Land Encroachment : ಮಾರ್ಚ್ 29 ರಂದು ವರದಿ ಸಲ್ಲಿಸಲು ಕುಲಸಚಿವರಿಗೆ ಸೂಚನೆ
ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕೋಟಿ ಕೋಟಿ ರು. ಮೌಲ್ಯದ ಜಾಗ ಭೂ ಮಾಫಿಯಾ ಪಾಲಾಗಿರುವ ವಿಚಾರವನ್ನು ವಿವಿಯ ಸಿಂಡಿಕೇಟ್ ಸಭೆ ಗಂಭೀರವಾಗಿ ಪರಿಗಣಿಸಿದೆ.
ಮಂಗಳೂರು (ಮಾ. 12): ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕೋಟಿ ಕೋಟಿ ರು. ಮೌಲ್ಯದ ಜಾಗ ಭೂ ಮಾಫಿಯಾ ಪಾಲಾಗಿರುವ ವಿಚಾರವನ್ನು ವಿವಿಯ ಸಿಂಡಿಕೇಟ್ ಸಭೆ ಗಂಭೀರವಾಗಿ ಪರಿಗಣಿಸಿದೆ. ಈ ಕುರಿತಂತೆ ಕಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಪ್ರಸಾರ ಮಾಡಿದ್ದು, ಈ ವಿಚಾರ ವಿವಿ ಸಿಂಡಿಕೇಟ್ ಸಭೆಯಲ್ಲಿ ಪ್ರಸ್ತಾಪಗೊಂಡಿತ್ತು. ಅಲ್ಲದೆ ವಿವಿ ಆಸ್ತಿ ಅತಿಕ್ರಮಣ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡುವಂತೆ ವಿವಿ ಕುಲಸಚಿವರಿಗೆ ಸೂಚನೆ ನೀಡಲಾಗಿದೆ.
ವಿವಿ ಆವರಣದಲ್ಲಿ ಇರುವ ಸುಮಾರು 50-60 ಕೋಟಿ ರು. ಮೌಲ್ಯದ 50 ಎಕರೆಯಷ್ಟುಜಾಗ ಪ್ರಭಾವಿಗಳಿಂದಲೇ ಅತಿಕ್ರಮಣ ಆಗಿರುವ ಬಗ್ಗೆ ಪರಿಶೀಲನೆ ನಡೆಸಿ ಮಾಹಿತಿ ನೀಡುವಂತೆ ಸಿಂಡಿಕೇಟ್ ಸದಸ್ಯ ವಿವೇಕಾನಂದ ಪನಿಯಾಲ ಅವರು ವಿವಿ ರಿಜಿಸ್ಟ್ರಾರ್ಗೆ ಪತ್ರ ಬರೆದಿದ್ದರು. ಆ ಬಳಿಕ ಎಚ್ಚೆತ್ತ ವಿವಿ ಆಡಳಿತ ಈ ಬಗ್ಗೆ ಪರಿಶೀಲನೆ ನಡೆಸಿದೆ. ಈ ವೇಳೆ ವಿವಿ ಜಾಗ ಅತಿಕ್ರಮಣ ಆಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಮಾ.29ರ ಮುಂದಿನ ಸಿಂಡಿಕೇಟ್ ಸಭೆಗೆ ಮುನ್ನ ಅತಿಕ್ರಮಣ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ಕುಲಸಚಿವರಿಗೆ ಸೂಚಿಸಲಾಗಿದೆ.