ನಗರದ ಪ್ರಮುಖ ಎಂಟು ದೇವಸ್ಥಾನಗಳ ಪ್ರವಾಸಕ್ಕಾಗಿ ಬಿಎಂಟಿಸಿ ವತಿಯಿಂದ ಆರಂಭಿಸಿರುವ ಒಂದು ದಿನದ ಪ್ಯಾಕೇಜ್‌ ‘ದಿವ್ಯ ದರ್ಶನ’ ಪ್ರವಾಸಿ ಬಸ್‌ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಚಾಲನೆ ನೀಡಿದರು.

ಬೆಂಗಳೂರು (ಮೇ.29): ನಗರದ ಪ್ರಮುಖ ಎಂಟು ದೇವಸ್ಥಾನಗಳ ಪ್ರವಾಸಕ್ಕಾಗಿ ಬಿಎಂಟಿಸಿ ವತಿಯಿಂದ ಆರಂಭಿಸಿರುವ ಒಂದು ದಿನದ ಪ್ಯಾಕೇಜ್‌ ‘ದಿವ್ಯ ದರ್ಶನ’ ಪ್ರವಾಸಿ ಬಸ್‌ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಚಾಲನೆ ನೀಡಿದರು. ಬುಧವಾರ ಇಲ್ಲಿನ ಶಾಂತಿ ನಗರದ ಬಸ್‌ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿದ ಅವರು, ಬೆಂಗಳೂರಿನ ಜನರಿಗೆ ಹೊಸದಾಗಿ ಒಂದು ದಿನದ ಪ್ರವಾಸಕ್ಕೆಂದು ಈ ಪ್ಯಾಕೇಜ್‌ ಆರಂಭ ಮಾಡಿದೆ. ಈ ಪ್ಯಾಕೇಜ್‌ನಲ್ಲಿ ಬೆಂಗಳೂರಿನ ಪ್ರಮುಖ 8 ದೇವಾಲಯಗಳ ದರ್ಶನ ಮಾಡಿಸಲಾಗುತ್ತದೆ. ಬೆಂಗಳೂರಿನ ಪ್ರಮುಖ ದೇವಾಲಯಗಳಿಗೆ ಒಂದೇ ದಿನದಲ್ಲಿ ಭೇಟಿ ಮಾಡಬೇಕು ಎಂದುಕೊಂಡವರಿಗೆ ಅನುಕೂಲವಾಗಲಿದೆ ಎಂದರು.

Add Asianetnews Kannada as a Preferred SourcegooglePreferred

ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಆರ್. ರಾಮಚಂದ್ರನ್‌ ಮಾತನಾಡಿ, ಬೆಂಗಳೂರು ದರ್ಶಿನಿ, ಈಶ ಫೌಂಡೇಶನ್‌ಗೆ ತೆರಳುವವರಿಗೆ ಅನುಕೂಲವಾಗುವ ವ್ಯವಸ್ಥೆ ಈಗಾಗಲೇ ಇದೆ. ಇದೀಗ ಬಿಎಂಟಿಸಿ ವತಿಯಿಂದ ಬೆಂಗಳೂರು ನಗರದ ವ್ಯಾಪ್ತಿಯ ಎಂಟು ದೇವಸ್ಥಾನಗಳ ದರ್ಶನ ಪಡೆಯಲು ಸಾಧ್ಯವಾಗುವಂತ ಪ್ಯಾಕೇಜ್‌ ಮಾಡಿದ್ದೇವೆ. ಕನಿಷ್ಠ ದರದಲ್ಲಿ ಎಸಿ ಬಸ್‌ನಲ್ಲಿ ದೇವಸ್ಥಾನ ದರ್ಶನ ಪಡೆಯಲು ಇದರಿಂದ ಸಾಧ್ಯವಾಗಲಿದೆ ಎಂದರು. ಮುಂದಿನ ದಿನಗಳಲ್ಲಿ ನಿಸರ್ಗ, ವಾಸ್ತುಶಿಲ್ಪ ಥೀಮ್‌ ಅಡಿ ಈ ರೀತಿಯ ಪ್ಯಾಕೇಜ್‌ ಮಾಡುವ ಉದ್ದೇಶವಿದೆ. ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ. ನಂದಿಬೆಟ್ಟ ಸೇರಿ ಇತರೆಡೆ ವಿಶೇಷ ಬಸ್‌ ಕಲ್ಪಿಸುವಂತೆ ಬೇಡಿಕೆ ಇದೆ. ಪ್ರಯಾಣಿಕರ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಈ ಪ್ಯಾಕೇಜ್‌ ಒಳಗೊಂಡಿಲ್ಲ ಎಂದು ತಿಳಿಸಿದರು.

ಯಾವ್ಯಾವ ದೇವಸ್ಥಾನ
ಗಾಳಿ ಆಂಜನೇಯ ಸ್ವಾಮೀ ದೇವಸ್ಥಾನ
ರಾಜರಾಜೇಶ್ವರಿ ದೇವಸ್ಥಾನ
ಶೃಂಗಗಿರಿ ಶ್ರೀ ಷಣ್ಮುಖ ದೇವಸ್ಥಾನ
ದೇವಿ ಕರುಮಾರಿ ಅಮ್ಮನವರ ದೇವಸ್ಥಾನ
ಇಸ್ಕಾನ್ ದೇವಸ್ಥಾನ (ವಸಂತಪುರ) ವೈಕುಂಠ
ಬನಶಂಕರಿ ದೇವಸ್ಥಾನ
ಓಂಕಾರ ಹಿಲ್ಸ್
ಆರ್ಟ್‌ ಆಫ್‌ ಲಿವಿಂಗ್‌

ಒಂದು ದಿನದ ‘ದಿವ್ಯ ದರ್ಶನ’: ‘ದಿವ್ಯ ದರ್ಶನ’ ಬಸ್‌ಗೆ ವಯಸ್ಕರಿಗೆ ₹ 450 ಹಾಗೂ ಮಕ್ಕಳಿಗೆ ₹ 350 ದರ ನಿಗದಿಸಲಾಗಿದೆ. ಈ ಬಸ್ಸುಗಳು ಕೆಂಪೇಗೌಡ ಬಸ್‌ ನಿಲ್ದಾಣ (ಮೆಜೆಸ್ಟಿಕ್‌ ಬಿಎಂಟಿಸಿ) ಬೆಳಿಗ್ಗೆ 8.30 ಕ್ಕೆ ಆರಂಭ ಆಗಲಿದ್ದು, ಕೆಂಪೇಗೌಡ ಬಸ್‌ ನಿಲ್ದಾಣ (ಮೆಜೆಸ್ಟಿಕ್‌ ಬಿಎಂಟಿಸಿ) ಸಂಜೆ 6 ಗಂಟೆಗೆ ವಾಪಸ್‌ ಬರಲಿದೆ. ಮೇ 31 ರಂದು ಮೊದಲ ಟ್ರಿಪ್‌ ಆರಂಭವಾಗಲಿದೆ. ಪ್ರತಿ ಶನಿವಾರ, ಭಾನುವಾರ ಹಾಗೂ ಸಾರ್ವತ್ರಿಕ ರಜೆ ದಿನಗಳಂದು ಮಾತ್ರ ಈ ಪ್ಯಾಕೇಜ್‌ ಸಿಗಲಿದೆ. ಪ್ರಯಾಣಿಕರು ಮುಂಗಡ ಆಸನಗಳನ್ನು ಕೆಎಸ್‌ಆರ್‌ಟಿಸಿ ವೆಬ್‌ಸೈಟ್‌ ನಲ್ಲಿ ಕಾಯ್ದಿರಿಸಿಕೊಳ್ಳಬಹುದು. ಅಥವಾ ಬಿಎಂಟಿಸಿ ಕೆಂಪೇಗೌಡ ಬಸ್ ನಿಲ್ದಾಣದ ಸಹಾಯವಾಣಿ 080 22483777, 7760991170 ಸಂಪರ್ಕಿಸಿ ಟಿಕೆಟ್‌ ಕಾಯ್ದಿರಿಸಬಹುದು.