ಕೋಲಾರದ ಸಾರ್ವಜನಿಕ ಆಸ್ವತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟ ವೈದ್ಯಾಧಿಕಾರಿಯ ಕೊಠಡಿಯಲ್ಲಿ ಮಾಟಮಂತ್ರದ ಗೊಂಬೆಗಳು ಪತ್ತೆಯಾಗಿವೆ. ಈ ಘಟನೆ ಆಸ್ವತ್ರೆ ಸಿಬ್ಬಂದಿಗೆ ಆತಂಕ ಮೂಡಿಸಿದೆ. ಹಾಸನದಲ್ಲಿ ಹೃದಯಾಘಾತ ಪ್ರಕರಣಗಳ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದುಅಶೋಕ್‌ ಆರೋಪಿಸಿದ್ದಾರೆ.

ಕೋಲಾರ (ಜು.8): ಹೃದಯಾಘಾತದಿಂದ ಮೃತಪಟ್ಟ ಇಲ್ಲಿನ ಸಾರ್ವಜನಿಕ ಆಸ್ವತ್ರೆಯ ವೈದ್ಯಾಧಿಕಾರಿ ಡಾ.ವಸಂತ್‌ ಕುಮಾರ್‌ ಅವರ ಕೊಠಡಿ ಹಾಗೂ ಅವರ ಲಾಕರ್‌ಗಳಲ್ಲಿ ಮಾಟಮಂತ್ರದ ಗೊಂಬೆಗಳು ಕಂಡು ಬಂದಿದ್ದು, ಆಸ್ವತ್ರೆ ಸಿಬ್ಬಂದಿಗೆ ಆಂತಕ ಉಂಟು ಮಾಡಿದೆ.

ಜೂ.5 ರಂದು ಡಾ.ವಸಂತ್‌ ಮೃತ ಪಟ್ಟಿದ್ದ ಹಿನ್ನೆಲೆಯಲ್ಲಿ ಬೇರೆ ವೈದ್ಯರು ಅಧಿಕಾರ ಸ್ವೀಕರಿಸಲು ಆಗಮಿಸಲಿರುವ ಹಿನ್ನೆಲೆಯಲ್ಲಿ ಶನಿವಾರ ಮಹಿಳಾ ಸಿಬ್ಬಂದಿ ವೈದ್ಯಾಧಿಕಾರಿಯ ಕೊಠಡಿ ಸ್ವಚ್ಛ ಮಾಡುವಾಗ ಬೀರು ಬಾಗಿಲು ತೆರೆದರು. ಆಗ ಅಲ್ಲಿದ್ದ ಒಂದು ಬಾಕ್ಸ್‌ನಲ್ಲಿ ಅಪ್ಪಿಕೊಂಡ ರೀತಿಯ ಮಣ್ಣಿನ ಗೊಂಬೆಗಳು, ಮಾಟ ಮಂತ್ರದ ವಸ್ತುಗಳು ಕಂಡು ಬಂದಿವೆ. ತಕ್ಷಣ ಸಿಬ್ಬಂದಿ ಆಸ್ವತ್ರೆಯಲ್ಲಿದ್ದ ಡಾ.ಶ್ರೀನಿವಾಸ್‌ ಅವರಿಗೆ ಮಾಹಿತಿ ನೀಡಿದ್ದಾರೆ.

‘ಹೃದಯಾಘಾತ’ ಗಂಭೀರವಾಗಿ ಪರಿಗಣಿಸದ ಸರ್ಕಾರ: ಅಶೋಕ್‌

ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಸಂಭವಿಸುತ್ತಿರುವ ಸಾವುಗಳ ಬಗ್ಗೆ ತೀವ್ರ ನೋವುಂಟಾಗಿದೆ. ಆದರೆ ಹಾಸನದಲ್ಲಿ ಪದೇ ಪದೇ ಹೃದಯಾಘಾತದಿಂದ ಸಾವುಗಳು ಸಂಭವಿಸುತ್ತಿದ್ದರೂ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಅಶೋಕ್ ಕಿಡಿಕಾರಿದರು.

ಮುಖ್ಯಮಂತ್ರಿಗಳು ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಇದು ಕೋವಿಡ್ ಲಸಿಕೆಯ ಪರಿಣಾಮವಾಗಿರಬಹುದು ಎಂದು ಹೇಳಿಕೆ ನೀಡಿದ್ದಾರೆ. ಒಬ್ಬ ಜವಾಬ್ದಾರಿಯುತ ಮುಖ್ಯಮಂತ್ರಿಯಿಂದ ಇಂತಹ ಹೇಳಿಕೆ ಬರಬಾರದು. ಇದು ನಗೆಪಾಟಲಿಗೀಡಾಗುವ ವಿಷಯವಾಗಿದೆ ಎಂದರು.

ಈ ಕುರಿತಂತೆ ದೆಹಲಿಯ ಆರೋಗ್ಯ ಇಲಾಖೆ ಮತ್ತು ಜಯದೇವ ಆಸ್ಪತ್ರೆಗಳಿಂದ ವರದಿಗಳು ಬಂದಿವೆ, ಆದರೆ ಅವುಗಳನ್ನು ಮುಚ್ಚಿಹಾಕಲಾಗಿದೆ. ದೇಶಾದ್ಯಂತ ಕೋವಿಡ್ ಲಸಿಕೆ ನೀಡಲಾಗಿದೆ, ಆದರೆ ಹೃದಯಾಘಾತದಿಂದ ಸಾವು ಹಾಸನದಲ್ಲಿಯೇ ಯಾಕೆ ಹೆಚ್ಚು? ಇದು ಪ್ರಶ್ನೆಗೆ ಗುರಿಯಾಗಬೇಕಾದ ವಿಷಯ ಎಂದು ಹೇಳಿದರು.

ಹಾಸನದ ಭಯಾನಕ ಸ್ಥಿತಿಯನ್ನು ಅನೇಕ ಸಚಿವರು ಕಂಡುಕೊಳ್ಳದೆ, ಭೇಟಿ ನೀಡದೆ ಅಲ್ಲಿಂದಲೇ ಹಿಂದಿರುಗಿದ್ದಾರೆ. ಹಿರಿಯ ಸಚಿವರು, ವೈದ್ಯಕೀಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರೆ ನಿಖರವಾದ ಕಾರಣ ಪತ್ತೆಯಾಗಬಹುದು ಎಂದು ಅವರು ಒತ್ತಾಯಿಸಿದರು.

ಸರ್ಕಾರ ಈಗ ಕೋಮಾ ಸ್ಥಿತಿಯಲ್ಲಿ ಇದೆ. ಅಧಿಕಾರ ಹಸ್ತಾಂತರ ಎಂಬ ಲಾಲಸೆಯಲ್ಲಿ ಮುಳುಗಿದೆ. ದೆಹಲಿಗೆ ಎಷ್ಟು ಹಣ ತಂದುಕೊಡಬೇಕು, ಯಾರ ಕೈಯ್ಯಲ್ಲಿ ಎಷ್ಟು ಹಣ ಹೋಗಬೇಕು ಎಂಬ ಪೈಪೋಟಿಯಲ್ಲಿ ಇದೆ. ಇದರ ಪರಿಣಾಮ ಜನರ ಜೀವ ಕಳೆದು ಹೋಗುತ್ತಿದೆ ಎಂದು ಸರ್ಕಾರವನ್ನು ತಿವಿದರು.