ಪಿಎಂ ಮೋದಿಯ ಎರಡು ಫೋನ್ ಕರೆ, ಉಕ್ರೇನ್ನ ಸುಮಿಯಲ್ಲಿ ಸಿಲುಕಿದ ಭಾರತೀಯ ವಿದ್ಯಾರ್ಥಿಗಳೆಲ್ಲಾ ಸೇಫ್!
* ಉಕ್ರೇನ್ನ ಯುದ್ಧ ಪೀಡಿತ ಸುಮಿ ನಗರದಲ್ಲಿ ಸಿಲುಕಿದ್ದ 650 ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು
* ರಷ್ಯಾ ದಾಳಿ, ಶೆಲ್ಲಿಂಗ್ನಿಂದ ಭಯಭೀತರಾಗಿದ್ದ ವಿದ್ಯಾರ್ಥಿಗಳು
* ಪಿಎಂ ಮೋದಿಯ ಎರಡು ಫೋನ್ ಕರೆ, ಉಕ್ರೇನ್ನ ಸುಮಿಯಲ್ಲಿ ಸಿಲುಕಿದ ಭಾರತೀಯ ವಿದ್ಯಾರ್ಥಿಗಳೆಲ್ಲಾ ಸೇಫ್
ಸುಮಿ(ಮಾ.09): ಹಲವಾರು ದಿನಗಳ ಅನಿಶ್ಚಿತತೆ ಮತ್ತು ಮಾತುಕತೆಗಳ ನಂತರ, ಉಕ್ರೇನ್ನ ಯುದ್ಧ ಪೀಡಿತ ಸುಮಿ ನಗರದಲ್ಲಿ ಸಿಲುಕಿದ್ದ 650 ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳನ್ನು ಅಂತಿಮವಾಗಿ ರಕ್ಷಿಸಲಾಯಿತು. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ದೂರವಾಣಿ ಕರೆಗಳು ವಿದ್ಯಾರ್ಥಿಗಳ ಸ್ಥಳಾಂತರದಲ್ಲಿ ಪ್ರಮುಖ ಪಾತ್ರ ವಹಿಸಿವೆ. ಸುಮಿಯಲ್ಲಿ ಭಾರೀ ಶೆಲ್ ದಾಳಿ ಮತ್ತು ಗುಂಡಿನ ದಾಳಿಯ ನಡುವೆ, ಈ ವಿದ್ಯಾರ್ಥಿಗಳು SOS ವೀಡಿಯೊಗಳನ್ನು ಕಳುಹಿಸಿದ್ದರು ಆದರೆ ಭಾರತೀಯ ಅಧಿಕಾರಿಗಳು ಅವರಿಗೆ ಸುರಕ್ಷಿತ ಮಾರ್ಗವನ್ನು ವ್ಯವಸ್ಥೆ ಮಾಡಲು ಸಾಧ್ಯವಾಗಿರಲಿಲ್ಲ. ಈ ವಿದ್ಯಾರ್ಥಿಗಳು ತಮ್ಮ ಬಳಿ ಇರುವ ಆಹಾರ ಮತ್ತು ನೀರು ಖಾಲಿಯಾಗುತ್ತಿದೆ ಎಂದು ವೀಡಿಯೊದಲ್ಲಿ ಹೇಳಿದ್ದರು, ಸರ್ಕಾರದಿಂದ ಯಾವುದೇ ವ್ಯವಸ್ಥೆ ಮಾಡದಿದ್ದರೆ ತಾವೇ ನಗರವನ್ನು ತೊರೆಯುವುದಾಗಿ ಬೆದರಿಕೆ ಹಾಕಿದ್ದರು.
ಸುದ್ದಿ ಸಂಸ್ಥೆ ಎಎನ್ಐ ಅಧಿಕಾರಿಯೊಬ್ಬರನ್ನು ಮಾತನಾಡಿಸಿ, 'ಇದು ತುಂಬಾ ಕಷ್ಟಕರ ಮತ್ತು ಅಪಾಯಕಾರಿ ಪರಿಸ್ಥಿತಿಯಾಗಿತ್ತು. ಸೋಮವಾರ ಈ ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವ ಪ್ರಯತ್ನ ವಿಫಲವಾದ ನಂತರ ಅಪಾಯವು ಗಮನಾರ್ಹವಾಗಿ ಹೆಚ್ಚಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಪ್ರಧಾನಿ ಮೋದಿ ರಷ್ಯಾ ಮತ್ತು ಉಕ್ರೇನ್ ಅಧ್ಯಕ್ಷರೊಂದಿಗೆ ಮಾತನಾಡಿದ್ದಾರೆ ಮತ್ತು ಈ ವಿದ್ಯಾರ್ಥಿಗಳಿಗೆ ಸುರಕ್ಷಿತ ಮಾರ್ಗವನ್ನು ಕಲ್ಪಿಸುವುದಾಗಿ ಇಬ್ಬರೂ ನಾಯಕರು ಭರವಸೆ ನೀಡಿದರು. ಇಂಡಿಯನ್ ಎಕ್ಸ್ಪ್ರೆಸ್, ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ, 'ಎರಡೂ ಫೋನ್ ಕರೆಗಳಲ್ಲಿ, ನಾಯಕರು ಪ್ರಧಾನಿ ಮೋದಿಗೆ ಭಾರತೀಯ ವಿದ್ಯಾರ್ಥಿಗಳ ಸ್ಥಳಾಂತರಕ್ಕೆ ಹಸಿರು ನಿಶಾನೆ ತೋರಿಸಿದರು ಮತ್ತು 'ಸುರಕ್ಷಿತ ಮಾರ್ಗ' ನೀಡಲು ನಮಗೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ.
ಪತ್ರಿಕೆಗಳಲ್ಲಿ ಪ್ರಸಾರವಾದ ವರದಿಯನ್ವಯ ಪ್ರಧಾನಿ ಮೋದಿ ಈ ಕರೆಗಳನ್ನು ಮಾಡಿದ ಬಳಿಕ ನಂತರ, ಮಾಸ್ಕೋ ಮತ್ತು ಕೀವ್ನ ಅಧಿಕಾರಿಗಳಿಗೆ ಮಾನವೀಯ ಕಾರಿಡಾರ್ ನಿರ್ಮಿಸಲು ಸೂಚಿಸಲಾಯಿತು. ಮಂಗಳವಾರ, ಈ ವಿದ್ಯಾರ್ಥಿಗಳನ್ನು ಸುಮಿಯಿಂದ ಮಧ್ಯ ಉಕ್ರೇನ್ನ ಪೊಲ್ಟ್ವಾಗೆ ಬಸ್ನಲ್ಲಿ ಕರೆದೊಯ್ಯಲಾಯಿತು. ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ತಮ್ಮ ರಷ್ಯನ್, ಉಕ್ರೇನಿಯನ್ ಮತ್ತು ನೆರೆಯ ದೇಶಗಳ ಸಹವರ್ತಿಗಳೊಂದಿಗೆ ಈ ವಿಚಾರವಾಗಿ ನಿರಂತರ ಸಂಪರ್ಕದಲ್ಲಿದ್ದರು.
ಎಎನ್ಐ ಪ್ರಕಾರ, ಭಾರತವು ಜಿನೀವಾ ಮತ್ತು ಉಕ್ರೇನ್ನಲ್ಲಿರುವ ರೆಡ್ಕ್ರಾಸ್ನೊಂದಿಗೆ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಮಾತುಕತೆ ನಡೆಸಿದೆ. ಉಕ್ರೇನಿಯನ್ ಚಾಲಕ ರಷ್ಯಾಕ್ಕೆ ಹೋಗಲು ಇಷ್ಟವಿಲ್ಲದ ಕಾರಣ ಯುದ್ಧ ಪೀಡಿತ ಪ್ರದೇಶದಲ್ಲಿ ಬಸ್ ಅನ್ನು ಬಾಡಿಗೆಗೆ ಪಡೆಯುವುದು ಒಂದು ಸವಾಲಿಗಿಂತ ಕಡಿಮೆ ಇರಲಿಲ್ಲ ಎಂದು ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿದ್ದಾರೆ. ರಷ್ಯಾ ಅಂತಿಮವಾಗಿ ವಿದೇಶಿ ವಿದ್ಯಾರ್ಥಿಗಳಿಗೆ ಮಾನವೀಯ ಕಾರಿಡಾರ್ ಅನ್ನು ತೆರೆದಾಗ, ವಿದ್ಯಾರ್ಥಿಗಳನ್ನು ಸುಮಿಯಿಂದ ಸ್ಥಳಾಂತರಿಸಲಾಯಿತು. ಎಎನ್ಐ ಪ್ರಕಾರ, ಅವರು ಅಪಾಯದ ವಲಯವನ್ನು ದಾಟುವವರೆಗೆ ಮೌನವಾಗಿರುವಂತೆ ಕೇಳಿಕೊಳ್ಳಲಾಗಿದೆ.