ಪಾಕಿಸ್ತಾನ ಭಯೋತ್ಪಾದನೆಯ ಕೇಂದ್ರಬಿಂದು| ಮಾನವ ಹಕ್ಕುಗಳ ಕುರಿತು ಪಾಕಿಸ್ತಾನದ ಅನಪೇಕ್ಷಿತ ಉಪದೇಶವನ್ನು ಯಾರೂ ಕೇಳಿಸಿಕೊಳ್ಳುವುದಿಲ್ಲ|  ಮಾನವ ಹಕ್ಕುಗಳ ಮಂಡಳಿ (ಎಚ್‌ಆರ್‌ಸಿ)ಯ ಸಭೆಯಲ್ಲಿ ತರಾಟೆ

Add Asianetnews Kannada as a Preferred SourcegooglePreferred

ಜಿನೆವಾ(ಸೆ.17): ಪಾಕಿಸ್ತಾನ ಭಯೋತ್ಪಾದನೆಯ ಕೇಂದ್ರಬಿಂದು ಆಗಿದ್ದು, ಮಾನವ ಹಕ್ಕುಗಳ ಕುರಿತು ಪಾಕಿಸ್ತಾನದ ಅನಪೇಕ್ಷಿತ ಉಪದೇಶವನ್ನು ಯಾರೂ ಕೇಳಿಸಿಕೊಳ್ಳುವುದಿಲ್ಲ ಎಂದು ಭಾರತ ಪಾಕಿಸ್ತಾನವನ್ನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ (ಎಚ್‌ಆರ್‌ಸಿ)ಯ ಸಭೆಯಲ್ಲಿ ತರಾಟೆ ತೆಗೆದುಕೊಂಡಿದೆ.

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ 45ನೇ ಅಧಿವೇಶನದ ವೇಳೆ ಪಾಕಿಸ್ತಾನ ಭಾಷಣಕ್ಕೆ ಉತ್ತರ ನೀಡಿದ ಭಾರತೀಯಪ್ರತಿನಿಧಿ, ಸುಳ್ಳು ಮತ್ತು ಕಟ್ಟುಕತೆಗಳ ಮೂಲಕ ಭಾರತಕ್ಕೆ ಕೆಡುಕು ಬಯಸುವುದು ಪಾಕಿಸ್ತಾನಕ್ಕೆ ಅಭ್ಯಾಸವಾಗಿದೆ. ಭಾರತ ಅಥವಾ ಇತರ ಯಾವುದೇ ದೇಶ ಕೂಡ ಪಾಕಿಸ್ತಾನ ಮಾನವ ಹಕ್ಕುಗಳ ಸಂರಕ್ಷಣೆಯ ಕುರಿತು ಹೇಳುವ ಕಟ್ಟು ಕತೆ ನಂಬಲು ಸಿದ್ಧವಿಲ್ಲ. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದುಗಳು, ಸಿಖ್ಖರು, ಕ್ರೈಸ್ತರಿಗೆ ನಿರಂತರವಾಗಿ ಕಿರುಕುಳ ನೀಡಲಾಗುತ್ತಿದೆ.

ಜಮ್ಮು- ಕಾಶ್ಮೀರದಲ್ಲಿ ಹೋರಾಡಲು ಸಾವಿರಾರು ಭಯೋತ್ಪಾಕರಿಗೆ ಪಾಕಿಸ್ತಾನದಲ್ಲಿ ತರಬೇತಿ ನೀಡಿರುವ ಸಂಗತಿಯನ್ನು ಆ ದೇಶದ ಪ್ರಧಾನಿಯೊಬ್ಬರು ಹೆಮ್ಮೆಯಿಂದ ಒಪ್ಪಿಕೊಂಡಿದ್ದಾರೆ. ಪಾಕಿಸ್ತಾನ ಭಯೋತ್ಪಾದನೆಯ ಕೇಂದ್ರಬಿಂದುವಾಗಿದ್ದು, ವಿಶ್ವಸಂಸ್ಥೆಯ ನಿಷೇಧಿತ ಉಗ್ರರ ಪಟ್ಟಿಯಲ್ಲಿರುವ ಹೆಚ್ಚಿನ ಉಗ್ರರು ಪಾಕಿಸ್ತಾನದಲ್ಲಿದ್ದಾರೆ ಎಂದು ಹೇಳಿದ್ದಾರೆ.