ಸಂಸತ್ತಲ್ಲಿ ಉಡುಪಿ ಯುವತಿ ರಶ್ಮಿ ಪ್ರಕರಣ ಪ್ರತಿಧ್ವನಿ !
ಸಂಸತ್ತಲ್ಲಿ ಉಡುಪಿ ಯುವತಿ ರಶ್ಮಿ ಪ್ರಕರಣ ಪ್ರತಿಧ್ವನಿ| ಆಕ್ಸ್ಫರ್ಡ್ ವಿವಿಯಲ್ಲಿ ರಶ್ಮಿ ಸಾಮಂತ್ಗೆ ಜನಾಂಗೀಯ ನಿಂದನೆ| ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿ ಕಿಡಿಕಾರಿದ ಸಂಸದ ಅಶ್ವಿನಿ ವೈಷ್ಣವ್| ಅಗತ್ಯಬಿದ್ದಾಗ ಬ್ರಿಟನ್ ಜತೆ ಪ್ರಸ್ತಾಪ: ವಿದೇಶ ಸಚಿವ ಜೈಶಂಕರ್
ನವದೆಹಲಿ(ಮಾ.16): ಇತ್ತೀಚೆಗೆ ಬ್ರಿಟನ್ನಿನ ಪ್ರಸಿದ್ಧ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಕ್ಕೆ ಮೊದಲ ಭಾರತೀಯ ಮೂಲದ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದ ಉಡುಪಿ ಮೂಲದ ರಶ್ಮಿ ಸಾಮಂತ್ ಜನಾಂಗೀಯ ನಿಂದನೆಗೆ ಗುರಿಯಾಗಿ ರಾಜೀನಾಮೆ ನೀಡಬೇಕಾಗಿ ಬಂದ ಪ್ರಕರಣ ಸೋಮವಾರ ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿತು. ವಿದೇಶಾಂಗ ಸಚಿವ ಎಸ್.ಜೈಶಂಕರ್ ಈ ಕುರಿತು ಪ್ರತಿಕ್ರಿಯಿಸಿ, ಅಗತ್ಯಬಿದ್ದಾಗ ಪ್ರಕರಣವನ್ನು ಬ್ರಿಟನ್ ಮುಂದೆ ಪ್ರಸ್ತಾಪಿಸಲಾಗುವುದು. ಮಹಾತ್ಮ ಗಾಂಧೀಜಿಯವರ ಭಾರತ ಜನಾಂಗೀಯ ನಿಂದನೆಯನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಸಂಸದ ಅಶ್ವಿನಿ ವೈಷ್ಣವ್ ಈ ಪ್ರಕರಣವನ್ನು ಪ್ರಸ್ತಾಪಿಸಿ, ಉಡುಪಿಯ ಪ್ರತಿಭಾವಂತ ಹುಡುಗಿ ರಶ್ಮಿ ಆಕ್ಸ್ಫರ್ಡ್ ವಿವಿ ವಿದ್ಯಾರ್ಥಿ ಸಂಘಕ್ಕೆ ಮೊದಲ ಭಾರತೀಯ ಮಹಿಳೆಯಾಗಿ ಆಯ್ಕೆಯಾಗಿದ್ದಳು. ಆದರೆ, ಆಕೆಯನ್ನು ಆ ದೇಶ ನಡೆಸಿಕೊಂಡಿದ್ದು ಹೇಗೆ? ಅವಳ ಮೇಲೆ ಸೈಬರ್ ದಬ್ಬಾಳಿಕೆ ನಡೆಸಲಾಯಿತು. ಅವಳ ಹಿಂದು ಪೋಷಕರನ್ನೂ ಧಾರ್ಮಿಕವಾಗಿ ನಿಂದಿಸಲಾಯಿತು. ಅದರಿಂದಾಗಿ ಕೇವಲ 5 ದಿನಕ್ಕೆ ಆಕೆ ರಾಜೀನಾಮೆ ನೀಡಬೇಕಾಗಿ ಬಂದಿತು ಎಂದು ಕಿಡಿ ಕಾರಿದರು.
ವಿವಾದಿತ ಹೇಳಿಕೆ: ಕನ್ನಡತಿ ರಾಜೀನಾಮೆ
ಅದಕ್ಕೆ ಪ್ರತಿಕ್ರಿಯಿಸಿದ ಜೈಶಂಕರ್, ಬ್ರಿಟನ್ ಜೊತೆ ಭಾರತಕ್ಕೆ ಗಾಢ ಸಂಬಂಧವಿದೆ. ಹೀಗಾಗಿ ಅಗತ್ಯಬಿದ್ದಾಗ ಈ ಪ್ರಕರಣವನ್ನು ಸೂಕ್ತ ರೀತಿಯಲ್ಲಿ ಪ್ರಸ್ತಾಪಿಸಲಾಗುವುದು. ಬ್ರಿಟನ್ನಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಾರತೀಯರು ನೆಲೆಸಿದ್ದಾರೆ. ಅಲ್ಲಿ ನಡೆಯುವ ಜನಾಂಗೀಯ ನಿಂದನೆಯನ್ನು ನಾವು ಕಡೆಗಣಿಸುವಂತಿಲ್ಲ ಎಂದು ಹೇಳಿದರು.
ಉಡುಪಿಯ ರಶ್ಮಿ, ಇತ್ತೀಚೆಗೆ ಆಕ್ಸ್ಫರ್ಡ್ ವಿವಿ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾಗಿ ಚುನಾಯಿತರಾಗಿದ್ದರು. ಈ ಹುದ್ದೆಗೆ ಏರಿದ ಮೊದಲ ಭಾರತೀಯ ಮಹಿಳೆ ಎನ್ನಿಸಿಕೊಂಡಿದ್ದರು. ಆದರೆ ಇವರು ಈ ಹುದ್ದೆಗೆ ಏರುವ ಮುನ್ನ ಜನಾಂಗೀಯ ನಿಂದನೆಗಳ ಟ್ವೀಟ್ ಮಾಡಿದ್ದರು ಎಂಬ ಆರೋಪ ಕೇಳಿಬಂದಿದ್ದವು. ಈ ಕಾರಣಕ್ಕೆ ಕೆಲವೇ ದಿನದಲ್ಲಿ ಅವರು ರಾಜೀನಾಮೆ ನೀಡಿದ್ದರು.