ಆನಂದ್ ಸೇರಿ ಹಲವರನ್ನು ಪ್ರಕರಣದಲ್ಲಿ ದೋಷಿ ಎಂದು ಹೇಳಿತ್ತು. ಅದರ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿತ್ತು. ಪ್ರಕರಣದ ತನಿಖೆ ವೇಳೆ ಹಿಮಾಲಯದಲ್ಲಿರುವ ಯೋಗಿಯ ಆಣತಿಯಂತೆ ಷೇರುಪೇಟೆ ನಡೆಸುತ್ತಿದ್ದ, ಹಲವು ನೇಮಕಾತಿ ಮಾಡಿಕೊಂಡಿದದ ವಿಷಯವನ್ನು ಚಿತ್ರಾ ಒಪ್ಪಿಕೊಂಡಿದ್ದಾರೆ ಎಂದು ಸೆಬಿ ಹೇಳಿತ್ತು. ಆದರೆ ಯೋಗಿ ಯಾವುದೇ ವ್ಯಕ್ತಿಯಲ್ಲ. ಅದೊಂದು ದೈವಿಕ ಶಕ್ತಿ ಎಂದು ಚಿತ್ರಾ ಹೇಳಿದ್ದರೂ ಎಂದೂ ಹೇಳಿತ್ತು. ಆದರೆ ಇದೀಗ ಸ್ವತಃ ಆನಂದ್ ಅವರೇ ಈ ಬಾಬಾ ಎಂದು ಪತ್ತೆಯಾಗಿದೆ.
ಪ್ರಕರಣ ಹಿನ್ನೆಲೆ: 2013-16ರ ಅವಧಿಯಲ್ಲಿ ಎನ್ಎಸ್ಇದ ಸಿಇಒ ಆಗಿದ್ದ ಚಿತ್ರಾ ಕೃಷ್ಣಮೂರ್ತಿ, ಗಂಭೀರ ಆರೋಪವೊಂದು ಕೇಳಿಬಂದ ಬಳಿಕ ದಿಢೀರನೆ ವೈಯಕ್ತಿಕ ಕಾರಣ ನೀಡಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆದರೆ ಅಧಿಕಾರದಲ್ಲಿದ್ದ ಅವಧಿಯಲ್ಲಿ ಅವರು ಭಾರೀ ತೆರಿಗೆ ವಂಚನೆ, ಅಕ್ರಮ ನಡೆಸಿದ್ದಾರೆ. ಅಕ್ರಮ ನೇಮಕಾತಿ ಮಾಡಿದ್ದಾರೆ. ಸಂಸ್ಥೆಯ ರಹಸ್ಯ ಮಾಹಿತಿಯನ್ನು ಮೂರನೇ ವ್ಯಕ್ತಿಗೆ ಸೋರಿಕೆ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ತನಿಖೆ ನಡೆಸಿದ್ದ ಷೇರುಮಾರುಕಟ್ಟೆನಿಯಂತ್ರಣಾ ಸಂಸ್ಥೆಯಾದ ಸೆಬಿ ಇತ್ತೀಚೆಗೆ ತನಿಖಾ ವರದಿಯನ್ನು ಬಿಡುಗಡೆ ಮಾಡಿತ್ತು.
Chitra Ramkrishna Case : ಯಾರೀಕೆ ಚಿತ್ರಾ ರಾಮಕೃಷ್ಣ ಅವರ ಹಿಂದಿದ್ದ ನಿಗೂಢ ಬಾಬಾ ಯಾರು?
ಚಿತ್ರಾ ಅವರು ಸಿಇಒ ಆಗಿದ್ದ ವೇಳೆ ನಿತ್ಯ ಷೇರುಪೇಟೆ ಆರಂಭಕ್ಕೂ ಮುನ್ನವೇ ಅಂದಿನ ವಹಿವಾಟಿನ ಮನ್ಸೂಚನೆ ಮಾಹಿತಿ ಒಳಗೊಂಡಿರುವ ಸರ್ವರ್ಗಳನ್ನು ಅಕ್ರಮವಾಗಿ ಬಳಸಿಕೊಳ್ಳಲು ದೆಹಲಿ ಮೂಲದ ಒಪಿಜಿ ಸೆಕ್ಯುರಿಟೀಸ್ ಲಿ.ಗೆ ಅವಕಾಶ ಕಲ್ಪಿಸಿದ್ದರು. ಈ ಪ್ರಕರಣ 4 ವರ್ಷದ ಹಿಂದೆಯೇ ಬೆಳಕಿಗೆ ಬಂದು ಕಂಪನಿ ವಿರುದ್ಧ ಸಿಬಿಐ ಕೇಸು ದಾಖಲಿಸಿ ತನಿಖೆ ನಡೆಸುತ್ತಿದೆ. ಅದರ ಭಾಗವಾಗಿ ಇದೀಗ ಚಿತ್ರಾ ಅವರ ಮನೆ ಮೇಲೆ ದಾಳಿ ನಡೆಸಿದೆ ಎನ್ನಲಾಗಿದೆ. ಚಿತ್ರಾ ರಾಮಕೃಷ್ಣ, ಎನ್ಎಸ್ಇದ ಮತ್ತೋರ್ವ ಮಾಜಿ ಸಿಇಒ ರವಿ ನಾರಾಯಣ್ ಮತ್ತು ಎನ್ಎಸ್ಇದ ಮಾಜಿ ಗ್ರೂಪ್ ಅಪರೇಟಿಂಗ್ ಆಫೀಸರ್ ಆನಂದ್ ಸುಬ್ರಮಣಿಯನ್ ಅವರು ದೇಶಬಿಟ್ಟು ಪರಾರಿಯಾಗದಂತೆ ತಡೆಯುವ ನಿಟ್ಟಿನಲ್ಲಿ ಮೂವರ ವಿರುದ್ಧವೂ ಸಿಬಿಐ ಲುಕೌಟ್ ನೋಟಿಸ್ ಜಾರಿ ಮಾಡಿದೆ.