ದೀಪಾವಳಿಗೆ ಶೇ.25 ಹೆಚ್ಚು ಚಿನ್ನ ವಹಿವಾಟು?: ಗ್ರಾಹಕರನ್ನು ಆಕರ್ಷಿಸಲು ಭರ್ಜರಿ ಆಫರ್..!
ದೀಪಾವಳಿ ನಿಮಿತ್ತ ಚಿನ್ನಾಭರಣ ಮಾರುಕಟ್ಟೆ ಕಳೆಗಟ್ಟಿದೆ. ಸದ್ಯ ಚಿನ್ನದ ದರ ಕೊಂಚ ಇಳಿಕೆ ಆಗಿರುವುದು ಹಬ್ಬಕ್ಕೆ ಹತ್ತು ದಿನ ಇರುವಂತೆ ಚಿನ್ನಾಭರಣ ಮಳಿಗೆಗಳಲ್ಲಿ ಗ್ರಾಹಕರಿಂದ ತುಂಬಿರುತ್ತಿದೆ.
ಮಯೂರ ಹೆಗಡೆ
ಬೆಂಗಳೂರು(ಅ.16): ಈ ಬಾರಿ ದೀಪಾವಳಿಯಲ್ಲಿ ಕಳೆದೆರಡು ವರ್ಷಕ್ಕಿಂತ ಶೇ.25ರಷ್ಟು ಹೆಚ್ಚು ವಹಿವಾಟು ನಡೆವ ನಿರೀಕ್ಷೆ ಚಿನ್ನಾಭರಣ ವರ್ತಕರಲ್ಲಿದೆ. ಪ್ರತಿಷ್ಠಿತ ಮಳಿಗೆಗಳು ಭಿನ್ನ ಆಫರ್ಗಳ ಮೂಲಕ ಸೆಳೆವ ಯತ್ನದಲ್ಲಿದ್ದರೆ, ಗ್ರಾಹಕರು ಈಗಾಗಲೇ ಬುಕ್ಕಿಂಗ್ ಆರಂಭಿಸಿದ್ದಾರೆ. ವರ್ಷಾರಂಭದಿಂದ ಕೋವಿಡ್ ಇಳಿಕೆಯು ಆಭರಣ ಮಾರುಕಟ್ಟೆ ವಹಿವಾಟು ವೃದ್ಧಿಗೆ ಪ್ಲಸ್ ಪಾಯಿಂಟ್ ಆಗಿದೆ. ತಿಂಗಳ ಆರಂಭದಲ್ಲಿ ನವರಾತ್ರಿ ಕಾರಣಕ್ಕೆ, ಇದೀಗ ದೀಪಾವಳಿ ನಿಮಿತ್ತ ಚಿನ್ನಾಭರಣ ಮಾರುಕಟ್ಟೆ ಕಳೆಗಟ್ಟಿದೆ. ಸದ್ಯ ಚಿನ್ನದ ದರ ಕೊಂಚ ಇಳಿಕೆ ಆಗಿರುವುದು ಹಬ್ಬಕ್ಕೆ ಹತ್ತು ದಿನ ಇರುವಂತೆ ಚಿನ್ನಾಭರಣ ಮಳಿಗೆಗಳಲ್ಲಿ ಗ್ರಾಹಕರಿಂದ ತುಂಬಿರುತ್ತಿದೆ.
ಕಳೆದೆರಡು ತಿಂಗಳಿಗಿಂತ ಶೇ.20ರಷ್ಟು ಹೆಚ್ಚು ಗ್ರಾಹಕರು ಆಭರಣ ಮಳಿಗೆಯಲ್ಲಿ ಖರೀದಿಗೆ ಒಲವು ತೋರಿದ್ದಾರೆ. ಅಲ್ಲದೆ, ಹಿಂದಿನ ವರ್ಷಕ್ಕೆ ಹೋಲಿಸಿದರೆ ಮುಂಗಡ ಬುಕ್ಕಿಂಗ್ ಈ ಬಾರಿ ದುಪ್ಪಟ್ಟಾಗಿದೆ. ಹೀಗಾಗಿ ಒಟ್ಟಾರೆ ಶೇ.25ರಷ್ಟು ವಹಿವಾಟು ಹೆಚ್ಚುವ ಭರವಸೆ ಇದೆ. ಈ ಸಂಗತಿಗಳು ಚಿನ್ನಾಭರಣ ವರ್ತಕ ವಲಯದ ಹರ್ಷಕ್ಕೆ ಕಾರಣವಾಗಿದೆ ಎಂದು ಎಂದು ರಾಜ್ಯ ಆಭರಣ ವರ್ತಕರ ಸಂಘ ತಿಳಿಸಿದೆ.
GOLD SILVER PRICE TODAY: ಚಿನ್ನ, ಬೆಳ್ಳಿ ಖರೀದಿಸ್ಬೇಕಾ..? ಹಾಗಾದ್ರೆ ಇದೇ ಬೆಸ್ಟ್ ಟೈಂ..!
ಸಂಘದ ಯೋಜನೆಯಂತೆ ರಾಜ್ಯಾದ್ಯಂತ ಆಭರಣ ಮಳಿಗೆಗಳಲ್ಲಿ 50 ಸಾವಿರ ಹಾಗೂ ಅದಕ್ಕೂ ಹೆಚ್ಚಿನ ಚಿನ್ನ ಖರೀದಿ ಮಾಡಿದ ಗ್ರಾಹಕರಿಗೆ ಕೂಪನ್ ನೀಡುತ್ತಿದ್ದೇವೆ. ವಿಜೇತರಿಗೆ ಅವರು ಖರೀದಿಸಿದ ಆಭರಣದ ಬೆಲೆ ಅನುಸಾರ ಅರ್ಧ ಕೇಜಿ ಚಿನ್ನ, 1 ಕೇಜಿ ಚಿನ್ನ ಹಾಗೂ ಬೆಳ್ಳಿಯನ್ನು ಉಡುಗೊರೆಯಾಗಿ ನೀಡಲಾಗುವುದು. ವ್ಯಾಪಾರ ಹೆಚ್ಚಿಸಲು ಈ ರೀತಿ ಆಫರ್ ನೀಡಲಾಗಿದೆ ಎಂದು ರಾಜ್ಯ ಆಭರಣ ವರ್ತಕರ ಸಂಘದ ಅಧ್ಯಕ್ಷ ಡಾ. ಬಿ.ರಾಮಾಚಾರಿ ತಿಳಿಸಿದ್ದಾರೆ.
ಹಬ್ಬದಲ್ಲಿ ದರದ ಕತೆಯೇನು?
ನಗರದಲ್ಲಿ ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆ ಎರಡು ಬಾರಿ ಮಾತ್ರ ಏರಿಕೆ ಕಂಡಿದೆ. ಉಳಿದಂತೆ ಸ್ಥಿರತೆ ಹಾಗೂ ಇಳಿಕೆಯ ಹಾದಿಯಲ್ಲೇ ಇದೆ. ಅ.6ರಂದು 10 ಗ್ರಾಂ 22 ಕ್ಯಾರೆಟ್ ಚಿನ್ನಕ್ಕೆ .47,900, 24 ಕ್ಯಾರೆಟ್ ಚಿನ್ನಕ್ಕೆ .52,250 ಇತ್ತು. ಶನಿವಾರ (ಅ.15) 22 ಕ್ಯಾರೆಟ್ ಚಿನ್ನಕ್ಕೆ .46,250, 24 ಕ್ಯಾರೆಟ್ ಚಿನ್ನಕ್ಕೆ .50,450 ಇತ್ತು. ಅಂದರೆ ಸರಾಸರಿ .1500ಕ್ಕಿಂತ ಇಳಿಕೆಯಲ್ಲಿದೆ. ಆದರೆ, ಈಗಿನ ಬೆಲೆ ಸ್ಥಿರತೆ ಹಾಗೂ ಇಳಿಕೆ ಹಬ್ಬದಲ್ಲಿ ಮುಂದುವರಿವ ಖಚಿತತೆ ಇಲ್ಲ. ಸಹಜವಾಗಿ ಹಬ್ಬದಲ್ಲಿ ದರ ಹೆಚ್ಚಿರುತ್ತದೆ ಎಂದು ವ್ಯಾಪಾರಿಗಳು ತಿಳಿಸುತ್ತಾರೆ.
ಎರಡು ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚಿನ ಮೇಕಿಂಗ್ ಆರ್ಡರ್ ಇದೆ. ಎಂದಿನಂತೆ ದೀಪಾವಳಿ ನಡುವೆ ಚಿನ್ನದ ಬೆಲೆ ಏರಿಕೆಯಾಗಲಿದೆ. ಇದೇ ಕಾರಣದಿಂದ ಜನತೆ ಹಬ್ಬದ ಮುನ್ನವೇ ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ. ಎಂದು ಪೂರ್ಣಿಮಾ ಜ್ಯೂವೆಲರಿ ವರ್ಕ್ಶಾಪ್ ಮಾಲೀಕ ಎಂ.ಜಿ.ಚಂದ್ರಶೇಖರ ಹೇಳಿದರು.
ರೈತರಿಗೆ ಕಿಸಾನ್ ಸಮ್ಮಾನ್ ನಿಧಿ ಜೊತೆ ಮತ್ತೊಂದು ಕೊಡುಗೆ ನೀಡಿದ ಕೇಂದ್ರ ಸರ್ಕಾರ!
ಎರಡು ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ.25ರಷ್ಟುವಹಿವಾಟು ಹೆಚ್ಚುವ ಸಾಧ್ಯತೆಯಿದೆ. ವಿಶೇಷ ಆಫರ್ಗಳ ಮೂಲಕ ವ್ಯಾಪಾರದ ಪ್ರಮೋಶನ್ ಮಾಡುತ್ತಿದ್ದೇವೆ. ಆಭರಣದ ಜತೆಗೆ ಸುರಕ್ಷಿತ ನಿಧಿ ಸ್ವರೂಪದಲ್ಲಿ ಜನತೆ ಚಿನ್ನ ಕೊಳ್ಳುತ್ತಿದ್ದಾರೆ ಅಂತ ರಾಜ್ಯ ಆಭರಣ ವರ್ತಕರ ಸಂಘ ಡಾ. ಬಿ.ರಾಮಾಚಾರಿ ತಿಳಿಸಿದ್ದಾರೆ.
ದೀಪಾವಳಿ ಜತೆ ಧನ್ತೇರಸ್ ಆಚರಣೆ ಕೂಡ ಚಿನ್ನದ ವ್ಯಾಪಾರ ಹೆಚ್ಚಲು ಕಾರಣ. ನಮ್ಮ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ನಲ್ಲಿ ‘ಬೆಂಗಳೂರು ಬಂಗಾರ ಶಾಪಿಂಗ್ ಹಬ್ಬದ ಮೂಲಕ ವಿಶೇಷ ಆಫರ್ ನೀಡಿದ್ದೇವೆ ಅಂತ ಸಾಯಿ ಗೋಲ್ಡ್ ಪ್ಯಾಲೇಸ್ ಮಾಲೀಕ ಟಿ.ಎ.ಶರವಣ ಹೇಳಿದ್ದಾರೆ.