ವ್ಯಾಂಕೋವರ್‌ನ ಗುರುದ್ವಾರದಲ್ಲಿ ಭಾರತ-ವಿರೋಧಿ ಗೀಚುಬರಹಗಳನ್ನು ಖಲಿಸ್ತಾನಿ ಪರ ಗುಂಪುಗಳಿಂದ ಬರೆಯಲಾಗಿದೆ ಎಂದು ಖಾಲ್ಸಾ ದಿವಾನ್‌ ಸೊಸೈಟಿ ಆರೋಪಿಸಿದೆ. ಸಿಖ್‌ ಸಮುದಾಯದಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದ ಈ ಕೃತ್ಯ ನಡೆದಿದೆ ಎಂದು ಹೇಳಿಕೆ ನೀಡಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಒಟ್ಟಾವಾ : ಕೆನಡಾದ ವ್ಯಾಂಕೋವರ್‌ನಲ್ಲಿರುವ ಗುರುದ್ವಾರವನ್ನು ಭಾರತ ಹಾಗೂ ಮೋದಿ ವಿರೋಧಿ ಗೀಚುಬರಹಗಳಿಂದ ವಿರೂಪಗೊಳಿಸಲಾಗಿದೆ. ಇದರ ಹಿಂದೆ ಖಲಿಸ್ತಾನಿ ಪರ ಸಿಖ್‌ ಪ್ರತ್ಯೇಕತಾವಾದಿಗಳ ಗುಂಪಿನ ಕೈವಾಡವಿದೆ ಎಂದು ಖಾಲ್ಸಾ ದಿವಾನ್‌ ಸೊಸೈಟಿ ಆರೋಪಿಸಿದೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಸೊಸೈಟಿ, ‘ಕೆನಡಾದ ಸಿಖ್‌ ಸಮುದಾಯದೊಳಗೆ ಭಯ ಸೃಷ್ಟಿಸಿ ಅವರನ್ನು ಪ್ರತ್ಯೇಕಿಸುವ ಸಲುವಾಗಿ ಉಗ್ರ ಶಕ್ತಿಗಳಿಂದ ನಡೆಯುತ್ತಿರುವ ಅಭಿಯಾನದ ಭಾಗವಾಗಿ ಗುರುದ್ವಾರ ವಿರೂಪ ಘಟನೆ ನಡೆದಿದೆ. ಇದು, ಸಿಖ್‌ ಧರ್ಮ ಮತ್ತು ಕೆನಡಾ ಸಮಾಜದ ಅಡಿಪಾಯವಾಗಿರುವ ಒಳಗೊಳ್ಳುವಿಕೆ, ಗೌರವ, ಪರಸ್ಪರ ಬೆಂಬಲದ ತತ್ವಗಳನ್ನು ದುರ್ಬಲಗೊಳಿಸುತ್ತದೆ. ಇದರ ವಿರುದ್ಧ ಕೆನಡಾ ಜನತೆ ನಿಲ್ಲಬೇಕು’ ಎಂದು ಹೇಳಿದೆ.

ಅತ್ತ, ವ್ಯಾಂಕೋವರ್‌ ಪೊಲೀಸ್‌ ಇಲಾಖೆಯ ವಕ್ತಾರ ಮಾತನಾಡಿ, ‘ಗೋಡೆಯ ಮೇಲೆ ಶನಿವಾರ ಬರೆಯಲಾದ ಮುರ್ದಾಬಾದ್‌ ಪದವನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಲಾಗುವುದು’ ಎಂದು ಹೇಳಿದರು.

ಶೇಖ್‌ ಹಸೀನಾ ವಿರುದ್ಧ ರೆಡ್‌ಕಾರ್ನರ್‌ ನೋಟಿಸ್‌ಗೆ ಮೊರೆ
ಢಾಕಾ: ಬಾಂಗ್ಲಾದೇಶ ಪದಚ್ಯುತ ಪ್ರಧಾನಿ ಶೇಖ್‌ ಹಸೀನಾ ವಿರುದ್ಧ ರೆಡ್‌ಕಾರ್ನರ್‌ ನೋಟಿಸ್‌ ಹೊರಡಿಸುವಂತೆ ಜಾಗತಿಕ ತನಿಖಾ ಸಂಸ್ಥೆ ಆಗಿರುವ ಇಂಟರ್‌ಪೋಲ್‌ಗೆ ಬಾಂಗ್ಲಾ ಪೊಲೀಸರು ಮನವಿ ಮಾಡಿದ್ದಾರೆ.

ವಿದ್ಯಾರ್ಥಿ ದಂಗೆ ಹಿನ್ನೆಲೆಯಲ್ಲಿ ಹಸೀನಾ ಅವರು ಆ.5ರಂದು ಭಾರತಕ್ಕೆ ಪಲಾಯನ ಮಾಡಿದ್ದರು. ಭಾರತದಿಂದ ಹಸೀನಾ ಅವರನ್ನು ಗಡೀಪಾರು ಮಾಡುವಂತೆ ಅಂದಿನಿಂದಲೂ ಮೊಹಮ್ಮದ್ ಯೂನಸ್‌ ನೇತೃತ್ವದ ಬಾಂಗ್ಲಾ ಮಧ್ಯಂತರ ಸರ್ಕಾರ ಒತ್ತಾಯಿಸುತ್ತಲೇ ಇದೆ. ಆದರೆ ಅದು ಫಲ ನೀಡಿಲ್ಲ. ಇದರ ಬೆನ್ನಲ್ಲೇ ಯೂನಸ್‌ ಸರ್ಕಾರ ಪತನಕ್ಕೆ ಷಡ್ಯಂತ್ರ ರೂಪಿಸಿದ ಆರೋಪದ ಮೇರೆಗೆ ಹಸೀನಾ ಹಾಗೂ ಇತರ 11 ಮಂದಿ ವಿರುದ್ಧ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ಬಾಂಗ್ಲಾ ಘಟನೆ ಬೆನ್ನಲ್ಲೇ, ಪಾಕ್‌ ಹಿಂದೂ ಸಚಿವ ಖೇಲ್‌ದಾಸ್‌ ಕೊಹಿಸ್ತಾನಿ ಮೇಲೆಯೂ ಹಲ್ಲೆ!

ಬಾಂಗ್ಲಾ ಪೊಲೀಸರು ಈಗಾಗಲೇ ಶೇಖ್‌ ಹಸೀನಾ ಮತ್ತು ಇತರೆ 72 ಮಂದಿ ವಿರುದ್ಧ ನಾಗರಿಕ ದಂಗೆ ಮತ್ತು ಮಧ್ಯಂತರ ಸರ್ಕಾರ ಪತನಕ್ಕೆ ಸಂಚು ರೂಪಿಸಿದ ಆರೋಪ ಹೊರಿಸಿ ಪ್ರಕರಣ ದಾಖಲಿಸಿದೆ. ಹಸೀನಾ ವಿರುದ್ಧ ಸಾಮೂಹಿಕ ಹತ್ಯೆ ಮತ್ತು ಭ್ರಷ್ಟಾಚಾರಕ್ಕೆ ಸಂಬಂಧಿಸಿದ 100ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಾಗಿದೆ.