ಮುಧೋಳ ರೈತರ ಕಿಚ್ಚಿಗೆ ಹೊತ್ತಿ ಉರಿದ ಕಬ್ಬು ತುಂಬಿದ ಟ್ರಾಕ್ಟರ್, 20ಕ್ಕೂ ಹೆಚ್ಚು ವಾಹನ ಭಸ್ಮ, ಸಮೀರವಾಡಿ ಕಬ್ಬು ಕಾರ್ಖಾನೆಯತ್ತ ನೂರಾರು ರೈತರು ನುಗ್ಗಿದ್ದಾರೆ. ಇತ್ತ ಟ್ರಾಕ್ಟರ್ ಹೊತ್ತಿ ಉರಿದಿದೆ.
ಬಾಗಲಕೋಟೆ (ನ.13) ರಾಜ್ಯದಲ್ಲ ಮತ್ತೆ ರೈತ ಹೋರಾಟದ ತೀವ್ರತೆ ಹೆಚ್ಚಾಗುತ್ತಿದೆ. ಕಬ್ಬು ಬೆಳೆಗಾರರು ನಡೆಸುತ್ತಿದ್ದ ಹೋರಾಟ ಒಂದು ಹಂತಕ್ಕೆ ಶಾಂತವಾಗಿತ್ತು. ಆದರೆ ಮುಧೋಳದಲ್ಲಿ ಕಬ್ಬು ಬೆಳೆಗಾರರು ಹೋರಾಟದ ಕಿಚ್ಚಿಗೆ ಟ್ರಾಕ್ಟರ್ ಭಸ್ಮವಾಗಿದೆ. ಕಬ್ಬು ತುಂಬಿ ಕಾರ್ಖಾನೆಗೆ ಹೊರಟ್ಟಿದ್ದ ಟ್ರಾಕ್ಟರ್ ನಿಲ್ಲಿಸಿದ ರೈತರು ಬೆಂಕಿ ಇಟ್ಟಿದ್ದಾರೆ. ಇಡೀ ಕಬ್ಬಿನ ಜೊತೆ ಟ್ರಾಕ್ಟರ್ ಬೆಂಕಿಯಲ್ಲಿ ಭಸ್ಮವಾಗಿದೆ. ಇದೀಗ ನೂರೂರು ರೈತರು ಇದೀಗ ಸಮೀರವಾಡಿ ಕಾರ್ಖಾನೆಯತ್ತ ನುಗ್ಗಿದ್ದಾರೆ.
3,300 ರೂಪಾಯಿ ನೀಡಲು ರೈತರ ಪಟ್ಟು
ಮುಧೋಳದಲ್ಲಿ ರೈತ ಪ್ರತಿಭಟನೆ ತೀವ್ರಗೊಂಡಿದೆ. ಸಮೀರವಾಡಿ ಸಕ್ಕರೆ ಕಾರ್ಖಾನೆಗೆ ಹೊರಟ ರೈತರು, ದಾರಿ ಮಧ್ಯೆ ಕಾರ್ಖಾನೆಯತ್ತ ಹೊರಟಿದ್ದ ಕಬ್ಬು ಟ್ರಾಕ್ಟರ್ ಪಲ್ಟಿ ಮಾಡಿ ಬೆಂಕಿ ಇಟ್ಟಿದ್ದರೆ. ಟ್ರ್ಯಾಕ್ಟರನಲ್ಲಿದ್ದ ಕಬ್ಬಿಗೆ ಬೆಂಕಿ ಹಚ್ಚಿ ರೈತರು ಆಕ್ರೋಶ ಹೊರಹಾಕಿದ್ದಾರೆ.ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪೂರ ಹೊರವಲಯದಲ್ಲಿ ಘಟನೆ ನಡೆದಿದೆ. ಕಬ್ಬಿಗೆ 3,300 ರೂಪಾಯಿ ಬೆಲೆ ನೀಡುವಂತೆ ಪಟ್ಟು ಹಿಡಿದಿರುವ ರೈತರು ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ಇತ್ತ 3,250 ರೂಪಾಯಿ ನೀಡುವುದಾಗಿ ಸರ್ಕಾರ ಒಪ್ಪಿಕೊಂಡಿದೆ. ಆದರೆ ರೈತರ ಪಟ್ಟು ಸಡಿಸಿಲ್ಲ.
ಸಮೀರವಾಡಿ ಕಾರ್ಖಾನೆ ವಿರುದ್ಧ ರೈತರು ಆಕ್ರೋಶ ಹೊರಹಾಕುತ್ತಿದ್ದಾರೆ. ರೈತರಿಗೆ ಬಾಕಿ ಸೇರಿ ಪ್ರಸಕ್ತ ಸಾಲಿನ ಕಬ್ಬಿನ ದರ ವಿಚಾರವಾಗಿ ರೈತರ ಆಕ್ರೋಶಕ್ಕೆ ಬಾಗಲಕೋಟೆ ಇದೀಗ ರಣಾಂಗಣವಾಗಿದೆ.
ಮುಧೋಳದಲ್ಲಿ ಭಾರಿ ಪ್ರತಿಭಟನೆ
ಪ್ರತಿ ಟನ್ ಕಬ್ಬಿಗೆ 3,300 ರೂಪಾಯಿ ನೀಡುವಂತೆ ಆಗ್ರಹಿಸಿ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಇಂದು ಟ್ರಾಕ್ಟರ್ ರ್ಯಾಲಿ ಮಾಡಿ ಆಕ್ರೋಶ ಹೊರಹಾಕಿದ್ದರು. ಆದರೆ ಗಡುವು ಮೀರುತ್ತಿದ್ದಂತೆ ರೈತರ ಸಹನೆ ಕಟ್ಟೆ ಒಡೆದಿದೆ. ಕಳೆದ ಹಲವು ದಿನಗಳಿಂದ ಸರ್ಕಾರದ ವಿರುದ್ದ ಸತತ ಪ್ರತಿಭಟನೆ ಮಾಡುತ್ತಿದ್ದರೂ ಬೆಲೆ ನೀಡಲು ಹಿಂದೇಟು ಹಾಕುತ್ತಿದೆ. ಹೀಗಾಗಿ ಕಾರ್ಖಾನೆಗೆ ಮುತ್ತಿಗೆ ಹಾಕಲು ರೈತರು ಸಮೀರವಾಡಿಯತ್ತ ಮುನ್ನುಗ್ಗಿದ್ದಾರೆ.
ಇದಕ್ಕೂ ಮೊದಲು ಮುಧೋಳ ನಗರದಲ್ಲಿ ಟ್ರ್ಯಾಕ್ಟರ್ ಹಾಗೂ ಎತ್ತಿನ ಬಂಡಿ ರ್ಯಾಲಿ ನಡೆಸಿದ್ದರು. ಸಂಗೊಳ್ಳಿ ರಾಯಣ್ಣ ವೃತ್ತದಿಂದ ಆರಂಭವಾದ ಟ್ರ್ಯಾಕ್ಟರ್ ಹಾಗೂ ಬಂಡಿ ರ್ಯಾಲಿ ನಡೆದಿತ್ತು. ಈ ರ್ಯಾಲಿಯಲ್ಲಿ ಆಟೋ ಚಾಲಕರು ಪಾಲ್ಗೊಂಡಿದ್ದರು. ಟ್ರ್ಯಾಕ್ಟರ್ ಜೊತೆ ರೈತರು ಸಾಗಿದ್ದಾರೆ.
