ರೈಲ್ವೆ ಎಸ್ಕಲೇಟರ್ ಉದ್ಘಾಟಿಸಿದ ಕಾರ್ಮಿಕ ಮಹಿಳೆಯ ಪುತ್ರಿ
ಸಾಮಾನ್ಯವಾಗಿ ದೊಡ್ಡವರಿಂದ ಉದ್ಘಾಟನಾ ಕಾರ್ಯಕ್ರಮಗಳು ನಡೆಯುತ್ತವೆ. ಆದರೆ ಇಲ್ಲಿ ಕಾರ್ಮಿಕ ಮಹಿಳೆಯ ಪುತ್ರಿ ಬೆಂಗಳೂರು ರೈಲ್ವೆ ನಿಲ್ದಾಣದ ಎಸ್ಕಲೇಟರ್ ಉದ್ಘಾಟನೆ ಮಾಡಿದ್ದಾರೆ.
ಬೆಂಗಳೂರು [ನ.11]: ಸಾಮಾನ್ಯವಾಗಿ ಸರ್ಕಾರಿ ಕಾರ್ಯಕ್ರಮಗಳನ್ನು ಜನಪ್ರತಿನಿಧಿಗಳು ಅಥವಾ ಅಧಿಕಾರಿಗಳು ಅಥವಾ ಸೆಲೆಬ್ರಿಟಿಗಳು ಉದ್ಘಾಟಿಸುತ್ತಾರೆ. ಆದರೆ, ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್ಆರ್) ರೈಲು ನಿಲ್ದಾಣದ ನಾಲ್ಕನೇ ಪ್ಲಾಟ್ಫಾರ್ಮ್ನಲ್ಲಿ ಅಳವಡಿಸಿರುವ ಎಸ್ಕಲೇಟರ್ ಉದ್ಘಾಟನೆ ಕಾರ್ಯಕ್ರಮವನ್ನು ವಿಶೇಷ ಅತಿಥಿಯೊಬ್ಬರು ಉದ್ಘಾಟಿಸಿದ್ದಾರೆ.
ಅವರು ಮತ್ಯಾರು ಅಲ್ಲ. ರೈಲು ನಿಲ್ದಾಣದ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕ ಮಹಿಳೆ ಚಾಂದ್ಬೀ ಎಂಬುವವರ 10 ವರ್ಷದಮಗಳು ಬೇಗಂ ರಿಬ್ಬನ್ ಕತ್ತರಿಸಿ ಎಸ್ಕಲೇಟರ್ ಉದ್ಘಾಟಿಸಿದ ವಿಶೇಷ ಅತಿಥಿ..!
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ನೈಋತ್ಯ ರೈಲ್ವೆಯು ಶನಿವಾರ ಸಂಜೆ ಎಸ್ಕಲೇಟರ್ ಮತ್ತು ಹವಾನಿಯಂತ್ರಿತ ಪ್ರಯಾಣಿಕರ ವಿಶ್ರಾಂತಿ ಕೊಠಡಿ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಸಂಸದ ಪಿ.ಸಿ.ಮೋಹನ್ ಅವರು ಈ ಕಾರ್ಯಕ್ರಮ ಉದ್ಘಾಟಿಸಬೇಕಿತ್ತು. ಆದರೆ, ರಾಮಜನ್ಮಭೂಮಿ- ಬಾಬರಿ ಮಸೀದಿ ವಿವಾದದ ಅಂತಿಮ ತೀರ್ಪು ಪ್ರಕಟವಾಗುವ ಹಿನ್ನೆಲೆಯಲ್ಲಿ ಶನಿವಾರ ನಗರದಲ್ಲಿ 144 ಸೆಕ್ಷನ್ ಜಾರಿಯಾಗಿದ್ದರಿಂದ ಅಧಿಕೃತ ಉದ್ಘಾಟನಾ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿತ್ತು.
ಉದ್ಘಾಟನೆಗೆ ಸಕಲ ಸಿದ್ಧತೆ ನಡೆಸಿ ಕಾರ್ಯಕ್ರಮ ಮುಂದೂಡುವುದರಿಂದ ಪ್ರಯಾಣಿಕರಿಗಾಗುವ ತೊಂದರೆ ಮನಗಂಡ ರೈಲ್ವೆ ಅಧಿಕಾರಿಗಳು, ರೈಲು ನಿಲ್ದಾಣದ ಕಾಮಗಾರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಕಾರ್ಮಿಕರ ಮಗಳು ಬೇಗಂನನ್ನು ಕರೆತಂದು ಕಾರ್ಯಕ್ರಮ ಉದ್ಘಾಟಿಸಿ ಎಸ್ಕಲೇಟರ್ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಿ ದರು. ಅಂತೆಯೆ ಪ್ಲಾಟ್ಪಾರ್ಮ್ ಒಂದರಲ್ಲಿ ನವೀಕರಿಸಿರುವ ಹವಾ
ನಿಯಂತ್ರಿತ ಪ್ರಯಾಣಿಕರ ವಿಶ್ರಾಂತಿ ಕೊಠಡಿಯನ್ನು ಇಬ್ಬರು ಹಿರಿಯ ನಾಗರಿಕರು ಉದ್ಘಾಟಿಸಿದರು.