ರೈತ ಪ್ರತಿಭಟನೆಯಲ್ಲಿ ಕಲ್ಲು ತೂರಾಟ, ಅಡಿಷನಲ್ ಎಸ್‌ಪಿಗೆ ಗಂಭೀರ ಗಾಯ, ನಿಷೇಧಾಜ್ಞೆ ಜಾರಿ, ರೈತರ ಪ್ರತಿಭಟೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, 50ಕ್ಕೂ ಹೆಚ್ಚು ಟ್ರಾಕ್ಟರ್ ಬೆಂಕಿಗೆ ಆಹುತಿಯಾಗಿದೆ. ಇತ್ತ ಪೊಲೀಸ್ ಅಧಿಕಾರಿಯನ್ನು ಆಸ್ಪತ್ರೆ ದಾಖಲಿಸಲಾಗಿದೆ.

ಬಾಗಲಕೋಟೆ (ನ.13) ಕರ್ನಾಟಕದ ರೈತ ಪ್ರತಿಭಟನೆ ಉಗ್ರ ರೂಪ ಇಂದು ಪ್ರತ್ಯಕ್ಷವಾಗಿದೆ. ಬೆಳಗಾವಿ ವಿಜಯಪುರದಲ್ಲಿ ರೈತರ ಪ್ರತಿಭಟನೆ ಶಾಂತವಾಗಿದ್ದರೆ, ಬಾಗಲಕೋಟೆಯಲ್ಲಿ ಪರಿಸ್ಥಿತಿ ಕೈಮೀರಿದೆ. 3,300 ರೂಪಾಯಿ ಬೆಲೆ ನೀಡುವಂತೆ ಪಟ್ಟು ಹಿಡಿದ ರೈತರು ನಡೆಸುತ್ತಿದ್ದ ಹೋರಾಟ ಉಗ್ರ ಸ್ವರೂಪ ಪಡೆದುಕೊಂಡಿದೆ. ಸೈದಾಪುರ ಸಕ್ಕರೆ ಕಾರ್ಖಾನೆ ಆವರಣದಲ್ಲಿದ್ದ 50ಕ್ಕೂ ಹೆಚ್ಚು ಕಬ್ಬು ತುಂಬಿದ ಟ್ರಾಕ್ಟರ್‌ಗೆ ಬೆಂಕಿ ಹಚ್ಚಿದ್ದಾರೆ. ಕೋಟ್ಯಾಂತರ ರೂಪಾಯಿ ಕಬ್ಬು ನಾಶಗೊಂಡಿದೆ. ಪ್ರತಿಭಟನೆ ಹತ್ತಿಕ್ಕಲು ಪೊಲೀಸರು ಕಠಿಣ ಕ್ರಮಕೈಗೊಳ್ಳುತ್ತಿದ್ದಂತೆ ಕಲ್ಲು ತೂರಾಟ ನಡೆದಿದೆ. ಈವೇಳೆ ಬಾಗಲಕೋಟೆ ಎಎಸ್‌ಪಿ ಮಹಾಂತೇಶ್ವರ ಜಿದ್ದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

Add Asianetnews Kannada as a Preferred SourcegooglePreferred

ಬಾಗಲಕೋಟೆ ಖಾಸಗಿ ಆಸ್ಪತ್ರೆ ಎಎಸ್‌ಪಿ ದಾಖಲು

ಸೈದಾಪುರ ಗೋದಾವರಿ ಸಕ್ಕರೆ ಕಾರ್ಖಾನೆಯಲ್ಲಿ ಬೆಂಕಿ ಅವಘಡ ಬೆನ್ನಲ್ಲೇ ಪರಿಸ್ಥಿತಿ ನಿಯಂತ್ರಿಸಲು ಮುಂದಾದ ಪೊಲೀಸರು ಪ್ರತಿಭಟನಕಾರರನ್ನು ಚದುರಿಸಲು ಮುಂದಾಗಿದ್ದರು. ಈ ವೇಳೆ ಕಲ್ಲು ತೂರಾಟ ನಡೆದಿದೆ. ದೊಡ್ಡ ಗಾತ್ರದ ಕಲ್ಲೊಂದು ಅಡಿಷನಲ್ ಎಸ್‌ಪಿ ಮಹಾಂತೇಶ್ವರ ಜಿದ್ದಿ ಕಾಲಿ ಬಿದ್ದಿದೆ. ತೀವ್ರವಾಗಿ ಗಾಯಗೊಂಡ ಮಹಾಂತೇಶ್ವರ ನೋವಿನಿಂದ ನರಳಾಡಿದ್ದಾರೆ. ತಕ್ಷಣವೇ ಮಹಾಂತೇಶ್ವರ ಜಿದ್ದಿ ಅವರನ್ನು ಬಾಗಲಕೋಟೆ ಖಾಸಗಿ ಆಸ್ಪತ್ಪೆಗೆ ದಾಖಲಿಸಲಾಗಿದೆ. ಕಲ್ಲು ತೂರಾಟದಲ್ಲಿ ಪೊಲೀಸ್ ಅಧಿಕಾರಿ ಕಾಲಿಗೆ ಬಲವಾದ ಗಾಯವಾಗಿದೆ.

ಮೂರು ದಿನಗಳ‌ ಕಾಲ ನಿಷೇಧಾಜ್ಞೆ ಜಾರಿ

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಸೈದಾಪುರ ಗೋದಾವರಿ ಸಕ್ಕರೆ ಕಾರ್ಖಾನೆ ಆವರಣ ರಣಾಂಗಣವಾಗಿದೆ. ರೈತರ ಹೋರಾಟದ ಕಿಚ್ಚಿ ಎಲ್ಲವೂ ಭಸ್ಮವಾಗಿದೆ. 50ಕ್ಕೂ ಹೆಚ್ಚು ಕಬ್ಬು ತುಂಬಿದ ಟ್ರಾಕ್ಟರ್, ಕಬ್ಬು ಎಲ್ಲವೂ ಸುಟ್ಟು ಭಸ್ಮವಾಗಿದೆ. ಕಲ್ಲು ತೂರಾಟ, ಹೋರಾಟ ತೀವ್ರಗೊಂಡಿದೆ. ಹೀಗಾಗಿ ಸುತ್ತ ಮುತ್ತಲಿನ ಮೂರು ತಾಲೂಕುಗಳಲ್ಲಿ ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಜಿಲ್ಲಾಡಳಿತ ಅಧಿಕೃತ ಅದೇಶ ಹೊರಡಿಸಿದ್ದು, ಈ ಕ್ಷಣದಿಂದ ನಿಷೇಧಾಜ್ಞೆ ಜಾರಿಯಾಗಿದೆ. ನವೆಂಬರ್ 16 ಬೆಳಗ್ಗೆ 8 ಗಂಟೆ ವರೆಗೆ ನಿಷೇಧಾಜ್ಞೆ ಇರಲಿದೆ ಎಂದು ಆದೇಶ ಹೊರಡಿಸಲಾಗಿದೆ.

3,300 ರೂಪಾಯಿಗೆ ರೈತರ ಪಟ್ಟು

ಬಾಗಲಕೋಟೆ ಕಬ್ಬು ಬೆಳೆಗಾರರು ಯಾವುದೇ ಭರವಸೆಗೆ ಜಗ್ಗಿಲ್ಲ. ಕಬ್ಬಿಗೆ 3,300 ರೂಪಾಯಿ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಸಕ್ಕರೆ ಕಾರ್ಖಾನೆ ಮಾಲೀಕರು 2,250 ರೂಪಾಯಿ ನೀಡುವ ಭರವಸೆ ನೀಡಿದ್ದು, 50 ರೂಪಾಯಿ ಬಳಿಕ ನೀಡುವುದಾಗಿ ಹೇಳಿದ್ದಾರೆ. ಆದರೆ ಪಟ್ಟು ಸಡಿಲಿಸದ ರೈತರು ಹೋರಾಟ ತೀವ್ರಗೊಳಿಸಿದ್ದಾರೆ. ಇದರ ಪರಿಣಾಮ ಪರಿಸ್ಥಿತಿ ಕೈಮೀರಿದೆ.