ದುಶಾಂಬೆಯಲ್ಲಿ SCO ಶೃಂಗಸಭೆ: ಹೆಚ್ಚುತ್ತಿರುವ ತೀವ್ರವಾದದ ಬಗ್ಗೆ ಧ್ವನಿ ಎತ್ತಿದ ಪ್ರಧಾನಿ ಮೋದಿ
- ತಜಾಕಿಸ್ತಾನದ ದುಶಾಂಬೆಯಲ್ಲಿ ಶಾಂಘೈ ಸಹಕಾರ ಸಂಘಟನೆಯ (SCO) ವಾರ್ಷಿಕ ಶೃಂಗಸಭೆ
- ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಭಾಗಿ
- ಹೆಚ್ಚುತ್ತಿರುವ ತೀವ್ರವಾದದ ಬಗ್ಗೆ ಧ್ವನಿ ಎತ್ತಿದ ನಮೋ
ನವದೆಹಲಿ (ಸೆ. 17): ಶಾಂಘೈ ಸಹಕಾರ ಸಂಘಟನೆಯ (SCO) ವಾರ್ಷಿಕ ಶೃಂಗಸಭೆ ಆರಂಭವಾಗಿದೆ. ಶೃಂಗಸಭೆಯ ಯೋಜನಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ಮೋದಿ, ಹೆಚ್ಚುತ್ತಿರುವ ತೀವ್ರವಾದವು ಪ್ರಾದೇಶಿಕ ಶಾಂತಿ ಮತ್ತು ಸುರಕ್ಷತೆಗೆ ದೊಡ್ಡ ಸವಾಲಾಗಿದೆ, ಅಫಘಾನಿಸ್ತಾನದ ಇತ್ತೀಚೆಗಿನ ಬೆಳವಣಿಗೆಗಳು ಇದನ್ನು ಪುಷ್ಠಿಕರಿಸುತ್ತದೆ ಎಂದು ಹೇಳಿದರು.
ತಜಾಕಿಸ್ತಾನದ ದುಶಾಂಬೆಯಲ್ಲಿ ನಡೆಯುತ್ತಿರುವ ಈ ಶೃಂಗಸಭೆಯು ಮೊದಲ ಬಾರಿಗೆ ಹೈಬ್ರಿಡ್ ಸ್ವರೂಪದಲ್ಲಿ ನಡೆಯುತ್ತಿದೆ. ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದರೆ, ವಿದೇಶಾಂಗ ಸಚಿವ ಎಸ್. ಜೈ ಶಂಕರ್ ದುಶಾಂಬೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.
ನಮ್ಮ ಯುವಜನರಲ್ಲಿ ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವ ಬೆಳೆಸುವ ಅಗತ್ಯವಿದೆಯೆಂದು ಅಭಿಪ್ರಾಯಪಟ್ಟ ಪ್ರಧಾನಿ ಮೋದಿ, ಸ್ಟಾರ್ಟ್ಅಪ್ ಮತ್ತು ಉದ್ಯಮಶೀಲತೆಯನ್ನು ಒಟ್ಟಿಗೆ ಕೊಂಡೊಯ್ಯುವ ಮೂಲಕ ಹೊಸ-ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವು ತನ್ನದೇ ಕೊಡುಗೆ ನೀಡಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಮಧ್ಯ- ಏಷ್ಯಾದಲ್ಲಿ ಸಂಪರ್ಕವನ್ನು ಬಲಪಡಿಸಲು ಭಾರತವು ಬದ್ಧವಾಗಿದೆ. ಭಾರತದಲ್ಲಿ ಲಭ್ಯವಿರುವ ಮಾರುಕಟ್ಟೆಯನ್ನು ಬಳಸಿ ಇತರ ದೇಶಗಳು ಪ್ರಯೋಜನ ಪಡೆಯಬಹುದು ಎಂದು ಮೋದಿ ಕರೆಕೊಟ್ಟರು.
ಪ್ರಧಾನಿ ಮೋದಿ ರೀತಿ ನಾವೂ ದುಡಿಯೋಣ: ಸಿಎಂ ಬಸವರಾಜ ಬೊಮ್ಮಾಯಿ
ಶಾಂಘೈ ಸಹಕಾರ ಸಂಘಟನೆಯು 20 ವರ್ಷಗಳನ್ನು ಪೂರೈಸಿದ ಈ ಸಂದರ್ಭದಲ್ಲಿ, ಸಂಘಟನೆಯ ಭವಿಷ್ಯದ ಬಗ್ಗೆಯು ಅವಲೋಕಿಸುವ ಅಗತ್ಯವಿದೆ ಎಂದ ಪ್ರಧಾನಿ ಮೋದಿ ಪ್ರಾದೇಶಿಕ ಶಾಂತಿ, ಸುರಕ್ಷತೆ ಮತ್ತು ವಿಶ್ವಾಸದ ಕೊರತೆಯ ಬಗ್ಗೆಯೂ ಪ್ರಸ್ತಾಪಿಸಿದರು.
ಅಫ್ಘಾನ್ ಬಿಕ್ಕಟ್ಟು, ಸದಸ್ಯ ರಾಷ್ಟ್ರಗಳ ಮೇಲೆ ಅದರ ಆಂತರೀಕ ಮತ್ತು ಬಾಹ್ಯ ಪರಿಣಾಮಗಳು, ಪ್ರಾದೇಶಿಕ ಸುರಕ್ಷತೆ ಇತ್ಯಾದಿ ಮಹತ್ವದ ವಿಚಾರಗಳ ಬಗ್ಗೆ ಈ ಶೃಂಗಸಭೆಯಲ್ಲಿ ಚರ್ಚೆ ನಡೆಯಲಿದೆ.