ದರೋಡೆಗೆ ಇಳಿದಿದೆ ಲಗ್ನ ಪತ್ರಿಕೆ ಗ್ಯಾಂಗ್, ಮದುವೆ ಆಹ್ವಾನ ಕೊಡೋ ನೆಪದಲ್ಲಿ ಮನಗೆ ನುಗ್ಗಿ ಕಳ್ಳತನ, ಎಚ್ಚರ ಬೆಂಗಳೂರಿನ ಹೊರ ವಲಯದಲ್ಲಿ ಇದೀಗ ಲಗ್ನ ಪತ್ರಿಕೆ ಮೂಲಕ ದರೋಡೆ ಪ್ರಕರಣ ಬೆಳಕಿಗೆ ಬಂದಿದೆ, ಎಚ್ಚರ.
ಆನೇಕಲ್ (ನ.05) ನಿಮ್ಮ ಆತ್ಮೀಯರಂತೆ ವರ್ತಿಸುತ್ತಾರೆ, ದೂರದ ಸಂಬಂಧಿ, ಹಳೇ ಪರಿಚಯ, ಹೀಗೆ ಒಂದಲ್ಲಾ ಒಂದು ಕಾರಣ ನೀಡಿ ಲಗ್ನ ಪತ್ರಿಕೆ ಗ್ಯಾಂಗ್ ನಿಮ್ಮ ಮನೆಗೆ ಬರಲಿದೆ. ದಯವಿಟ್ಟು ಮದುವೆಗೆ ಬರಬೇಕು, ಆಶೀರ್ವಾದವೇ ಉಡುಗೊರೆ, ಬಂದು ನವ ಜೋಡಿಗಳನ್ನು ಹರಸಬೇಕು ಎಂದು ನಯವಿನಯವಾಗಿ ನಿಮ್ಮನ್ನು ಆಮಂತ್ರಿಸುತ್ತಾರೆ. ನೀವು ಒಂದು ಕ್ಷಣ ಕಕ್ಕಾಬಿಕ್ಕಿಯಾಗುತ್ತೀರಿ. ಗುರುತು ಸಿಗುತ್ತಿಲ್ಲ, ನಾವೆ ಮರೆತಿದ್ದೇವೆ ಎಂದುಕೊಳ್ಳುತ್ತಿರುವಾಗಲೇ ಈ ಗ್ಯಾಂಗ್ ನಿಮ್ಮ ಮೇಲೆ ದಾಳಿ ಮಾಡಿ ಮನೆಯಿಂದ ಚಿನ್ನಾಭರಣ, ನಗದು ಕಳುವು ಮಾಡುತ್ತೆ ಎಚ್ಚರ. ಇದೀಗ ಆನೇಕಲ್ನಲ್ಲಿ ಈ ಲಗ್ನ ಪತ್ರಿಕೆ ದರೋಡೆ ಗ್ಯಾಂಗ್ ಪ್ರಕರಣ ಬೆಳಕಿಗೆ ಬಂದಿದೆ.
ಮದುವೆ ಆಮಂತ್ರ ಪತ್ರಿಕೆ ನೀಡೋ ನೆಪದಲ್ಲಿ ಮನೆ ನುಗ್ಗಿ ದರೋಡೆ
ಪರಿಚಯ ಇಲ್ಲದವರು ಮದುವೆ ಆಮಂತ್ರಣ ಪತ್ರಿಕೆ ಕೊಡಲು ಬಂದರೆ ಎಚ್ಚರ. ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ನೆರಳೂರಿನಲ್ಲಿ ಲಗ್ನ ಪತ್ರಿಕೆ ಗ್ಯಾಂಗ್ ಪ್ರಕರಣ ಬೆಳಕಿಗೆ ಬಂದಿದೆ. ನೆರಳೂರು ನಿವಾಸಿ ರವಿಕುಮಾರ್, ನಾಗವೇಣಿ ದಂಪತಿ ಮನೆಯಲ್ಲಿ ಕಳ್ಳರು ಹೊಸ ತಂತ್ರದ ಮೂಲಕ ದರೋಡೆ ಮಾಡಿದ್ದಾರೆ. ಒಬ್ಬಂಟಿ ಮಹಿಳೆಯರು, ಮನೆಯಲ್ಲಿ ಪತಿ ಕೆಲಸಕ್ಕೆ ಹೋಗಿರುವ ವೇಳೆ, ಮನೆಯಲ್ಲಿ ಮಹಿಳೆಯರೇ ಇರುವಾಗ ಈ ಗ್ಯಾಂಗ್ ಮದುವೆ ಆಮಂತ್ರಣ ಪತ್ರಿಕೆ ಹಿಡಿದು ಪ್ರತ್ಯಕ್ಷವಾಗುತ್ತೆ. ಹೀಗೆ ರವಿಕುಮಾರ್ ಕೆಲಸಕ್ಕೆ ಹೋಗಿದ್ದ ವೇಳೆ ಮದುವೆ ಆಮಂತ್ರಣ ಕೊಟ್ಟು ನಾಗವೇಣಿಯನ್ನು ಕಟ್ಟಿ ಹಾಕಿ ಕಳ್ಳತನ ಮಾಡಿದೆ.
ರವಿಕುಮಾರ್ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ಕೆಲಸಕ್ಕೆ ಹೋಗಿದ್ರು. ಇತ್ತ ಮನೆಗೆ ಬಂದ ಈ ಗ್ಯಾಂಗ್ ಮದುವೆ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನ ನೀಡಿದ್ದಾರೆ. ಇನ್ವಿಟೇಶನ್ ಕಾರ್ಡ್ ಹಿಡಿದು ಮನೆಗೆ ಮಹಿಳೆಯೊಬ್ಬರು ಎಂಟ್ರಿಕೊಟ್ಟಿದ್ದಾರೆ. ಮದುವೆ ಆಮಂತ್ರಣ ನೀಡುತ್ತಾ, ಕುಡಿಯಲು ನೀರು ಕೊಡಿ ಎಂದು ಮಹಿಳೆ ಕೇಳಿದ್ದರೆ. ನೀರು ತರಲು ನಾಗವೇಣಿ ಮನೆಯ ಒಳಗೆ ಹೋಗಿದ್ದಾರೆ. ಇದೇ ವೇಳೆ ಈ ಗ್ಯಾಂಗ್ನ ಪುರುಷ ಸದಸ್ಯರು ಮನೆಯೊಳಗೆ ನುಗ್ಗಿದ್ದಾರೆ.
ಕೈಕಾಲು ಕಟ್ಟಿ ಹಾಕಿ ದರೋಡೆ
ಮನೆಯೊಳಗ ಎಂಟ್ರಿಕೊಟ್ಟ ಪುರುಷ ನಾಗವೇಣಿಯನ್ನು ರೋಮಿನೊಳಗೆ ಕೈಕಾಲು ಕಟ್ಟಿ ಹಾಕಿ ಕೂಡಿ ಹಾಕಿದ್ದರೆ. ಬಳಿಕ ಚಾಕು ಕತ್ತಿಗೆ ಇಟ್ಟು ಬೀರು, ಲಾಕರ್ ಕೀ ನೀಡಲು ಸೂಚಿಸಿದ್ದಾರೆ. ಕೀ ಪಡೆದು200 ಗ್ರಾಂ ಚಿನ್ನಾಭರಣ, ನಗದು ಹಣ ದೋಚಿದ್ದಾರೆ.ಬಳಿಕ ನಾಗವೇಣಿಯನ್ನು ರೂಮಿನಲ್ಲಿ ಕೂಡಿಟ್ಟು, ಹೊರಗಿನಿಂದ ಬಾಗಿಲು ಹಾಕಿ ಗ್ಯಾಂಗ್ ಪರಾರಿಯಾಗಿದೆ.
ನಾಗವೇಣಿ ಫೋನ್ ಮೂಲಕ ಸ್ನೇಹಿತೆಗೆ ಕರೆ ಮಾಡಿ ತಿಳಿದ್ದಾರೆ. ಪಕ್ಕದ ಸ್ನೇಹಿತರು ಓಡೋಡಿ ಬಂದು ಬಾಗಿಲು ತೆರೆದಾಗ ನಾಗವೇಣಿ ಮನೆಯೊಳಗೆ ಲಾಕ್ ಆಗಿದ್ದಾರೆ. ಇತ್ತ ಗ್ಯಾಂಗ್ ಚಿನ್ನಾಭರಣ ಕದ್ದು ಪರಾರಿಯಾಗಿದೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಅಡಿಷನಲ್ ಎಸ್ಪಿ ವೆಂಕಟೇಶ್ ಪ್ರಸನ್ನ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
