* ಬಾಂಗ್ಲಾ ಹಿಂದೂಗಳ ಮೇಲೆ ಹಿಂಸೆ: ಕಠಿಣ ಕ್ರಮಕ್ಕೆ ಹಸೀನಾ ಆದೇಶ* ದಾಳಿಕೋರರ ಮೇಲೆ ಕಠಿಣ ಕ್ರಮ* ಗೃಹ ಸಚಿವರಿಗೆ ಬಾಂಗ್ಲಾ ಪ್ರಧಾನಿ ತಾಕೀತು* ಸಾಮಾಜಿಕ ಮಾಧ್ಯಮಗಳಲ್ಲಿನ ಪೋಸ್ಟ್‌ ನಂಬದಂತೆ ಮನವಿ* ಈವರೆಗೆ 450 ದುಷ್ಕರ್ಮಿಗಳ ಬಂಧನ

ಢಾಕಾ(ಅ.20): ಬಾಂಗ್ಲಾದೇಶದಲ್ಲಿ(Bangladesh) ಹಿಂದೂಗಳು ಹಾಗೂ ಹಿಂದೂ ದೇವಾಲಯಗಳ(Hindu Temple) ಮೇಲೆ ನಡೆದಿರುವ ದಾಳಿ ಪ್ರಕರಣಕ್ಕೆ ಸಂಬಂಧಿಸಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ(bangladesh Prime Minister Sheikh Hasina) ಗೃಹ ಖಾತೆ(Home Minister) ಸಚಿವರಿಗೆ ಸೂಚನೆ ನೀಡಿದ್ದಾರೆ.

Add Asianetnews Kannada as a Preferred SourcegooglePreferred

ಹಾಗೆಯೇ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಹೇಳಿಕೆಗಳನ್ನು ಪರಾಮರ್ಶಿಸುವಂತೆ ಜನರಲ್ಲಿ ಮನವಿ ಮಾಡಿದ್ದಾರೆ ಹಾಗೂ ಹಿಂದೂಗಳಿಗೆ ‘ಹೆದರಬೇಡಿ ನಿಮ್ಮೊಂದಿಗೆ ಸರ್ಕಾರವಿದೆ’ ಎಂದು ಭರವಸೆ ನೀಡಿದ್ದಾರೆ.

ಇದೇ ವೇಳೆ, ಅಲ್ಪಸಂಖ್ಯಾತ ಹಿಂದೂಗಳು ಹಾಗೂ ದೇವಸ್ಥಾನಗಳ ಮೇಲೆ ದಾಳಿ ನಡೆಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಂಗಳವಾರದವರೆಗೆ ಸುಮಾರು 450 ಜನರನ್ನು ಪೊಲೀಸರ ಬಂಧಿಸಿದ್ದಾರೆ ಹಾಗೂ 71 ಪ್ರಕರಣಗಳನ್ನು ದಾಖಲಿಸಿದ್ದಾರೆ.

ಕಳೆದ ವಾರ ದುರ್ಗಾ ಪೂಜೆಯ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ತಪ್ಪು ಸಂದೇಶದಿಂದಾಗಿ ದುಷ್ಕರ್ಮಿಗಳು ಹಿಂದೂಗಳು ಹಾಗೂ ಹಿಂದೂ ದೇವಸ್ಥಾನಗಳ ಮೇಲೆ ದಾಳಿ ನಡೆಸಿದ್ದರು. ಈ ಘಟನೆಯಲ್ಲಿ 6 ಮಂದಿ ಮೃತರಾಗಿದ್ದರು. ಭಾನುವಾರ ರಾತ್ರಿ ಉದ್ರಿಕ್ತ ಗುಂಪೊಂದು 66 ಮನೆಗಳನ್ನು ನಾಶಗೊಳಿಸಿ, 20ಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಹಚ್ಚಿದ ದುರ್ಘಟನೆ ನಡೆದಿತ್ತು.

ಈ ಬಗ್ಗೆ ಮಂಗಳವಾರ ನಡೆದ ಬಾಂಗ್ಲಾ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪವಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಹಸೀನಾ, ‘ಈ ಕುರಿತು ತನಿಖೆ ಆರಂಭಿಸಿ ಕೂಡಲೇ ವರದಿ ನೀಡಬೇಕು. ಈ ಘಟನೆಗಳಿಗೆ ಸಂಬಂಧಿಸಿದ ಪ್ರತಿಯೊಬ್ಬರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಗೃಹ ಸಚಿವಾಲಯ ಹಾಗೂ ಪೊಲೀಸರಿಗೆ ಸೂಚಿಸಿದರು. ‘ಹಿಂದೂಗಳ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಅಂಜಬೇಡಿ’ ಎಂದು ಅಭಯ ನೀಡಿದರು.