ಬೈಕ್‌ ಕೀ ವಿಚಾರಕ್ಕೆ ಜಗಳ; ಚಾಕು ಇರಿದು ಗೆಳೆಯನ ಹತ್ಯೆ!

By Kannadaprabha NewsFirst Published Aug 1, 2023, 5:18 AM IST
Highlights

 ದ್ವಿಚಕ್ರ ವಾಹನದ ಕೀ ವಿಚಾರಕ್ಕೆ ಇಬ್ಬರು ಸ್ನೇಹಿತರ ನಡುವೆ ನಡೆದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಗಿರಿನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನೇಪಾಳ ಮೂಲದ ತಿಲಕಚಂದ್ರ (25) ಕೊಲೆಯಾದ ದುರ್ದೈವಿ. 

ಬೆಂಗಳೂರು (ಆ.1) :  ದ್ವಿಚಕ್ರ ವಾಹನದ ಕೀ ವಿಚಾರಕ್ಕೆ ಇಬ್ಬರು ಸ್ನೇಹಿತರ ನಡುವೆ ನಡೆದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಗಿರಿನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನೇಪಾಳ ಮೂಲದ ತಿಲಕಚಂದ್ರ (25) ಕೊಲೆಯಾದ ದುರ್ದೈವಿ. ಮಂಡ್ಯ ಮೂಲದ ಸಿದ್ಧರಾಜು(36) ಕೊಲೆಗೈದವ. ಭಾನುವಾರ 11ರ ಸುಮಾರಿಗೆ ಡಿಸೋಜಾನಗರದಲ್ಲಿ ಈ ಘಟನೆ ನಡೆದಿದೆ. ಆರೋಪಿ ಸಿದ್ದರಾಜು ಗಿರಿನಗರ ಪೊಲೀಸ್‌ ಠಾಣೆಗೆ ಬಂದು ಶರಣಾಗಿದ್ದಾನೆ.

ಹೊಸಕೆರೆಹಳ್ಳಿಯ ಕೋಳಿ ಅಂಗಡಿಯಲ್ಲಿ ತಿಲಕಚಂದ್ರ ಮತ್ತು ಸಿದ್ಧರಾಜು ಕೆಲಸ ಮಾಡುತ್ತಿದ್ದರು. ಕೆಲಸಗಾರರು ತಂಗಲು ಕೋಳಿ ಅಂಗಡಿ ಮಾಲಿಕ ಡಿಸೋಜಾನಗರದಲ್ಲಿ ಬಾಡಿಗೆಗೆ ರೂಮ್‌ ಮಾಡಿಕೊಟ್ಟಿದ್ದರು. ಕೆಲಸಗಾರರು ರೂಮ್‌ ಮತ್ತು ಅಂಗಡಿಗೆ ಓಡಾಡಲು ದ್ವಿಚಕ್ರ ವಾಹನವೊಂದನ್ನು ನೀಡಿದ್ದರು. ಇದೇ ದ್ವಿಚಕ್ರ ವಾಹನದಲ್ಲಿ ಇಬ್ಬರು ಓಡಾಡುತ್ತಿದ್ದರು. ಭಾನುವಾರ ರಾತ್ರಿ ತಿಲಕಚಂದ್ರ ಮತ್ತು ಸಿದ್ಧರಾಜು ಹೊಸಕೆರೆಹಳ್ಳಿಯ ಬಾರ್‌ವೊಂದರಲ್ಲಿ ಮದ್ಯ ಸೇವಿಸಿ ರೂಮ್‌ಗೆ ತೆರಳಿದ್ದರು.

Latest Videos

ಮರಣಪತ್ರ ದೃಢೀಕರಣ ವಿಚಾರಕ್ಕೆ ಗ್ರಾಮ ಲೆಕ್ಕಾಧಿಕಾರಿ ಮೇಲೆ ಗ್ರಾಮಸ್ಥನಿಂದ ಹಲ್ಲೆ

ಎದೆಗೆ ಚಾಕುಇರಿದು ಕೊಲೆ

ರಾತ್ರಿ 11ರ ಸುಮಾರಿಗೆ ಸಿದ್ಧರಾಜು ದ್ವಿಚಕ್ರ ವಾಹನದ ಕೀ ಕೊಡುವಂತೆ ಕೇಳಿದಾಗ ತಿಲಕಚಂದ್ರ ಕೀ ನೀಡಲು ನಿರಾಕರಿಸಿದ್ದಾನೆ. ಆಗ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿದೆ. ಕೊಲ ಹೊತ್ತಿನ ಬಳಿಕ ಜಗಳ ವಿಕೋಪಕ್ಕೆ ತಿರುಗಿ ತಿಲಕಚಂದ್ರ ಕುಕ್ಕರ್‌ನಿಂದ ಸಿದ್ಧರಾಜುಗೆ ಹೊಡೆದಿದ್ದಾನೆ. ಇದರಿಂದ ರೊಚ್ಚಿಗೆದ್ದ ಸಿದ್ಧರಾಜು ರೂಮ್‌ನಲ್ಲಿದ್ದ ಚಾಕು ತೆಗೆದು ತಿಲಕಚಂದ್ರನ ಎದೆಗೆ ಚುಚ್ಚಿದ್ದಾನೆ. ಈ ವೇಳೆ ಗಂಭೀರವಾಗಿ ಗಾಯಗೊಂಡು ತೀವ್ರ ರಕ್ತಸ್ರಾವವಾಗಿ ತಿಲಕಚಂದ್ರ ಕುಸಿದುಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬಳಿಕ ತಡರಾತ್ರಿ ಆರೋಪಿ ಸಿದ್ಧರಾಜು ಗಿರಿನಗರ ಪೊಲೀಸ್‌ ಠಾಣೆಗೆ ತೆರಳಿ ಶರಣಾಗಿದ್ದಾನೆ.

ಜಗಳದಲ್ಲಿ ಆರೋಪಿ ಸಿದ್ಧರಾಜುಗೂ ಗಾಯಗಳಾಗಿದ್ದರಿಂದ ಪೊಲೀಸರು ಆತನನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಕೋಳಿ ಅಂಗಡಿ ಮಾಲಿಕ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

 

ಮಾನಸಿಕ ಆರೋಗ್ಯ ಚಿಕಿತ್ಸೆ ಪಡೆದು ಮನೆಗೆ ವಾಪಸ್, ಸ್ವಾಗತಿಸಿದ ಅಜ್ಜ-ಅಜ್ಜಿಯನ್ನೇ ಹತ್ಯೆಗೈದ ಮೊಮ್ಮಗ!

click me!