ಕಾಲೇಜಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೊರಟ ವಿದ್ಯಾರ್ಥಿನಿ ನಾಪತ್ತೆಯಾಗಿದ್ದಾಳೆ. ಎಲ್ಲಾ ಕಡೆ ಹುಡುಕಿದ್ದಾರೆ. ಹೈಕೋರ್ಟ್ ಸೂಚನೆ ಮೇರೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಆದರೆ ಸುಳಿವೇ ಇರಲಿಲ್ಲ. 7 ತಿಂಗಳ ಬಳಿಕ ಒಟಿಪಿಯಿಂದ ವಿದ್ಯಾರ್ಥಿನಿ ಪತ್ತೆಯಾಗಿದ್ದಾಳೆ. ಏನಿದು ಒಟಿಪಿ ಸ್ಟೋರಿ.

ಬೆಂಗಳೂರು (ಸೆ.11) ದ್ವಿತೀಯ ಪಿಯುಸಿ ಬೆಂಗಳೂರು ವಿದ್ಯಾರ್ಥಿನಿ ಬೆಳಗ್ಗೆ ಕಾಲೇಜಿಗೆ ಹೋಗಿ ಮರಳಿ ಬಂದಿಲ್ಲ. ಮನೆಯವರು ಹುಡುಕಾಟ ತೀವ್ರಗೊಳಿಸಿದ್ದರು. ಪೊಲೀಸರಿಗೆ ದೂರು ನೀಡಿದ್ದರು. ಆದರೆ ಯಾವುದೇ ಸುಳಿವಿಲ್ಲ. ವಿದ್ಯಾರ್ಥಿನಿ ಮೊಬೈಲ್ ಫೋನ್ ತೆಗೆದುಕೊಂಡು ಹೋಗಿಲ್ಲ, ಎಟಿಎಂ ಕೂಡ ಇಲ್ಲ. ಪೋಷಕರು, ಪೊಲೀಸರು ಸೇರಿ ಮುಂಬೈ, ಚೆನ್ನೈ, ದೆಹಲಿ ಸೇರಿದಂತೆ 10ಕ್ಕೂ ಹೆಚ್ಚು ನಗರ, ನಾಲ್ಕಕ್ಕೂ ಹೆಚ್ಚು ರಾಜ್ಯ, ಸಣ್ಣ ಪಟ್ಟಣ, ಗಲ್ಲಿ ಎಲ್ಲಾ ಕಡೆ ಹುಡುಕಿದ್ದಾರೆ. ಆದರೆ ಸುಳಿವೇ ಇಲ್ಲ. ಬರೋಬ್ಬರಿ 7 ತಿಂಗಳ ಬಳಿಕ ಆಧಾರ್ ಕಾರ್ಡ್ ಒಟಿಪಿಯಿಂದ ವಿದ್ಯಾರ್ಥಿನಿ ಪತ್ತೆಯಾದ ಘಟನೆ ನಡೆದಿದೆ.

ಏನಿದು ಮಿಸ್ಸಿಂಗ್ ಸ್ಟೋರಿ

ಬೆಂಗಳೂರಿನ ವಿದ್ಯಾರಣ್ಯಪುರದ 18 ವರ್ಷದ ತನಿಷ್ಕಾ ಗೆಳೆತಿ ಜೊತೆ ಕಾಲೇಜಿಗೆ ಹೋದವಳು ಮರಳಿ ಮನೆಗೆ ಬಂದಿಲ್ಲ. ಅದೇ ಗೆಳೆತಿ ಜೊತೆ ಜನವರಿ 31ರಂದು ಈಕೆ ನಾಪತ್ತೆಯಾಗಿದ್ದಾಳೆ. ಸಂಜೆಯಾಗಿ, ರಾತ್ರಿಯಾದರೂ ಮಗಳು ಬಾರದ ಹಿನ್ನಲೆಯಲ್ಲಿ ಪೋಷಕರು ಹುಡುಕಾಡಿದ್ದಾರೆ, ಪೊಲೀಸರಿಗೆ ದೂರು ನೀಡಿದ್ದಾರೆ. ಹುಡುಕಾಟ ತೀವ್ರಗೊಂಡಿದೆ. ಸುಳಿವು ಸಿಕ್ಕಿಲ್ಲ. ಕಾಲೇಜಿಗೆ ತೆರಳುವಾಗ ಕಾಲೇಜು ಬ್ಯಾಗ್, ಆಧಾರ್ ಕಾರ್ಡ್ ಬಿಟ್ಟರೆ ಬೇರೇನೆ ತೆಗೆದುಕೊಂಡು ಹೋಗಿಲ್ಲ. ಕನಿಷ್ಠ ಮೊಬೈಲ್ ಬಳಸಿದ್ದರೆ ಲೊಕೋಶನ್ ಟ್ರಾಕ್ ಮಾಡಲು ಸಾಧ್ಯವಾಗುತ್ತಿತ್ತು. ಆದರೆ ಈ ರೀತಿಯ ಯಾವು ಸುಳಿವು ಸಿಗಲಿಲ್ಲ.

100 ಕಡೆ ಹುಡುಕಾಟ

ನಾಪತ್ತೆಯಾದ ಕೆಲ ದಿನಗಳ ಬಳಿಕ ಹೊಸ ನಂಬರ್‌ನಿಂದ ಸ್ನೇಹಿತರಿಗೆ ಕರೆಯೊಂದು ಬಂದಿದೆ. ತಾವು ಮಲೆ ಮಹದೇಶ್ವರ ಬೆಟ್ಟದಲ್ಲಿದ್ದೇವೆ ಎಂದಿದ್ದರು. ಈ ಮಾಹಿತಿ ಬಿಟ್ಟರೆ ಇವರ ಬಗ್ಗೆ ಯಾವ ಮಾಹಿತಿಯೂ ಇಲ್ಲ. ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿತ್ತು. 10 ಮಂದಿಯನ್ನೊಳಗೊಂಡ ಪೊಲೀಸ್ ತಂಡ ರಚಿಸಲಾಗಿತ್ತು. ಈ ತಂಡ ಬರೋಬ್ಬರಿ 100 ಕಡೆ ಹುಡುಕಾಡಿದ್ದಾರೆ. ಸಿಗುವ ಸುಳಿವು, ಮಾಹಿತಿ ಆಧರಿಸಿ ಹುಡುಕಾಡಿದ್ದಾರೆ. ಆದರೆ ಯಾವುದೇ ಸುಳಿವಿಲ್ಲ. ಹೀಗಾಗಿ ಪೋಷಕರು ಕರ್ನಾಟಕ ಹೈಕೋರ್ಟ್‌ಗೆ ಹೆಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.

ಮಹದೇಶ್ವರ ಬೆಟ್ಟದಲ್ಲಿ ಯೂಟರ್ನ್

ಕರ್ನಾಟಕ ಹೈಕೋರ್ಟ್ ಸೂಚನೆ ಮೇರೆಗೆ ಪ್ರಕರಣ ಎಪ್ರಿಲ್ ತಿಂಗಳಲ್ಲಿ ಸಿಐಡಿಗೆ ಹಸ್ತಾಂತರಗೊಂಡಿತು.ಸಿಐಡಿ ತನಿಖೆ ಕೈಗೆತ್ತಿಕೊಂಡಿತು. ಇತ್ತ ತನಿಷ್ಕಾ ಹಾಗೂ ಆಕೆ ಗೆಳತಿ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ಬದುಕು ಅಂತ್ಯಗೊಳಿಸಲು ಮುಂದಾಗಿದ್ದರು. ಈ ವೇಳೆ ಇಬ್ಬರು ಯುವಕರು ತಡೆದಿದ್ದರು. ತನಿಷ್ಕಾ ಹಾಗೂ ಆಕೆಯ ಗೆಳತಿಯನ್ನು ಮನ ಒಲಿಸಿದ್ದರು. ಈ ಘಟನೆ ಬಳಿಕ ತನಿಷ್ಕಾ ಹಾಗೂ ಆಕೆಯ ಗೆಳತಿ ಬೇರೇ ಬೇರೆ ದಿಕ್ಕಿನಲ್ಲಿ ಸಾಗಿದ್ದಾರೆ. ಇತ್ತ ತನಿಷ್ಕಾ ಬೆಟ್ಟದಲ್ಲಿ ಭೇಟಿಯಾದ ಯುವಕನ ಜೊತೆಗಿರಲು ನಿರ್ಧರಿಸಿದ್ದಾಳೆ.

ಯುವಕನ ಜೊತೆ ನೆಲೆಸಲು ನಿರ್ಧರಿಸಿದ ತನಿಷ್ಕಾ ಕೆಲ ತಿಂಗಳ ಬಳಿಕ ಸರ್ಕಾರಿ ಆರೋಗ್ಯ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾಳೆ. ತನಿಷ್ಕಾ ತನ್ನ ಆಧಾರ್ ಕಾರ್ಡ್ ಬಳಸಿಕೊಂಡು ಆರೋಗ್ಯ ಯೋಜನೆಗೆ ನೋಂದಣಿ ಮಾಡಿದ್ದಾರೆ. ನೋಂದಣಿಯಲ್ಲಿ ಪತಿ ಹೆಸರು ಹಾಗೂ ಆತನ ಮೊಬೈಲ್ ನಂಬರ್ ದಾಖಲಿಸಿದ್ದಾಳೆ. ಯೋಜನೆ ನೋಂದಣಿಗೆ ಆಧಾರ್ ಕಾರ್ಡ್ ಹಾಗೂ ಒಟಿಪಿ ಕಡ್ಡಾಯವಾಗಿತ್ತು. ಇತ್ತ ತನಿಖೆ ನಡೆಸುತ್ತಿದ್ದ ಸಿಐಡಿ ತಂಡ ತನಿಷ್ಖಾ ಎಲ್ಲಾ ಮಾಹಿತಿಗಳನ್ನು ಪಡೆದು ತಪಾಸಣೆ ನಡೆಸುತ್ತಿತ್ತು. ಇದೇ ವೇಳೆ ತನಿಷ್ಕಾ ಆಧಾರ್ ಕಾರ್ಡ್ ನೋಂದಣಿಯಾಗಿರುವುದು ಪತ್ತೆಯಾಗಿದೆ. ತಕ್ಷಣವೇ ಈ ಮಾಹಿತಿ ಪಡೆದ ಸಿಐಡಿ ಮೊಬೈಲ್ ನಂಬರ್ ಪಡೆದು ಟ್ರೇಸ್ ಮಾಡಿದೆ. ಮೊಬೈಲ್ ನಂಬರ್ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತನಿಷ್ಕಾ ಪತ್ತೆಯಾಗಿದ್ದಾಳೆ.