ಸ್ಥಾನಕ್ಕೆ ಈಗಲೇ ರಾಜೀನಾಮೆ ನೀಡಲು ಸಿದ್ಧನಿದ್ದೇನೆ: ಕೋರ್ಟಲ್ಲಿ ಮುನಿರತ್ನ ಅಳಲು

By Kannadaprabha NewsFirst Published Sep 22, 2024, 12:10 PM IST
Highlights

ಗುತ್ತಿಗೆದಾರನಿಗೆ ಬೆದರಿಕೆ ಹಾಗೂ ಜಾತಿ ನಿಂದನೆ ಪ್ರಕರಣದಲ್ಲಿ ಜಾಮೀನು ಪಡೆದ ಬೆನ್ನಲ್ಲೇ ಮುನಿರತ್ನ ಅವರು ಅತ್ಯಾಚಾರದ ಆರೋಪ ಪ್ರಕರಣದಲ್ಲಿ ಮತ್ತೆ ಬಂಧನಕ್ಕೊಳಗಾಗಿದ್ದಾರೆ. ಈ ಮೂಲಕ ಎರಡನೇ ಬಾರಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ. ಕಗ್ಗಲೀಪುರ ಪೊಲೀಸರಿಂದ ಅತ್ಯಾಚಾರ ಆರೋಪದ ಮೇಲೆ ಬಂಧನಕ್ಕೊಳಗಾದ ಮುನಿರತ್ನ ಅವರನ್ನು ಶನಿವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಲಯ ಬಂಧನಕ್ಕೊಪ್ಪಿಸಿತು.

ಬೆಂಗಳೂರು(ಸೆ.22): ‘ಬೇಕಾದರೆ ನಾನು ಶಾಸಕ ಸ್ಥಾನಕ್ಕೆ ಈಗಲೇ ರಾಜೀನಾಮೆ ನೀಡಲು ಸಿದ್ಧನಿದ್ದೇನೆ. ಇಂತಹ ಮಾನಸಿಕ ಕಿರುಕುಳ ಬೇಡ. ಈಗಲೇ ರಾಜೀನಾಮೆ ಪತ್ರವನ್ನು ತೆಗೆದುಕೊಳ್ಳಿ ಸ್ವಾಮಿ...!’ ಅತ್ಯಾಚಾರ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಶಾಸಕ ಮುನಿರತ್ನ ಅವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಅಲವತ್ತುಕೊಂಡಿದ್ದು ಹೀಗೆ.

ಗುತ್ತಿಗೆದಾರನಿಗೆ ಬೆದರಿಕೆ ಹಾಗೂ ಜಾತಿ ನಿಂದನೆ ಪ್ರಕರಣದಲ್ಲಿ ಜಾಮೀನು ಪಡೆದ ಬೆನ್ನಲ್ಲೇ ಮುನಿರತ್ನ ಅವರು ಅತ್ಯಾಚಾರದ ಆರೋಪ ಪ್ರಕರಣದಲ್ಲಿ ಮತ್ತೆ ಬಂಧನಕ್ಕೊಳಗಾಗಿದ್ದಾರೆ. ಈ ಮೂಲಕ ಎರಡನೇ ಬಾರಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ. ಕಗ್ಗಲೀಪುರ ಪೊಲೀಸರಿಂದ ಅತ್ಯಾಚಾರ ಆರೋಪದ ಮೇಲೆ ಬಂಧನಕ್ಕೊಳಗಾದ ಮುನಿರತ್ನ ಅವರನ್ನು ಶನಿವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಲಯ ಬಂಧನಕ್ಕೊಪ್ಪಿಸಿತು.

Latest Videos

ಮುನಿರತ್ನ ವಿರುದ್ಧ 4 ಕೇಸ್‌ ತನಿಖೆಗೆ ಎಸ್‌ಐಟಿ ರಚನೆ

ವಿಚಾರಣೆ ವೇಳೆ ನ್ಯಾಯಾಲಯ ಕೇಳಿದ ಕೆಲವು ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಮುನಿರತ್ನ, ಐದು ವರ್ಷದ ಬಳಿಕ ಪ್ರಕರಣ ಹೊರಬಂದಿದೆ. ಸಂತ್ರಸ್ತೆ ಈವರೆಗೆ ಯಾವ ಕಾರಣಕ್ಕಾಗಿ ಸುಮ್ಮನಿದ್ದರು? ಅಂದೇ ದೂರು ನೀಡಬಹುದಿತ್ತಲ್ಲವೇ? ಇದು ವ್ಯವಸ್ಥಿತ ರಾಜಕೀಯ ಷಡ್ಯಂತ್ರ ಎಂದು ನೋವಿನಿಂದ ನುಡಿದರು.

ಲೋಕಸಭೆಯ ಚುನಾವಣೆ ಫಲಿತಾಂಶ ಬಳಿಕ ನನ್ನ ವಿರುದ್ಧ ದ್ವೇಷದ ರಾಜಕಾರಣ ಮಾಡಲಾಗುತ್ತಿದೆ. ನನ್ನ ಕ್ಷೇತ್ರದಲ್ಲಿ ಕೆಲವರಿಗೆ ಹಿನ್ನಡೆಯಾಗಿದ್ದಕ್ಕೆ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಲಾಗುತ್ತಿದೆ. ಬೇಕಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮನೆಯಲ್ಲಿ ನೆಮ್ಮದಿಯಾಗಿರುತ್ತೇನೆ ಎಂದರು.

ಈ ವೇಳೆ ನ್ಯಾಯಾಧೀಶರು, ಇದು ನ್ಯಾಯಾಲಯ ಎಂಬುದು ನಿಮ್ಮ ಗಮನದಲ್ಲಿರಲಿ, ನೀವು ರಾಜೀನಾಮೆಯನ್ನು ಯಾರಿಗೆ ಕೊಡಬೇಕೋ ಅವರಿಗೆ ಕೊಡಿ. ಕೇಳುತ್ತಿರುವ ಪ್ರಶ್ನೆಗಳಿಗೆ ಮಾತ್ರ ಉತ್ತರ ಕೊಡಿ ಎಂದು ಸೂಚಿಸಿದರು.
ಆದರೂ ಮಾತು ಮುಂದುವರೆಸಿದ ಮುನಿರತ್ನ, ಆಡಳಿತಾರೂಢ ಕಾಂಗ್ರೆಸ್‌‍ ಪಕ್ಷದ ವ್ಯವಸ್ಥಿತ ಷಡ್ಯಂತ್ರ ಇದಾಗಿದೆ. ನಾನು ಯಾವ ಮಹಿಳೆಯ ಮೇಲೂ ಅತ್ಯಾಚಾರ ನಡೆಸಿಲ್ಲ. ಸಾರ್ವಜನಿಕ ಜೀವನದಲ್ಲಿ ನನ್ನದೇ ಆದ ಘನತೆ ಇಟ್ಟುಕೊಂಡಿದ್ದೇನೆ. ಎಂದೂ ಇಂತಹ ನೀಚ ಕೆಲಸ ಮಾಡಲಿಲ್ಲ. ನನ್ನ ಕ್ಷೇತ್ರದ ರಾಜಕೀಯ ಎದುರಾಳಿಗಳು ಕೆಲವು ಪ್ರಭಾವಿಗಳ ಜೊತೆ ಸೇರಿಕೊಂಡು ಇಂತಹ ಕುತಂತ್ರ ನಡೆಸಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್‌ನಲ್ಲಿದ್ದಾಗ ಶಾಸಕ ಮುನಿರತ್ನ ಸತ್ಯ ಹರಿಶ್ಚಂದ್ರರಾಗಿದ್ದರಾ: ಆರ್.ಅಶೋಕ್

ಕಳೆದ ಐದು ವರ್ಷದಿಂದ ನನ್ನ ಜತೆ ಇದ್ದವರೇ ನನ್ನ ವಿರುದ್ಧ ದೂರುಗಳನ್ನು ನೀಡುತ್ತಿದ್ದಾರೆ. ಚುನಾವಣಾ ಸಂದರ್ಭದಲ್ಲಿ ನಡೆದ ಮನಸ್ತಾಪಗಳನ್ನು ಮುಂದಿಟ್ಟುಕೊಂಡು ದಿನೇದಿನೇ ಹೊಸ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ. ನಾಲ್ಕು ಬಾರಿ ಶಾಸಕನಾಗಿದ್ದು, ಶಾಸಕ ಸ್ಥಾನಕ್ಕಾಗಿಯೇ ಕಿರುಕುಳ ನೀಡುತ್ತಿದ್ದಾರೆ. ಈ ಕಿರುಕುಳಕ್ಕಿಂತ ಈಗಲೇ ನಾನು ನನ್ನ ಶಾಸಕ ಸ್ಥಾನಕ್ಕೆ ಬೇಕಾದರೆ ರಾಜೀನಾಮೆ ನೀಡುತ್ತೇನೆ. ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿ ನಾನು, ವಿನಾ ಕಾರಣ ನನ್ನ ತೇಜೋವಧೆ ಮಾಡುವಂತಹ ಕೆಲಸ ಮಾಡುತ್ತಿದ್ದಾರೆ. ಐದು ವರ್ಷದ ಹಿಂದೆ ಅತ್ಯಾಚಾರವೆಸಗಿದ್ದರೆ ಆಗಲೇ ಪ್ರಕರಣ ದಾಖಲಿಸಬಹುದಿತ್ತು ಎಂದು ಹೇಳಿದರು.

ತದನಂತರ ನ್ಯಾಯಾಲಯವು, ಜನಪ್ರತಿನಿಧಿಯಾಗಿ ಮುಂದುವರೆಯುವ ಆಸಕ್ತಿ ಇಲ್ಲದಿದ್ದರೆ ಸಂಬಂಧಪಟ್ಟವರ ಬಳಿ ರಾಜೀನಾಮೆ ವಿಷಯವನ್ನು ಮಾತನಾಡಿ ಎಂದು ಸೂಚಿಸಿ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.

click me!