ಕೆಟ್ಟ ಸಾಲವೆಲ್ಲಾ ಹೋಯ್ತಪ್ಪ: ಜೇಟ್ಲಿ ನಿಟ್ಟುಸಿರು!
ಬ್ಯಾಂಕಿಂಗ್ ಕ್ಷೇತ್ರದ ಅನುತ್ಪಾದಕ ಆಸ್ತಿ ಪ್ರಮಾಣ ಕಡಿಮೆ! ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮಾಹಿತಿ! ಸಾಲ ಮರುಪಡೆಯುವಿಕೆ ಪ್ರಮಾಣ ಹೆಚ್ಚು! ಬ್ಯಾಂಕ್ ಗಳಿಗೆ ಎನ್ ಪಿಎ ದೊಡ್ಡ ಸವಾಲು ಎಂದ ಜೇಟ್ಲಿ
ನವದೆಹಲಿ(ಸೆ.26): ಬ್ಯಾಂಕಿಂಗ್ ಕ್ಷೇತ್ರದ ಅನುತ್ಪಾದಕ ಆಸ್ತಿ(ಎನ್ಪಿಎ)ಯ ಪ್ರಮಾಣ ಕಡಿಮೆಯಾಗುತ್ತಿದ್ದು, ಸಾಲ ಮರುಪಡೆಯುವಿಕೆ ಹೆಚ್ಚಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಸಾರ್ವಜನಿಕ ವಲಯ(ಪಿಎಸ್ ಯು)ದ ಬ್ಯಾಂಕ್ ಗಳ ವಾರ್ಷಿಕ ಪರಿಶೀಲನಾ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜೇಟ್ಲಿ, ಹಲವು ವರ್ಷಗಳಿಂದ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳಿಗೆ ಎನ್ ಪಿಎ ದೊಡ್ಡ ಸವಾಲಾಗಿದೆ. ಆದರೆ ದಿವಾಳಿತನ ಮತ್ತು ದಿವಾಳಿತನ ಸಂಹಿತೆ (ಐಬಿಸಿ)ಜಾರಿಗೊಳಿಸಿದ ನಂತರ, ಸಾಲ ಬಾಕಿ ಉಳಿಸಿಕೊಂಡಿರುವವರ ಆಸ್ತಿಗಳನ್ನು ಹರಾಜು ಹಾಕುವ ಮೂಲಕ ಸಾಲ ಮರುಪಡೆಯುವ ಪ್ರಮಾಣ ಹೆಚ್ಚಾಗಿದೆ ಎಂದರು.
ಸಾಲ ಮರುಪಡೆಯುವಿಕೆ ಪ್ರಕ್ರಿಯೆ ಉತ್ತಮವಾಗಿದ್ದು, ಬ್ಯಾಂಕುಗಳ ಸಾಲ ನೀಡುವ ಸಾಮರ್ಥ್ಯವು ಹೆಚ್ಚು ಉತ್ತಮವಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಇದೇ ವೇಳೆ ಮಾತನಾಡಿದ ಹಣಕಾಸು ಇಲಾಖೆ ಕಾರ್ಯದರ್ಶಿ ರಾಜೀವ್ ಕುಮಾರ್, ಈ ಹಣಕಾಸು ವರ್ಷದಲ್ಲಿ ಐಬಿಸಿ ಮೂಲಕ 1.8 ಲಕ್ಷ ಕೋಟಿ ರುಪಾಯಿ ಮರುಪಡೆಯುವ ನಿರೀಕ್ಷೆ ಇದೆ ಎಂದು ತಿಳಿಸಿದರು.