ವಿಧಾನಸಭಾ ಚುನಾವಣೆ ಪ್ರಚಾರದ ಭರಾಟೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಸಂಬಂಧ 4.12 ಲಕ್ಷ ಪ್ರಕರಣಗಳು ದಾಖಲಾಗಿದ್ದು, ಸುಮಾರು .22.89 ಕೋಟಿ ದಂಡವನ್ನು ಸಂಚಾರ ಪೊಲೀಸರು ವಿಧಿಸಿದ್ದಾರೆ.

ಬೆಂಗಳೂರು: ವಿಧಾನಸಭಾ ಚುನಾವಣೆ ಪ್ರಚಾರದ ಭರಾಟೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಸಂಬಂಧ 4.12 ಲಕ್ಷ ಪ್ರಕರಣಗಳು ದಾಖಲಾಗಿದ್ದು, ಸುಮಾರು .22.89 ಕೋಟಿ ದಂಡವನ್ನು ಸಂಚಾರ ಪೊಲೀಸರು ವಿಧಿಸಿದ್ದಾರೆ. ನಗರ ವ್ಯಾಪ್ತಿ ಚುನಾವಣಾ ಪ್ರಚಾರದ ವೇಳೆ ಮೆರವಣಿಗೆ, ಬೈಕ್‌ ಜಾಥಾ, ಅತಿವೇಗದ ಚಾಲನೆ, ಸಿಗ್ನಲ್‌ ಜಂಪ್‌ ಹಾಗೂ ರೋಡ್‌ ಶೋ ಸೇರಿದಂತೆ ಕಾರ್ಯಕರ್ತರು ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದು, ಪ್ರಮುಖ ಜಂಕ್ಷನ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಆಧರಿಸಿ ನಿಯಮ ಉಲ್ಲಂಘಿಸಿದವರಿಗೆ ಪೊಲೀಸರು ದಂಡ ಪ್ರಯೋಗಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಳೆದ 25 ದಿನಗಳು ಅಂದರೆ ಏ.15ರಿಂದ ಮೇ 10ರವರೆಗೆ ಸಂಚಾರ ನಿಯಮ ಉಲ್ಲಂಘನೆ ಸಂಬಂಧ 4.12 ಲಕ್ಷ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ಸುಮಾರು .22.89 ಕೋಟಿ ದಂಡ ವಿಧಿಸಲಾಗಿದೆ. ವಾಹನಗಳ ನೋಂದಣಿ ಸಂಖ್ಯೆ ಆಧರಿಸಿ ಮಾಲಿಕರಿಗೆ ಪೊಲೀಸರು ನೋಟಿಸ್‌ ಜಾರಿಗೊಳಿಸಲು ಮುಂದಾಗಿದ್ದಾರೆ. ಚುನಾವಣೆ ಸಮಯದಲ್ಲಿ ಬಹುತೇಕ ಪ್ರಕರಣಗಳು ರಾಜಕೀಯ ಪಕ್ಷಗಳ ಕಾರ್ಯಕರ್ತರೇ ತಪ್ಪು ಮಾಡಿರುವುದು ಗೊತ್ತಾಗಿದೆ ಎಂದು ಮೂಲಗಳು ಹೇಳಿವೆ.

ಕಾಂಗ್ರೆಸ್‌,ಜೆಡಿಎಸ್‌ ಕಾರ‍್ಯಕರ್ತರ ಮಧ್ಯೆ ಬೆಟ್ಟಿಂಗ್‌

ನಗರದ ಪ್ರಮುಖ 50 ಜಂಕ್ಷನ್‌ಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳ ಮೇಲೆ ಕಣ್ಣಿಡಲು ಸಂಚಾರ ನಿರ್ವಹಣಾ ವ್ಯವಸ್ಥೆಯಡಿ ಅತ್ಯಾಧುನಿಕ ದರ್ಜೆಯ 250 ಕೃತ್ತಕ ಬುದ್ಧಿಮತ್ತೆಯ ಕ್ಯಾಮೆರಾಗಳನ್ನು ಪೊಲೀಸರು ಅಳವಡಿಸಿದ್ದಾರೆ. ಈ ಕ್ಯಾಮೆರಾಗಳ ದಿನದ 24 ತಾಸುಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳ ದೃಶ್ಯ ಆಧರಿಸಿ ಜನರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ನಿಯಮ ಉಲ್ಲಂಘಿಸುವವರ ಪೋಟೋ ಕ್ಲಿಕ್ಕಿಸಿ ಸರ್ವರ್‌ನಲ್ಲಿ ಸಂಗ್ರಹಿಸುತ್ತಿವೆ. ವಾಹನ ನೊಂದಣಿ ಸಂಖ್ಯೆ ಆಧರಿಸಿ ಐಟಿಎಂಎಸ್‌ ವ್ಯವಸ್ಥೆ ಮೂಲಕ ಮಾಲೀಕರಿಗೆ ದಂಡದ ಸಂದೇಶ ಹೋಗುತ್ತಿದೆ.

ಚುನಾವಣಾ ಪ್ರಚಾರದ ಉಮೇದಿನಲ್ಲಿ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಸೇರಿದಂತೆ ಎಲ್ಲ ಪಕ್ಷಗಳ ಕಾರ್ಯಕರ್ತರು ಸಂಚಾರ ನಿಯಮಗಳಿಗೆ ಕ್ಯಾರೇ ಎನ್ನಲಿಲ್ಲ. ಚುನಾವಣಾ ಬಂದೋಬಸ್ತ್ ಹಾಗೂ ಗಣ್ಯರ ಸಂಚಾರ ಮೇಲೆ ಬಹುತೇಕ ಪೊಲೀಸರು ನಿರತರಾಗಿದ್ದರು. ಆದರೆ ಕ್ಯಾಮೆರಾಗಳು ಸಂಚಾರ ಉಲ್ಲಂಘಿಸಿದವರಿಗೆ ದಂಡ ಪ್ರಯೋಗಿಸಿವೆ ಎಂದು ತಿಳಿದು ಬಂದಿದೆ.