ಗಡಿಯಲ್ಲಿ ಮತ್ತೆ ಚೀನಿ ಸೇನೆ ಜಮೆ| ಲಡಾಖಲ್ಲಿ ಡ್ರ್ಯಾಗನ್‌ ಪುಂಡಾಟ| ಸೈನಿಕರ ನಿಯೋಜನೆ ಬೇಡವೆಂದು ಹೇಳಿ ಉಲ್ಟಾ| ಭಾರತ ಪ್ರತಿಸಡ್ಡು: ಗಡಿಗೆ ಹೆಚ್ಚಿನ ಸೇನೆ ರವಾನೆ| ಭಾರಿ ಚಳೀಲಿ ಎರಡೂ ಸೇನೆಗಳ ಮುಖಾಮುಖಿ

ನವದೆಹಲಿ(ಜ.25): ತ್ವೇಷಮಯ ಪರಿಸ್ಥಿತಿ ನಿರ್ಮಾಣವಾಗಿರುವ ಪೂರ್ವ ಲಡಾಖ್‌ ಗಡಿಗೆ ಹೆಚ್ಚುವರಿ ಪಡೆಗಳ ನಿಯೋಜನೆಯನ್ನು ಸ್ಥಗಿತಗೊಳಿಸೋಣ ಎಂದು ಭಾರತದ ಮನವೊಲಿಸಿ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದ ಚೀನಾ ಈಗ ಉಲ್ಟಾಹೊಡೆದಿದೆ. ಸದ್ದಿಲ್ಲದೆ ಗಡಿಯಲ್ಲಿ ಭಾರಿ ಸಂಖ್ಯೆಯಲ್ಲಿ ಯೋಧರನ್ನು ಜಮಾವಣೆ ಮಾಡುವ ಮೂಲಕ ತನ್ನ ನೈಜ ಬುದ್ಧಿಯನ್ನು ಮತ್ತೊಮ್ಮೆ ಅನಾವರಣ ಮಾಡಿದೆ. ಹೀಗಾಗಿ ಭಾರತ ಕೂಡ ಅನಿವಾರ್ಯವಾಗಿ ಹೆಚ್ಚಿನ ಯೋಧರನ್ನು ಗಡಿಗೆ ರವಾನಿಸಿದೆ.

Add Asianetnews Kannada as a Preferred SourcegooglePreferred

ಈ ಬೆಳವಣಿಗೆಯಿಂದಾಗಿ ಪೂರ್ವ ಲಡಾಖ್‌ ಗಡಿಯಲ್ಲಿ ಉಷ್ಣಾಂಶ ಭಾರಿ ಕಡಿಮೆ ಇದ್ದರೂ ಎರಡೂ ದೇಶಗಳ ಪಡೆಗಳು, ಟ್ಯಾಂಕ್‌ ಹಾಗೂ ಶಸ್ತ್ರಸಜ್ಜಿತ ಸಿಬ್ಬಂದಿ ಕಳೆದ ನಾಲ್ಕು ತಿಂಗಳ ಬಳಿಕ ಮತ್ತಷ್ಟುಹತ್ತಿರವಾಗಿ ಮುಖಾಮುಖಿಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

ಕಳೆದ ಮೇನಿಂದ ಪೂರ್ವ ಲಡಾಖ್‌ ಗಡಿಯಲ್ಲಿ ಸಂಘರ್ಷದ ವಾತಾವರಣ ನಿರ್ಮಾಣವಾಗಿದೆ. 2020ರ ಸೆ.21ರಂದು ಎರಡೂ ದೇಶಗಳ ನಡುವೆ 6ನೇ ಸುತ್ತಿನ ಮಾತುಕತೆ ನಡೆದಿತ್ತು. ಅದಾದ ಮರುದಿನವೇ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದ ಉಭಯ ದೇಶಗಳು, ಗಡಿ ಪ್ರದೇಶಕ್ಕೆ ಹೆಚ್ಚಿನ ಪ್ರಮಾಣದ ಸೇನಾಪಡೆಗಳನ್ನು ರವಾನಿಸುವುದನ್ನು ನಿಲ್ಲಿಸಬೇಕು, ಗಡಿಯಲ್ಲಿ ಏಕಪಕ್ಷೀಯವಾಗಿ ಪರಿಸ್ಥಿತಿ ಬದಲಿಸಬಾರದು ಎಂಬ ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದ್ದವು. ಹೀಗಾಗಿ ಉಭಯ ದೇಶಗಳ ನಡುವಣ ವಿವಾದ ಬಗೆಹರಿಯಬಹುದು ಎಂಬ ಆಶಾವಾದ ಮೂಡಿತ್ತು. ಆದರೆ ಇದೀಗ ಭಾರತಕ್ಕೆ ತಿಳಿಸದೆ ಏಕಾಏಕಿ ಹೆಚ್ಚಿನ ಸಂಖ್ಯೆಯ ಪಡೆಗಳನ್ನು ಬಿಕ್ಕಟ್ಟಿನ ಪ್ರದೇಶಕ್ಕೆ ರವಾನಿಸಿದೆ ಎಂದು ವರದಿಗಳು ವಿವರಿಸಿವೆ.