ಉತ್ತರ ಕರ್ನಾಟಕ ಭಾಗದಲ್ಲಿ ವಕ್ಫ್‌ಗಿದೆ ಭರ್ಜರಿ ಆಸ್ತಿ..!

By Kannadaprabha NewsFirst Published Sep 22, 2024, 12:22 PM IST
Highlights

ರಾಜ್ಯದ ಬಹುತೇಕ ಭಾಗದಲ್ಲಿ ವಕ್ಫ್ ಆಸ್ತಿ ಇದ್ದರೂ ಸಹ ಉತ್ತರ ಕರ್ನಾಟಕದ ಭಾಗದಲ್ಲಿ ಮುಸ್ಲಿಂ ದೊರೆಗಳ ಆಡಳಿತ ಹೆಚ್ಚಾಗಿಯೇ ಇದ್ದುದರಿಂದ ಸಹಜವಾಗಿಯೇ ವಕ್ಫ್ ಆಸ್ತಿಯೂ ಕೂಡ ಇದೇ ಭಾಗದಲ್ಲಿ ಹೆಚ್ಚಿದೆ. ಮುಸ್ಲಿಂ ವ್ಯಕ್ತಿಗಳು ದಾನವಾಗಿ ನೀಡಲಾಗಿರುವ ಆಸ್ತಿಗಳು ಈ ಭಾಗದಲ್ಲೇ ಕಂಡು ಬರುತ್ತವೆ. ನೂರಾರು ವರ್ಷಗಳ ಕಾಲ ಆಳಿದ ಮುಸ್ಲಿಂ ದೊರೆಗಳ ಆಡಳಿತದ ಕೇಂದ್ರಗಳಲ್ಲಿಯೇ ವಕ್ಫ್ ಆಸ್ತಿಗಳು ಹೆಚ್ಚಾಗಿ ಕಂಡು ಬಂದಿವೆ.

ಶಶಿಕಾಂತ ಮೆಂಡೆಗಾರ

ವಿಜಯಪುರ(ಸೆ.22):  ದೇಶಾದ್ಯಂತ ಇರುವ ವಕ್ಫ್ ಆಸ್ತಿಗಳು ದುರ್ಬಳಕೆಯಾಗುವುದನ್ನು ತಡೆಗಟ್ಟಲು ಕೇಂದ್ರ ಸರ್ಕಾರ ವಕ್ಫ್ ಮಸೂದೆಯನ್ನು ತಿದ್ದುಪಡಿ ಮಾಡುವ ಮೂಲಕ ವಕ್ಫ್ ಆಸ್ತಿಗಳ ನಿರ್ವಹಣೆ ಮತ್ತು ಸಂರಕ್ಷಣೆಗೆ ಮುಂದಾಗಿದೆ. ಈ ಮಧ್ಯೆ ರಾಜ್ಯದಲ್ಲಿ ಮೈಸೂರು ಭಾಗದಲ್ಲಿ ಒಂದಿಷ್ಟು ಹೊರತುಪಡಿಸಿದರೇ ಅತ್ಯಂತ ಹೆಚ್ಚು ವಕ್ಫ್ ಆಸ್ತಿ ಇರುವುದೇ ಉತ್ತರ ಕರ್ನಾಟಕ ಭಾಗದಲ್ಲಿ ಎಂಬುದು ಬೆಳಕಿಗೆ ಬಂದಿದೆ. ಈ ಪೈಕಿ ಅತಿ ಹೆಚ್ಚು ವಕ್ಫ್ ಆಸ್ತಿ ಹೊಂದಿರುವ ಕಲಬುರಗಿ ಜಿಲ್ಲೆ ಮೊದಲ ಸ್ಥಾನದಲ್ಲಿದ್ದರೆ, 2ನೇ ಸ್ಥಾನದಲ್ಲಿರುವ ಗುಮ್ಮಟ ನಗರಿ ವಿಜಯಪುರ ಜಿಲ್ಲೆಯಲ್ಲಿಯೂ ವಕ್ಫ್ ಆಸ್ತಿ ಹೇರಳವಾಗಿದ್ದು, ಬೀದರ್ ಜಿಲ್ಲೆ 3ನೇ ಸ್ಥಾನದಲ್ಲಿದೆ.

Latest Videos

ಉತ್ತರದಲ್ಲಿ ವಕ್ಫ್ ಪ್ರಾಬಲ್ಯ:

ರಾಜ್ಯದ ಬಹುತೇಕ ಭಾಗದಲ್ಲಿ ವಕ್ಫ್ ಆಸ್ತಿ ಇದ್ದರೂ ಸಹ ಉತ್ತರ ಕರ್ನಾಟಕದ ಭಾಗದಲ್ಲಿ ಮುಸ್ಲಿಂ ದೊರೆಗಳ ಆಡಳಿತ ಹೆಚ್ಚಾಗಿಯೇ ಇದ್ದುದರಿಂದ ಸಹಜವಾಗಿಯೇ ವಕ್ಫ್ ಆಸ್ತಿಯೂ ಕೂಡ ಇದೇ ಭಾಗದಲ್ಲಿ ಹೆಚ್ಚಿದೆ. ಮುಸ್ಲಿಂ ವ್ಯಕ್ತಿಗಳು ದಾನವಾಗಿ ನೀಡಲಾಗಿರುವ ಆಸ್ತಿಗಳು ಈ ಭಾಗದಲ್ಲೇ ಕಂಡು ಬರುತ್ತವೆ. ನೂರಾರು ವರ್ಷಗಳ ಕಾಲ ಆಳಿದ ಮುಸ್ಲಿಂ ದೊರೆಗಳ ಆಡಳಿತದ ಕೇಂದ್ರಗಳಲ್ಲಿಯೇ ವಕ್ಫ್ ಆಸ್ತಿಗಳು ಹೆಚ್ಚಾಗಿ ಕಂಡು ಬಂದಿವೆ.

ತಿಂಗಳೊಳಗೆ ಎಲ್ಲ ವಕ್ಫ್ ಆಸ್ತಿ ಖಾತಾ ಅಪ್‌ಡೇಟ್ ಕಾರ್ಯ ಮುಗಿಸಿ: ಜಮೀರ್ ಸೂಚನೆ

ವಕ್ಫ್ ಆಸ್ತಿ ಎಲ್ಲೆಲ್ಲಿ ಎಷ್ಟೆಷ್ಟು?:

ಕಲಬುರಗಿ ಜಿಲ್ಲೆಯಲ್ಲಿ 5814 ವಕ್ಫ್ ಆಸ್ತಿಗಳಿವೆ. ಇನ್ನು, ವಿಜಯಪುರ ಜಿಲ್ಲೆಯಲ್ಲಿ 4040, ಬೀದರ್ ಜಿಲ್ಲೆಯಲ್ಲಿ 3822, ರಾಯಚೂರು ಜಿಲ್ಲೆಯಲ್ಲಿ 2689, ಕೊಪ್ಪಳ ಜಿಲ್ಲೆಯಲ್ಲಿ 1585, ಯಾದಗಿರಿ ಜಿಲ್ಲೆಯಲ್ಲಿ 1425, ಬಳ್ಳಾರಿ ಜಿಲ್ಲೆಯಲ್ಲಿ 952, ವಿಜಯನಗರ ಜಿಲ್ಲೆಯಲ್ಲಿ 678 ವಕ್ಫ್ ಆಸ್ತಿಗಳಿವೆ.

ವಕ್ಫ್ ಬೋರ್ಡ್ ಸೇರಿದ ಕಂದಾಯ ಇಲಾಖೆ ಆಸ್ತಿಗಳು

ವಿಜಯಪುರ ಜಿಲ್ಲೆಯಲ್ಲಿನ ಎಷ್ಟು ಕಂದಾಯ ಆಸ್ತಿಗಳು ವಕ್ಫ್ ಬೋರ್ಡ್ ಸೇರಿವೆ? ಅವುಗಳನ್ನು ಮರಳಿ ಪಡೆಯಲು ಕೈಗೊಂಡ ಕ್ರಮಗಳೇನು? ಎಂದು ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರು ವಿಧಾನಸಭೆಯಲ್ಲಿ ಪ್ರಶ್ನೆ ಕೇಳಿದ್ದರು. ಇದಕ್ಕೆ 2024ರ ಜುಲೈ 15ರಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಉತ್ತರಿಸಿದ್ದು, ಉತ್ತರ ಈ ಕೆಳಗಿನಂತಿದೆ. ಜಿಲ್ಲೆಯ ವಿಜಯಪುರ, ಸಿಂದಗಿ, ದೇವರ ಹಿಪ್ಪರಗಿ ಹಾಗೂ ಆಲಮೇಲ ಈ ನಾಲ್ಕು ತಾಲೂಕುಗಳು ಸೇರಿ ಒಟ್ಟು ಕಂದಾಯ ಇಲಾಖೆಯ 20 ಆಸ್ತಿಗಳು ವಕ್ಫ್ ಬೋರ್ಡ್ ಸೇರಿವೆ. ವಿಜಯಪುರದಲ್ಲಿನ ಒಂದು ಆಸ್ತಿಯನ್ನು ಸರ್ಕಾರಿ ಗಾರಾಯಣ ಎಂದು ದಾಖಲು ಮಾಡಲಾಗಿದೆ ಎಂಬ ಮಾಹಿತಿ ನೀಡಲಾಗಿದೆ.

ಮುತುವಲ್ಲಿಗಳಿಂದಲೇ ವಕ್ಫ್ ಆಸ್ತಿ ಮಾರಾಟ

ಮುತುವಲ್ಲಿಗಳು ವಕ್ಫ್ ಆಸ್ತಿಯನ್ನು ಮಾರಾಟ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುವುದಾಗಿ ತಿಳಿಸಿದ ಕಂದಾಯ ಸಚಿವರು ಈ ಕೆಳಗಿನ ಮಾಹಿತಿ ಒದಗಿಸಿದ್ದಾರೆ.
- ವಕ್ಫ್ ಕಾಯ್ದೆ ಕಲಂ 54ರ ಪ್ರಕಾರ ಒಟ್ಟು ಮೂರು ಪ್ರಕರಣಗಳಿದ್ದು, ಉಪವಿಭಾಗಾಧಿಕಾರಿ ಹಂತದಲ್ಲಿ ಸೂಕ್ತ ಕ್ರಮ ಜರುಗಿಸಲಾಗುತ್ತಿದೆ.
- ವಕ್ಫ್ ಕಾಯ್ದೆ ಕಲಂ 52ರ ಒಟ್ಟು 9 ಪ್ರಕರಣಗಳಿದ್ದು, ಅದರಲ್ಲಿ 4 ಪ್ರಕರಣಗಳಿಗೆ ನೋಟಿಸ್‌ ನೀಡಲಾಗಿದೆ. ಬಾಕಿ ಉಳಿದ 5 ಪ್ರಕರಣಗಳಿಗೆ ನೋಟಿಸ್‌ ನೀಡಿ ಸೂಕ್ತ ಕ್ರಮ ಜರುಗಿಸುವ ಉತ್ತರವನ್ನು ನೀಡಲಾಗಿದೆ.

ರಾಜ್ಯಸಭೆಯಲ್ಲೂ ಬಹುಮತದತ್ತ ಎನ್‌ಡಿಎ; ವಕ್ಫ್‌ ತಿದ್ದುಪಡಿ ಮಸೂದೆ ಅಂಗೀಕಾರ ಇನ್ನು ಸುಲಭ!

ಇಡೀ ದೇಶದಲ್ಲಿ 8.02 ಲಕ್ಷ ಎಕರೆ ಆಸ್ತಿಯ ಒಡೆತನವನ್ನು ವಕ್ಫ್ ಹೊಂದಿದೆ. ರಕ್ಷಣಾ ಇಲಾಖೆ, ರೈಲ್ವೆ ಇಲಾಖೆ ಬಿಟ್ಟರೆ ಹೆಚ್ಚು ಭೂಮಿಯ ಒಡೆತನ ಇರೋದು ವಕ್ಫ್ ಮಂಡಳಿಗೆ. ಸಂವಿಧಾನ ವಿರೋಧಿ, ಸಂವಿಧಾನದ ಆಶಯಗಳ ವಿರುದ್ಧ ವಕ್ಫ್ ಕಾಯ್ದೆ ಇದೆ. ವಕ್ಫ್ ಟ್ರಿಬ್ಯುನಲ್ ನೀಡಿದ ತೀರ್ಪನ್ನು ಸುಪ್ರೀಂಕೋರ್ಟ್ ಸಹ ಪ್ರಶ್ನಿಸುವಂತಿಲ್ಲ. ಮುಸ್ಲಿಂ ರಾಷ್ಟ್ರಗಳಲ್ಲೇ ವಕ್ಫ್ ಕಾಯ್ದೆಯಂತಹ ಪರಿಕಲ್ಪನೆ ಇಲ್ಲ. ಕೇಂದ್ರದಲ್ಲಿ ವಕ್ಫ್ ಮಸೂದೆ ತಿದ್ದುಪಡಿಯಾದಾಗ ಮಾತ್ರ ಎಲ್ಲವೂ ಸರಿಯಾಗಲಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದ್ದಾರೆ.  

ವಕ್ಫ್‌ ಎಂದರೆ ಮುಸ್ಲಿಂ ಸಮುದಾಯದಲ್ಲಿ ದಾನ ಮಾಡಿರುವಂಥದ್ದು, ಅದು ಸರ್ಕಾರದ ಆಸ್ತಿ ಅಲ್ಲ. ಕೇಂದ್ರ ಸರ್ಕಾರ ವಕ್ಫ್‌ ಕಾಯ್ದೆ ತಿದ್ದುಪಡಿ ಮಾಡೋ ವಿಚಾರಕ್ಕೆ ಕೈ ಹಾಕಿದ್ದು ತಪ್ಪು. ವಿನಾಕಾರಣ ಕೇಂದ್ರ ಸರ್ಕಾರ ಇದರಲ್ಲಿ ಮಧ್ಯ ಪ್ರವೇಶ ಮಾಡಿ ಒಡೆದಾಳಲು ಪ್ರಯತ್ನ ಮಾಡುತ್ತಿದ್ದು, ಈ ನಡೆ ಸರಿಯಾಗಿಲ್ಲ. ಈ ವಿಚಾರದಲ್ಲಿ ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದ್ದು, ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನಿಸಲಾಗುತ್ತದೆ ಎಂದು ಪೌರಾಡಳಿತ ಹಾಗೂ ಹಜ್ ಖಾತೆ ಸಚಿವ ರಹೀಂ ಖಾನ್ ತಿಳಿಸಿದ್ದಾರೆ.  

click me!